ಬೆಂಗಳೂರು: “ಬಿಜೆಪಿ ನಿರೀಕ್ಷೆ ಮಾಡದ ರೀತಿಯಲ್ಲಿ ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಈ ಮೂಲಕ ಜನತೆ ನಮಗೆ ದೊಡ್ಡ ಜವಬ್ದಾರಿಯನ್ನೇ ನೀಡಿದ್ದಾರೆ. ನಾವು ಹೇಗೆ ಈ ಜವಬ್ದಾರಿ ನಿರ್ವಹಿಸುತ್ತೇವೆ? ಎನ್ನುವುದರ ಮೇಲೆ ಪಕ್ಷದ ಭವಿಷ್ಯ ನಿಂತಿದೆ. ನಮ್ಮ 25 ಸಂಸದರು ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದೂ ಸತ್ತಂತಾಗಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತಾಡಿದ ಇವರು, ಈ ಸರ್ಕಾರ ಇದ್ದು ಸತ್ತಂತೆ ಆಗಿದೆ. ವಿಧಾನಸೌಧ ಖಾಲಿ ಹೋಡಿತಿದೆ. ಗ್ರಾಮ ವಾಸ್ತವ್ಯ ಮಾಡ್ತೇನೆ ಎಂದು ಸಿಎಂ ಕುಮಾರಸ್ವಾಮಿ ನಾಟಕ ಮಾಡುತ್ತಿದ್ದಾರೆ. ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮ ಈಗ ಹೇಗಿದೆ ಎನ್ನುವುದು ಗೊತ್ತಿಲ್ಲ. ಅದಾಗಲೇ ಶಾಲಾ ವಾಸ್ತವ್ಯಕ್ಕೆ ಹೊರಟಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಬಗ್ಗೆ ವ್ಯಂಗ್ಯವಾಡಿದರು.
ಇನ್ನು ರಾಜ್ಯದಲ್ಲಿ ಭೀಕರ ಬರಗಾಲ ಇದೆ, ಸಚಿವರು ಅಂತಹ ಕ್ಷೇತ್ರಗಳಿಗೆ ಹೋಗುತ್ತಿಲ್ಲ. ಜಿಂದಾಲ್ಗೆ 3667 ಎಕರೆ ಭೂಮಿ ನೀಡಿದನ್ನ ಖಂಡಿಸುತ್ತೇನೆ. ಈ ಬಗ್ಗೆ ಹೋರಾಟ ಮಾಡುತ್ತೇವೆ. ಜಿಂದಾಲ್ಗೆ ಭೂಮಿ ಲೀಸ್ ಬೇಕಾದರೆ ನೀಡಲಿ. ಅದನ್ನು ಬಿಟ್ಟು ಮಾರಾಟ ಮಾಡಲು ಬಿಡೋದಿಲ್ಲ ಎಂದು ಖಡಕ್ಕಾಗಿಯೇ ಎಚ್ಚರಿಕೆ ನೀಡಿದರು.
ಹೀಗೆ ಮಾತು ಮುಂದುವರೆಸಿದ ಬಿಜೆಪಿ ರಾಜ್ಯಾಧ್ಯಕ್ಷ, ಜಿಂದಾಲ್ಗೆ ಭೂಮಿ ಮಾರಾಟ ವಿಚಾರ ತುಂಬಾ ಗಂಭೀರವಾಗಿ ಪರಿಗಣಿಸಬೇಕಿದೆ. ಕೇಂದ್ರ ಸಚಿವರಾದ ಸದಾನಂದ ಗೌಡ, ಸುರೇಶ್ ಅಂಗಡಿ ಈ ಭೂಮಿ ಮಾರಾಟ ಆಗದಂತೆ ನೋಡಿಕೊಳ್ಳಬೇಕು. ಭೂಮಿ ಮಾರಾಟ ಆಗದಂತೆ ಕೇಂದ್ರ ಸಚಿವರು ಎಚ್ಚರಿಕೆ ವಹಿಸಬೇಕು. ಅಗತ್ಯಬಿದ್ದಲ್ಲಿ ರಾಜ್ಯ ಸರ್ಕಾರದ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿಯವರ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ದಲಿತರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ರಾಜ್ಯದ ಒಬ್ಬ ದಲಿತ ಸಂಸದರನ್ನು ನಾವು ಕೇಂದ್ರ ಮಂತ್ರಿಯನ್ನಾಗಿ ಮಾಡುತ್ತೇವೆ. ಈ ಬಗ್ಗೆ ನಾನು, ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ನಮ್ಮ ಸಂಸದರು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಜೊತೆಗೆ ಮಾತಾಡುತ್ತೇವೆ. ನಿಮಗೆ ತಾಕತ್ತಿದ್ದರೇ ಡಾ.ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಈ ಹಿಂದೆಯಷ್ಟೇ ಬಿಜೆಪಿ ಬಿ.ಎಸ್ ಯಡಿಯೂರಪ್ಪನವರು ಕಾಂಗ್ರೆಸ್ಗೆ ಸವಾಲ್ ಎಸೆದಿದ್ದರು.
Comments are closed.