ಕರ್ನಾಟಕ

ಮತಯಂತ್ರಗಳ ವಿರುದ್ಧ ಮತ್ತೆ ಎದ್ದ ಅಪಸ್ವರ; ದೇಶದಲ್ಲಿ ಮೋದಿ ಅಲೆ ಇದೆ ಎಂಬುದನ್ನು ಬಿಂಬಿಸಲು ಈ ಸಮೀಕ್ಷೆ: ಸಿಎಂ ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು : ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನು ಮೂರು ದಿನ ಬಾಕಿಯಿರುವಾಗ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳು ಎನ್​ಡಿಎ ಮೈತ್ರಿ ಕೂಟ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶದ ಹೊರ ಬೀಳುತ್ತಿದ್ದಂತೆ ಮತ್ತೊಮ್ಮೆ ಮತಯಂತ್ರಗಳ ಸಾಚಾತನದ ಬಗ್ಗೆ ವಿಪಕ್ಷಗಳು ಪ್ರಶ್ನಿಸಿವೆ.

ಮತಯಂತ್ರಗಳ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಕೂಡ ಧ್ವನಿ ಎತ್ತಿದ್ದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸರಣಿ ಟ್ವೀಟ್​ ಮಾಡಿದ್ದಾರೆ.

ದೇಶದಲ್ಲಿ ಮೋದಿ ಅಲೆ ಇದೆ ಎಂಬುದನ್ನು ಬಿಂಬಿಸಲು ಈ ಸಮೀಕ್ಷೆ ಮಾಡಲಾಗಿದೆ. ಮೇ 23ರ ಫಲಿತಾಂಶದ ನಂತರ ನೈಜ ಸ್ಥಿತಿ ಏನೆಂಬುದು ತಿಳಿಯಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇವಿಎಂ ವಿಶ್ವಾಸ ಕುರಿತು ಎಲ್ಲ ವಿಪಕ್ಷಗಳು ಪ್ರಶ್ನಿಸಿ ಧ್ವನಿ ಎತ್ತಿದ್ದವು. ಅಷ್ಟೇ ಅಲ್ಲದೆ ಈ ಕುರಿತು ವಿಪಕ್ಷಗಳು ಸುಪ್ರೀಂ ಕೋರ್ಟ್​ ಬಾಗಿಲು ತಟ್ಟಿ, ಚುನಾವಣೆಯಲ್ಲಿ ಇವಿಎಂ ಬಳಕೆ ರದ್ದು ಮಾಡುವಂತೆ ಕೋರಿದ್ದವು ಎಂದು ತಿಳಿಸಿದ್ದಾರೆ.

ಪ್ರಪಂಚದ ಅನೇಕ ಮುಂದುವರೆದ ರಾಷ್ಟ್ರಗಳು ಬ್ಯಾಲೆಟ್​ ಪೇಪರ್​ ಅನ್ನೇ ಅಳವಡಿಸಿಕೊಂಡಿದೆ. ಇವಿಎಂಗಳು ವಿಶ್ವಾಸನೀಯವಲ್ಲ ಎಂದು ಹೇಳಲಾಗಿದೆ ಎನ್ನುವ ಮೂಲಕ ಇವಿಎಂ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.

ಆಡಳಿತ ಪಕ್ಷ ತಮ್ಮ ಲಾಭಕ್ಕಾಗಿ ಇವಿಎಂಗಳನ್ನು ಬಳಸುವ ಸಾಧ್ಯತೆ ಬಗ್ಗೆ ವಿಪಕ್ಷಗಳು ಕಳವಳ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮೋದಿ ಅಲೆಯನ್ನು ಮೂಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇನ್ನೂ ಮೋದಿ ಅಲೆಯಿದೆ ಎನ್ನಲು ಈ ಸಮೀಕ್ಷೆಗಳನ್ನು ನಡೆಸಿ ಬಿಜೆಪಿ ಪರ ಕೃತಕ ಅಲೆಯೆಬ್ಬಿಸಲು ಬಿಜೆಪಿ ಮುಂದಾಗಿದೆ. ಈ ಸಮೀಕ್ಷೆಗಳ ಹಿಂದೆ ಬಿಜೆಪಿ ಕೈವಾಡವಿದೆ. ಚುನಾವಣೋತ್ತರ ಸಮೀಕ್ಷೆಗಳು ಒಂದು ನಿರ್ದಿಷ್ಟ ವ್ಯಕ್ತಿ ಹಾಗೂ ಪಕ್ಷದ ಪರವಾಗಿ ಸುಳ್ಳು ಅಭಿಪ್ರಾಯ ಸೃಷ್ಟಿಸುವ ಪ್ರಯತ್ನವಾಗಿದೆ. ಇದು ಕೇವಲ ಸಮೀಕ್ಷೆ ಹೊರತು ಅಂತಿಮ ಫಲಿತಾಂಶವಲ್ಲ ಎಂದಿದ್ದಾರೆ.

ಬಿಜೆಪಿ ಶಾಸಕ ಸುರೇಶ್​ ಕುಮಾರ್​ ಟಾಂಗ್​​

ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸಿರುವ ಸಿಎಂ ಕುಮಾರಸ್ವಾಮಿ ಮಾತಿಗೆ ಟಾಂಗ್​ ನೀಡಿರುವ ಬಿಜೆಪಿ ನಾಯಕ ಸುರೇಶ್​ ಕುಮಾರ್​, ಚುನಾವಣೋತ್ತರ ಸಮೀಕ್ಷೆಗೆ ಹೀಗೆ ಆಡಿದರೆ, ಫಲಿತಾಂಶದ ದಿನ ಇನ್ನು ಹೇಗೆ ನಿಮ್ಮ ಸ್ಥಿತಿ ಎಂದು ವ್ಯಂಗ್ಯವಾಡಿದ್ದಾರೆ.

ಸತ್ಯವನ್ನು ಅರಗಿಸಿಕೊಳ್ಳಲಾಗದೆ ಈಗ ಇವಿಎಂ ಮೇಲೆ ತಮ್ಮ ಸೋಲಿನ ಹೊಣೆ ಕಟ್ಟುವ ಪ್ರಯತ್ನ ಇದಾಗಿದೆ. ಫಲಿತಾಂಶ ಮಹಾಘಟಬಂಧನ್ ಪಕ್ಷಗಳದ್ದು ಇನ್ನೇನಾದರೂ ಪ್ರಜಾತಂತ್ರವಿರೋಧಿ ಯೋಜನೆ-ಕಾರ್ಯಕ್ರಮ ಹಾಕಿಕೊಂಡು ಹೈಡ್ರಾಮಾ ಸೃಷ್ಟಿಸಲು ವಿಪಕ್ಷಗಳು ಮುಂದಾಗಿವೆ ಎಂದಿದ್ದಾರೆ.

Comments are closed.