ಕರ್ನಾಟಕ

ಹನಿಟ್ರ್ಯಾಪ್  ಮುಖಾಂತರ ಉದ್ಯಮಿಯಿಂದ ಲಕ್ಷಾಂತರ ಲೂಟಿ ಮಾಡಿದ ಯುವತಿ ಬಂಧನ

Pinterest LinkedIn Tumblr


ಬೆಂಗಳೂರು: ಶ್ರೀಮಂತ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮೂಲಕ ಲಕ್ಷ ಲಕ್ಷ ಹಣ ಪೀಕುತ್ತಿದ್ದ ಯುವತಿಯನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ವಿನುತಾ ವಿಜಯಲಕ್ಷ್ಮಿ ಬಂಧಿತ ಆರೋಪಿ. ಪ್ರಕರಣದ ಮತ್ತೊಬ್ಬರು ಆರೋಪಿ ಯತೀಶ್ ಮತ್ತು ಸೀನಾ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹಾನಿಟ್ರ್ಯಾಪ್ ಹೇಗೆ?
ಶ್ರೀಮಂತ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಮೊದಲು ಅವರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದರು. ಬಳಿಕ ಆರೋಪಿ ವಿನುತಾ ಉದ್ಯಮಿಗಳೊಂದಿಗೆ ಸಲುಗೆ ಬೆಳೆಸಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದಳು. ಬಳಿಕ ತಮ್ಮ ಬಳಿ ಫೋಟೋ ಹಾಗೂ ವಿಡಿಯೋ ಇದೆ ಎಂದು ಹೇಳಿ ಬ್ಲಾಕ್ ಮೇಲ್ ಮಾಡುತ್ತಿದ್ದರು. ಅಲ್ಲದೇ ಹಣ ನೀಡದಿದ್ದರೆ ಫೋಟೋ ಹಾಗೂ ವಿಡಿಯೋವನ್ನ ಕುಟುಂಬದವರಿಗೆ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದರು.

ಇದೇ ದಂಧೆ ಮಾಡಿಕೊಂಡಿದ್ದ ಆರೋಪಿಗಳು ಉದ್ಯಮಿಗಳಿಂದ ಲಕ್ಷ ಲಕ್ಷ ರೂ. ಹಣ ಪಡೆಯುತ್ತಿದ್ದರು. ಅಂದಹಾಗೇ ಸದ್ಯ ತಲೆ ಮರೆಸಿಕೊಂಡಿರುವ ಆರೋಪಿ ಯತೀಶ್ ಹಾಗೂ ವಿನುತಾ ಪ್ರೇಮಿಗಳಾಗಿದ್ದು, ಯತೀಶ್ ಆಕೆಯನ್ನ ಮುಂದಿಟ್ಟುಕೊಂಡೆ ಹನಿಟ್ರ್ಯಾಪ್ ಮಾಡುತ್ತಿದ್ದ. ಆರೋಪಿಗಳಿಂದ ಹನಿಟ್ರ್ಯಾಪ್‍ಗೆ ಒಳಗಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕುಪೇಂದ್ರ ಎಂಬವರು ನಗರದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿನುತಾಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಯತೀಶ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Comments are closed.