ಕಲಬುರಗಿ: ‘ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ’ ಬಿಜೆಪಿ ಏನೆಂದು ಗೊತ್ತಾಗುತ್ತಿಲ್ಲ. ನಿಮ್ಮ ಕಾಲಿಗೆ ಬಿದ್ದು ಕೇಳುತ್ತೇನೆ ನನಗೆ ಸಹಕಾರ ನೀಡಬೇಕು ಎಂದು ಡಾ. ಉಮೇಶ್ ಜಾಧವ್ ಹೇಳಿಕೆ ನೀಡಿದ್ದಾರೆ.
ಇಲ್ಲಿ ನಡೆದ ದಲಿತಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರು, ನನಗೆ ಬಿಜೆಪಿ ಪಕ್ಷ ಸರಿಹೊಗುತ್ತಿಲ್ಲ. ನನ್ನ ಗೆಲುವಿಗೆ ನೀವು ಸಹಕಾರ ನೀಡಬೇಕು. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುವೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರಿಗೆ ಕೈಮುಗಿದು ಕೇಳಿಕೊಂಡಿದ್ದಾರೆ. ಜಾಧವ್ ಅವರ ಈ ಹೇಳಿಕೆಯಿಂದ ಬಿಜೆಪಿಗೆ ಇರಿಸುಮುರಿಸು ಉಂಟಾಗಿದೆ.
ಜಾಧವ್ ಅವರ ಈ ಹೇಳಿಕೆಯಿಂದ ರಾಜ್ಯದ ಬಿಜೆಪಿ ನಾಯಕರು ತಬ್ಬಿಬ್ಬುಗೊಂಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಪಕ್ಷವನ್ನು ನಂಬಿಕೊಂಡಿದ್ದರೆ ನನಗೆ ಸೋಲು ಖಚಿತ. ಆದ್ದರಿಂದ ನೀವು ನನ್ನ ಗೆಲುವಿಗೆ ಸಹಾಯ ಮಾಡಬೇಕು ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.
ಅನೇಕ ನಿವೃತ್ತಿ ಐಎಎಸ್ ಅಧಿಕಾರಿಗಳು ನನಗೆ ಚುನಾವಣೆಯಲ್ಲಿ ನಿಲ್ಲುವಂತೆ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಬಹಳ ನೋವುಂಟು ಮಾಡಿದ್ದಾರೆ. ಅದಕ್ಕೆ ನೀವು ಚುನಾವಣೆಗೆ ನಿಲ್ಲಬೇಕು ನಾವೆಲ್ಲರು ನಿಮಗೆ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದ್ದರು ಎಂದು ಜಾಧವ್ ಮಾತನಾಡಿದ್ದಾರೆ. ನಮ್ಮ ಮನೆಗೆ ನೀವು ದಿನದ 24 ಗಂಟೆಯಲ್ಲಿ ಯಾವ ಸಮಯದಲ್ಲಿ ಬೇಕಾದರೂ ಬಂದು ಕೈ ಹಿಡಿದು ಕೆಲಸ ಮಾಡಿಕೊಳ್ಳಬಹುದು ಎಂದು ಕಲಬುರಗಿ ಜನತೆಗೆ ಉಮೇಶ್ ಜಾಥವ್ ಆಶ್ವಾಸನೆ ನೀಡಿದ್ದಾರೆ.
Comments are closed.