ಬೆಂಗಳೂರು: ಇತ್ತೀಚೆಗೆ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ ಆ ಬಗ್ಗೆ ಎಚ್ಚರ ವಹಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿದೆ ಎಂಬುದು ಸುಳ್ಳಲ್ಲ. ಏನಾದರೂ ಅಪರಾಧ ನಡೆದರೆ ಕಾಪಾಡಲು ಪೊಲೀಸ್ ಇಲಾಖೆಯಿದೆ ಎಂದು ಸಮಾಧಾನಪಟ್ಟುಕೊಳ್ಳುತ್ತೇವೆ. ಆದರೆ, ಪೊಲೀಸರೇ ಯಾಮಾರುತ್ತಾರೆಂದರೆ ನಂಬಲು ಸ್ವಲ್ಪ ಕಷ್ಟವಾಗಬಹುದು. ಆದರೆ, ಇದು ನಿಜ.
ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯೇ ಈ ಸೈಬರ್ ಕ್ರೈಮ್ ಸುಳಿಯೊಳಗೆ ಸಿಲುಕಿದ್ದಾರೆ ಎಂದರೆ ಆಶ್ಚರ್ಯಪಡಲೇಬೇಕು. ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಮುಖ್ಯಸ್ಥ ಆಶಿತ್ ಮೋಹನ್ ಪ್ರಸಾದ್ ಸೈಬರ್ ಕ್ರೈಮ್ ಜಾಲದೊಳಗೆ ಸಿಲುಕಿ 2 ಲಕ್ಷ ಹಣ ಕಳೆದುಕೊಂಡಿದ್ದಾರೆ. ಇದರಿಂದ ಕರ್ನಾಟಕ ಪೊಲೀಸ್ ಇಲಾಖೆ ಮುಜುಗರ ಅನುಭವಿಸುವಂತಾಗಿದೆ.
ಕಳೆದುಕೊಂಡಿದ್ದು ಸಣ್ಣ ಮೊತ್ತವಲ್ಲ:
ಎ.ಎಂ. ಪ್ರಸಾದ್ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಗಳಲ್ಲೊಬ್ಬರು. ಇವರಿಗೆ ಅನಾಮಧೇಯ ನಂಬರ್ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಡೆಬಿಟ್ ಕಾರ್ಡ್ನ ಮಾಹಿತಿ ಕೇಳಿದ್ದಾನೆ. ಅದನ್ನು ನಿಜ ಎಂದುಕೊಂಡು ಎ.ಎಂ. ಪ್ರಸಾದ್ ಎಲ್ಲ ಮಾಹಿತಿಯನ್ನೂ ನೀಡಿದ್ದಾರೆ. ಹಾಗೆ, ಮಾಹಿತಿ ನೀಡಿದ ಒಂದು ಗಂಟೆಯೊಳಗೆ ಅವರ ಅಕೌಂಟ್ನಿಂದ 2 ಲಕ್ಷ ರೂ. ಡ್ರಾ ಆಗಿದೆ ಎಂದು ಮೊಬೈಲ್ಗೆ ಮೆಸೇಜ್ ಬಂದಿದೆ.
ತಕ್ಷಣ ಆಶಿತ್ ಮೋಹನ್ ಪ್ರಸಾದ್ ಬ್ಯಾಂಕ್ಗೆ ಕರೆ ಮಾಡಿ ಹಣ ಕಟ್ ಆದ ಬಗ್ಗೆ ವಿವರಣೆ ಕೇಳಿದ್ದಾರೆ. ತಾವು ಯಾವುದೇ ಮಾಹಿತಿಯನ್ನೂ ಕೇಳಿಲ್ಲ. ಯಾವ ಮಾಹಿತಿಯನ್ನೂ ತಮ್ಮ ಬ್ಯಾಂಕಿನವರು ಫೋನ್ ಮೂಲಕ ಕೇಳುವುದಿಲ್ಲ ಎಂದು ಹೇಳಿದ ನಂತರ ಅದು ವಾಸ್ತವದ ಅರಿವಾಗಿದೆ. ತಕ್ಷಣ ಸಿಐಡಿಯ ಸೈಬರ್ ಕ್ರೈಮ್ ಭಾಗಕ್ಕೆ ದೂರು ನೀಡಿರುವ ಪೊಲೀಸ್ ಅಧಿಕಾರಿ ತನಿಖೆಗೆ ಆಗ್ರಹಿಸಿದ್ದಾರೆ.
ಅಧಿಕಾರಿ ಹೇಳಿದ್ದೇನು?:
ಈ ಬಗ್ಗೆ ನ್ಯೂಸ್18ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಆಶಿತ್ ಮೋಹನ್ ಪ್ರಸಾದ್, ನಾನು ಯಾವುದೋ ಪ್ರಮುಖವಾದ ಕೆಲಸದಲ್ಲಿದ್ದಾಗ ಫೋನ್ ಕರೆ ಬಂದಿತು. ಕರೆ ಮಾಡಿದ ವ್ಯಕ್ತಿ ಡೆಬಿಟ್ ಕಾರ್ಡ್ ಗಡುವು ಮುಗಿಯುತ್ತ ಬಂದಿರುವುದರಿಂದ ಅದನ್ನು ರೀ ಆ್ಯಕ್ಟಿವ್ ಮಾಡಲು ಮಾಹಿತಿ ನೀಡಬೇಕಾಗಿ ಕೇಳಿದರು. ನಾನು ಅವರಿಗೆ ಬೇಕಾದ ಎಲ್ಲ ಮಾಹಿತಿ ನೀಡಿದೆ. ನಾನು ಸ್ವಲ್ಪ ಜಾಗರೂಕತರೆ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ ಎಂದಿದ್ದಾರೆ.
ಇದಕ್ಕೂ ಮೊದಲು 2015ರಲ್ಲಿ ಡಿಜಿಐಜಿಪಿ ಓಂಪ್ರಕಾಶ್ ಕೂಡ ಇದೇರೀತಿ ತಮ್ಮ ಬ್ಯಾಂಕ್ ಮಾಹಿತಿಯನ್ನು ನೀಡಿ 10 ಸಾವಿರ ರೂ. ಕಳೆದುಕೊಂಡಿದ್ದರು. ನಂತರ ಸೈಬರ್ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕರಣದಲ್ಲಿ ದೆಹಲಿ ಮೂಲದ ಅಶ್ರಫ್ ಅಲಿ ಎಂಬಾತನನ್ನು ಬಂಧಿಸಲಾಗಿತ್ತು.
ದಿನದಿಂದ ದಿನಕ್ಕೆ ಸೈಬರ್ ಕ್ರೈಮ್ನಿಂದ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೂಲಗಳ ಪ್ರಕಾರ ಈ ವರ್ಷ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ 3 ಸಾವಿರ ಪ್ರಕರಣಗಳು ನೋಂದಣಿಯಾಗಿವೆ.
Comments are closed.