ಕರ್ನಾಟಕ

ತವರಿನಲ್ಲಿ ಸಿದ್ದರಾಮಯ್ಯಗೆ ಮುಖಭಂಗ; ಮೈಸೂರು ಮಹಾನಗರ ಪಾಲಿಕೆ ಮೇಯರ್ ಪಟ್ಟ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಭಾಗ್ಯವತಿ ಮಡಿಲಿಗೆ

Pinterest LinkedIn Tumblr

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲೇ ಕಾಂಗ್ರೆಸ್ ಪಕ್ಷ ತೀವ್ರ ಹಿನ್ನಡೆಯನುಭವಿಸಿದ್ದು, ಬಿಜೆಪಿ-ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಅವರು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಪಟ್ಟ ಗಿಟ್ಟಿಸಿದ್ದಾರೆ.

ಇಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ಅಂತೆಯೇ ಉಪಮೇಯರ್ ಆಗಿ ಜೆಡಿಎಸ್‌’ನ ಇಂದಿರಾ ಮಹೇಶ್ ಅವಿರೋಧ ಆಯ್ಕೆಯಾಗುವ ಮೂಲಕ ಸಿಎಂ ಸಿದ್ದರಾಮಯ್ಯ ತವರು ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಮುಖಭಂಗ ಅನುಭವಿಸುವಂತಾಗಿದೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೀಸಲಾತಿಯ ಲಾಭ ಪಡೆಯಲು ಹೊರಟ ಕಾಂಗ್ರೆಸ್ ಪಕ್ಷದ ಬಾಣ ತಿರುಗುಬಾಣವಾಗಿದ್ದು, ಬಂಡಾಯ ಅಭ್ಯರ್ಥಿ ಭಾಗ್ಯವತಿ ಅವರಿಗೆ ಮೇಯರ್ ಪಟ್ಟ ಒಲಿದುಬಂದಿದೆ. ಆ ಮೂಲಕ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆದಿದೆ. ಪ್ರಸ್ತುತ ಕೌನ್ಸಿಲ್‌ನ ಕೊನೆಯ ಅವಧಿಗೆ ಮೇಯರ್‌ ಸ್ಥಾನ ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಉಪಮೇಯರ್‌ ಸ್ಥಾನ ಪರಿಶಿಷ್ಟ ಪಂಗಡದ (ಎಸ್‌.ಟಿ) ಮಹಿಳೆಯರಿಗೆ ಮೀಸಲಾಗಿತ್ತು.

ಮತದಾನ ನಡುವೆಯೇ ಮಾತಿನ ಚಕಮಕಿ, ಹೈಡ್ರಾಮಾ
ಇತ್ತ ಮತದಾನ ನಡೆಯುತ್ತಿದ್ದರೆ ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಮಾತಿನ ಚಕಮಕಿಯಲ್ಲಿ ತೊಡಗಿದ್ದ ವಿಚಾರ ಬೆಳಕಿಗೆ ಬಂದಿದೆ. ಜೆಡಿಎಸ್ ಸಾಲಿನಲ್ಲಿ ಕುಳಿತ ಕಾಂಗ್ರೆಸ್ ಸದಸ್ಯೆ ಭಾಗ್ಯವತಿಯನ್ನು ಕರೆತರಲು ಕಾಂಗ್ರೆಸ್ ಸದಸ್ಯರು ಹರಸಾಹಸ ಪಟ್ಟರು. ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸಚಿವ ತನ್ವೀರ್ ಸೇಠ್ ಶಾಸಕ ಜಿ.ಟಿ. ದೇವೇಗೌಡರ ನಡುವೆ ಮಾತಿನ ಚಕಮಕಿ ನಡೆದು, ಚುನಾವಣಾ ಪ್ರಕ್ರಿಯೆ ನಡೆಸಲು ಕಾಂಗ್ರೆಸ್‌ ಸದಸ್ಯರು ಅವಕಾಶ ನೀಡದೆ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಒಟ್ಟು 65 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌ ನ 21 ಸದಸ್ಯರು, ಜೆಡಿಎಸ್‌ನ 20 ಮತ್ತು ಬಿಜೆಪಿಯ 13 ಮಂದಿ ಇದ್ದಾರೆ. ಬಿಎಸ್‌ಆರ್‌, ಕೆಜೆಪಿ, ಎಸ್‌ಡಿಪಿಐ ಮತ್ತು ಪಕ್ಷೇತರರು ಸೇರಿ 11 ಮಂದಿ ಸದಸ್ಯರಿದ್ದಾರೆ.

Comments are closed.