ಬೆಂಗಳೂರು: ಆನ್ಲೈನ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲದ ಸುಳಿವು ಪಡೆದ ಕಗ್ಗಲಿಪುರ ಠಾಣೆ ಪೊಲೀಸರು ಗಿರಾಕಿಗಳ ಸೋಗಿನಲ್ಲಿ ತೆರಳಿ ಮನೆ ಮಾಲೀಕ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ಬನಶಂಕರಿಯ ಸುಭಾಷ್, ನಾಗರಬಾವಿಯ ನರಸಿಂಹಮೂರ್ತಿ, ಪಶ್ಚಿಮ ಬಂಗಾಳದ ತಾನಿಯಾ ಇಸ್ಲಾಂ ಬಂಧಿತರು. ದಂಧೆಗೆ ಮನೆ ಬಾಡಿಗೆ ನೀಡಿದ ಮಾಲೀಕ ರಾಮನಗರದ ಚಿನ್ನಪ್ಪ ಎಂಬಾತನ ವಿರುದ್ಧವೂ ಕೇಸ್ ದಾಖಲಿಸಿ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕೆಂಟೊ ಆಪ್ನಲ್ಲಿ ವಿಳಾಸ, ಹುಡುಗಿಯರ ಫೋಟೋ, ಮೊಬೈಲ್ ನಂಬರ್ ಹಾಕಿ ಗಿರಾಕಿಗಳಿಗೆ ಆಹ್ವಾನ ನೀಡುತ್ತಿದ್ದರು. ಖಚಿತ ಮಾಹಿತಿ ಪಡೆದ ರಾಮನಗರ ಎಸ್ಪಿ ಡಾ. ಅನೂಪ್ ಎ. ಶೆಟ್ಟಿ ಅಕ್ರಮ ದಂಧೆ ಪತ್ತೆಹಚ್ಚಲು ಡಿವೈಎಸ್ಪಿ ಪುರುಷೋತ್ತಮ್ೆ ಸೂಚನೆ ನೀಡಿದ್ದರು. ಇವರ ಮಾರ್ಗ ದರ್ಶನದಲ್ಲಿ ಇನ್ಸ್ಪೆಕ್ಟರ್ ಪ್ರಕಾಶ್, ಪಿಎಸ್ಐ ಗೋವಿಂದ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಬಲೆಬೀಸಿತ್ತು.
ಫೋನ್ ಮಾಡಿದರು: ಲೋಕೆಂಟೊ ಆಪ್ನಲ್ಲಿ ಕನಕಪುರ ರಸ್ತೆ ಎಂದು ಟೈಪ್ ಮಾಡಿದಾಗ ಮೊಬೈಲ್ ನಂಬರ್ ಬಂದಿದೆ. ಕರೆ ಮಾಡಿದಾಗ ರಾಜು ಎಂಬಾತ ಸ್ವೀಕರಿಸಿ ನಾಗರಾಜು ನಂಬರ್ ನೀಡಿದ್ದಾನೆ. ಆ ನಂಬರ್ಗೆ ಕರೆ ಮಾಡಿದಾಗ ನಿಮ್ಮ ಮೊಬೈಲ್ಗೆ ಕರೆ ಮಾಡುವುದಾಗಿ ಕರೆ ಕಟ್ ಮಾಡಿದ್ದರು.
ಸ್ವಲ್ಪ ಸಮಯದ ಬಳಿಕ ಮಫ್ತಿ ಪೊಲೀಸರಿಗೆ ಕರೆ ಮಾಡಿದ ಆರೋಪಿ, ತಾತಗುಣಿ ಬಳಿಯ ಖಾಸಗಿ ಕಾಲೇಜು ಬಳಿಗೆ ಬರುವಂತೆ ಹೇಳಿದ್ದರು. ಮಫ್ತಿ ಪೊಲೀಸರು ಅಲ್ಲಿಗೆ ಹೋದಾಗ ಕೈ ಸನ್ನೆ ಮಾಡಿ ನಾಗರಾಜು ಎಂಬಾತ ಕರೆದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತ ಅರಸಪ್ಪ ಲೇಔಟ್ಗೆ ಕರೆದೊಯ್ದು ಮನೆ ತೋರಿಸಿದ್ದು, ಅಲಿದ್ದ ಉಳಿದ ಆರೋಪಿಗಳನ್ನು ಬಂಧಿಸಿ ಸಂತ್ರಸ್ತೆಯನ್ನು ರಕ್ಷಣೆ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಡಿಗೆ ನೀಡಿದ ಮನೆ ಮಾಲೀಕರ ವಿರುದ್ಧ ಕ್ರಮ
ಬೆಂಗಳೂರಿನಲ್ಲಿ ಕುಳಿತು ಆನ್ಲೈನ್ನಲ್ಲಿ ಗಿರಾಕಿಗಳನ್ನು ಸಂಪರ್ಕ ಮಾಡಿ ನಗರ ಹೊರ ವಲಯದಲ್ಲಿ ಮನೆಗಳ ಆಶ್ರಯ ನೀಡುತ್ತಿದ್ದಾರೆ. ಇದರಿಂದ ಹಳ್ಳಿಯ ಪರಿಸರಕ್ಕೂ ಧಕ್ಕೆ ಆಗುತ್ತಿತ್ತು. ಕೆಲವರು ಅಕ್ರಮ ಚಟುವಟಿಕೆಗಳಿಗೆ ಮನೆ ಬಾಡಿಗೆ ಕೊಡುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು, ಕಟ್ಟಡ ಮಾಲೀಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Comments are closed.