
ಮಂಡ್ಯ: ಎರಡನೇ ಹಂತದ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆದಿತ್ತು. ಮೇ.23 ರಂದು ಫಲಿತಾಂಶ ಹೊರ ಬೀಳಲಿದೆ. ಆದರೆ, ಫಲಿತಾಂಶ ಹೊರ ಬೀಳುವ ಮುನ್ನವೇ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದಾಯ್ತು ಎಂದು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಶುಕ್ರವಾರ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ನಿವಾಸದ ಬಳಿ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ ಕಾರ್ಯಕರ್ತರು ನಿಖಿಲ್ಗೆ ಗುಲಾಬಿ ಹಾರ ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ ಅಲ್ಲದೆ ನಿಖಿಲ್ ಗೆದ್ದಾಗಿದೆ ಇನ್ನೂ ಅಧಿಕೃತ ಘೋಷಣೆಯೊಂದೆ ಬಾಕಿ ಎಂದು ತಿಳಿಸಿದ್ದಾರೆ.
ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ನಿಖಿಲ್ : ಮಂಡ್ಯ ಲೋಕಸಭೆ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಕೆ.ಆರ್. ಪೇಟೆಯಲ್ಲಿ ನಡೆದ ಪುರಸಭೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಹೇಳಿಕೆ ನೀಡಿದ ನಿಖಿಲ್, “ಇದೇ ತಿಂಗಳ 23 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದ್ದು, ಜನರ ತೀರ್ಪು ನನ್ನ ಪರವಾಗಿರಲಿದೆ ಎಂಬ ವಿಶ್ವಾಸವಿದೆ. ಚುನಾವಣಾ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಅಲ್ಲದೆ ನಾನು ಸೋತರೂ ಗೆದ್ದರೂ ಮಂಡ್ಯದಲ್ಲೇ ಇರ್ತೀನಿ. ಇಲ್ಲೆ ಮನೆ ಮಾಡ್ತೀನಿ” ಎಂದು ತಿಳಿಸಿದ್ದಾರೆ.
Comments are closed.