ಕರ್ನಾಟಕ

ಹಣದ ಆಸೆಗೆ ಅಪ್ರಾಪ್ತ ಮಗಳನ್ನೇ ಮಾರಾಟ; 10 ವರ್ಷಗಳವರಗೆ ಯಾರೂ ಬೇಕಾದರೂ ಸೆಕ್ಸ್ ಮಾಡಬಹುದೆಂದು ಕರಾರುಪತ್ರ ಬರೆದುಕೊಟ್ಟ ಹೆತ್ತವರು !

Pinterest LinkedIn Tumblr

ತುಮಕೂರು: ಹಣದ ಆಸೆಗೆ ವಿವಾಹದ ಹೆಸರಿನಲ್ಲಿ ಅಪ್ರಾಪ್ತ ಮಗಳನ್ನು ಹೆತ್ತವರೇ ಮಾರಾಟ ಮಾಡಿದ್ದು, 10 ವರ್ಷಗಳ ಕಾಲ ಯಾರೂ ಬೇಕಾದರೂ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಬಹುದು ಎಂದು ಕರಾರುಪತ್ರ ಬರೆದುಕೊಟ್ಟ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆಯ ಕರೇಹಳ್ಳಿ ಗ್ರಾಮದ ನಿವಾಸಿಗಳಾದ ಸುಶೀಲಮ್ಮ-ಬಸವಲಿಂಗಯ್ಯ ದಂಪತಿ ತಮ್ಮ 15 ವರ್ಷದ ಅಪ್ರಾಪ್ತೆ ಮಗಳನ್ನು ಕಳೆದ ಏ 11 ರಂದು ಅರಿವೆಸಂದ್ರ ಗ್ರಾಮದ ನಿವಾಸಿ 40 ವರ್ಷದ ಗಿರೀಶ್ ಎಂಬುವರ ಜೊತೆಗೆ ಸಿದ್ದರಬೆಟ್ಟದಲ್ಲಿ 10 ವರ್ಷಗಳ ಅವಧಿಗೆ ವಿವಾಹ ಮಾಡಿಕೊಟ್ಟಿದ್ದು, ಯಾರೂ ಬೇಕಾದರೂ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಕರಾರು ಮಾಡಿಕೊಟ್ಟಿರುತ್ತಾರೆ.

ಮಧ್ಯವರ್ತಿ ಸುನಂದಮ್ಮ ಎಂಬುವವರಿಂದ 1.50 ಲಕ್ಷ ರೂ.ಗಳನ್ನು ಪಡೆದು ಅವರಿಗೆ ಕೈಬರಹದಲ್ಲಿ ಕರಾರು ಪತ್ರ ಬರೆದುಕೊಟ್ಟಿರುತ್ತಾರೆ. ಅಲ್ಲದೇ ಇದಕ್ಕೆ ಮಗಳ ಒಪ್ಪಿಗೆಯೂ ಇದ್ದು, ನಿಮ್ಮಗಳ ಷರತ್ತುಗಳಿಗೆ ಒಪ್ಪಿರುವುದಾಗಿ ಪತ್ರದಲ್ಲಿ ಬರೆಯಲಾಗಿದೆ.

ಸ್ವಂತ ಮಗಳನ್ನು ಮಧ್ಯವರ್ತಿಗಳ ಮೂಲಕ ಬಾಲ್ಯವಿವಾಹ ಹೆಸರಿನಲ್ಲಿ ಮಾರಾಟ ಮಾಡಿದ್ದಾರೆ ಎಂದು ಬಸವಲಿಂಗಯ್ಯ-ಸುಶೀಲಮ್ಮ ಅವರ ಹಿರಿಯ ಮಗಳ ಪತಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಲಿಂಗದಹಳ್ಳಿಯ ರಾಜಶೇಖರ್ ತನ್ನ ಸ್ವಂತ ಅತ್ತೆಮಾವನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ತನ್ನ ಪತ್ನಿಯ ತಂಗಿಯನ್ನು ತಮ್ಮ ಮನೆಯಲ್ಲಿಯೇ ಸಾಕಿ ವಿದ್ಯಾಭ್ಯಾಸ ಮಾಡಿಸುತ್ತಿದ್ದು, ಎಸ್.ಎಸ್‍.ಎಲ್‍.ಸಿ ಪರೀಕ್ಷೆ ಮುಗಿಸಿರುವ ನಾದಿನಿಯನ್ನು ಮಾವ ಬಸವಲಿಂಗಯ್ಯ ಹಾಗೂ ಅತ್ತೆ ಇಬ್ಬರು ಮದುವೆ ದಳ್ಳಾಲಿ ಗಡ್ಡದ ಕೆಂಪಯ್ಯ, ಸುನಂದಮ್ಮ ಎಂಬುವರ ಮೂಲಕ ಗಿರೀಶ್ ಜೊತೆ 10 ವರ್ಷಕ್ಕೆ 10 ಲಕ್ಷ ರೂ. ಗಳಿಗೆ ಬಾಲ್ಯ ವಿವಾಹ ಮಾಡಿಕೊಡುವ ಮೂಲಕ ಮಾರಾಟ ಮಾಡಿದ್ದಾರೆ.

ಸುನಂದಮ್ಮ ಸೇರಿದಂತೆ ಗಿರೀಶ್ ಅವರ ಹೆಸರಿಗೂ ಮೂರು ಕರಾರುಪತ್ರಗಳನ್ನು ಮಾಡಿಕೊಟ್ಟಿದ್ದಾರೆ ಎಂದು ರಾಜಶೇಖರ್ ಹೇಳಿದ್ದಾರೆ.

ಕರಾರುಪತ್ರಗಳನ್ನು ಬಹಿರಂಗ ಪಡಿಸಿರುವ ರಾಜಶೇಖರ್, ಬಸವಲಿಂಗಯ್ಯ-ಸುಶೀಲಮ್ಮ ದಂಪತಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಮತ್ತು ರಕ್ಷಣಾ ಇಲಾಖೆಗೆ ದೂರು ನೀಡಿದ್ದಾರೆ.

ಸದ್ಯ ಬಸವಲಿಂಗಪ್ಪ-ಸುಶೀಲಮ್ಮ ಬಾಲಕಿ ಜೊತೆ ನಾಪತ್ತೆಯಾಗಿದ್ದು, ಕಳೆದ 10 ದಿನಗಳಿಂದ ಅವರು ವಾಸವಿದ್ದ ತೋಟದ ಮನೆಯ ಬಾಗಿಲು ಮುಚ್ಚಿದೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯಿಂದಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ

Comments are closed.