
ಬೆಂಗಳೂರು: ಪರಿಸರ ಕಾಳಜಿಯಿಲ್ಲದ ಅವೈಜ್ಞಾನಿಕ ಯೋಜನೆಗಳಿಂದಲೇ ಕೊಡಗು, ಕೇರಳದಲ್ಲಿ ಈ ಭಯಾನಕ ದುರಂತ ನಡೆದಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲಿ ಮಾತನಾಡಿದ ಪೇಜಾವರ ಶ್ರೀಗಳು “ಸರ್ಕಾರದ ಬೇಕಾಬಿಟ್ಟಿ ಯೋಜನೆಗಳೇ ಪ್ರಕೃತಿ ವಿಕೋಪಕ್ಕೆ ಕಾರಣವಾಗಿದೆ. ಅರಣ್ಯ ನಾಶ, ಅವೈಜ್ಞಾನಿಕ ಅಭಿವೃದ್ದಿ ಯೋಜನೆಗಳಿಂದ ಪ್ರಕೃತಿ ವಿಕೋಪ ಸಂಭವಿಸುತ್ತದೆ” ಎಂದಿದ್ದಾರೆ.
ಎತ್ತಿನಹೊಳೆ ಯೋಜನೆ ಕುರಿತು ಕೇಳಲಾದ ಪ್ರಶ್ನೆಗ “ನಾನು ಯೋಜನೆಯ ವಿರೋಧಿಯೂ ಅಲ್ಲ, ಪರನೂ ಅಲ್ಲ. ನನಗೆ ಜನರ ಹಿತವಷ್ಟೇ ಮುಖ್ಯ. ಯೋಜನೆ ಸಂಬಂಧ ವಿಜ್ಞಾನಿಗಳು ಆಯಾ ಬಾಗದ ಜನಪ್ರತಿನಿಧಿಗಳೊಡನೆ ಚರ್ಚೆ ನಡೆಸಬೇಕು.ಇದರಲ್ಲಿ ಕೋಲಾರ ಹಾಗು ದಕ್ಷಿಣ ಕನ್ನಡದ ವಿಜ್ಞಾನಿಗಳು ಇರಬೇಕು” ಎಂದರು.
“ಪರಿಸರ ಸಂರಕ್ಷಣೆಗೆ ಮುಂದಾಗದೆ ಹೋದಲ್ಲಿ ಭವಿಷ್ಯದ ಪೀಳಿಗೆ ಇನ್ನಷ್ಟು ಅಪಾಯ ಎದುರಿಸುವುದು ಖಚಿತ” ಎಂದ ಶ್ರೀಗಳು ಕೊಡಗು, ಕೇರಳದಲ್ಲಿ ಉಂತಾದ ಹಾನಿ ಸರಿಪಡಿಸಲು ಸರ್ಕಾರ ಇಚ್ಚಾಶಕ್ತಿ ಪ್ರದರ್ಶಿಸಬೇಕಿದೆ.ಪರಿಸರ ಕಾಳಜಿ ಕುರಿತು ಪಕ್ಷಾತೀತವಾಗಿ ಚರ್ಚಿಸಿ ಉತ್ತಮ ತೀರ್ಮಾನ ಕೈಗೊಳ್ಳಬೇಕು ಎಂದಿದ್ದಾರೆ.
ಕೊಡಗು, ಕೇರಳಕ್ಕೆ ತಲಾ 10 ಲಕ್ಷ
ಪ್ರವಾಹದಿಂದ ಹಾನಿಗೀಡಾಗಿರುವ ಕೊಡಗು ಹಾಗೂ ಕೇರಳಕ್ಕೆ ಮಠದ ಟ್ರಸ್ಟ್ ವತಿಯಿಂದ ತಲಾ 10 ಲಕ್ಷ ರೂ ನೀಡಿದ ಪೇಜಾವರ ಶ್ರೀಗಳು ಚಾತುರ್ಮಾಸ ಮುಗಿದ ಬಳಿಕ ತಾವು ಕೊಡಗಿಗೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ.
ನೆರೆಪೀಡಿತ ಪ್ರದೇಶಕ್ಕೆ ತೆರಳಿ ಅಲ್ಲಿನ ಪುನರ್ವಸತಿ ಕಾರ್ಯಕ್ರಮ ಅವಲೋಕಿಸುತ್ತೇನೆ ಎಂದಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕೊಡಗಿನ ಜನರ ಜನಾಭಿಪ್ರಾಯ ಸಂಗ್ರಹವಾಗಬೇಕು, ಅಭಿವೃದ್ದಿ ಕಾರ್ಯಗಳು ಶೀಘ್ರವಾಗಿ ನಡೆಯಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
Comments are closed.