ಕರ್ನಾಟಕ

ಪಿಎಫ್‌ಐ ಸೇರಿದಂತೆ ಯಾವುದೇ ಧಾರ್ಮಿಕ ಸಂಘಟನೆಗಳನ್ನೂ ನಿಷೇಧಿಸಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Pinterest LinkedIn Tumblr

ಸಾಗರ: ‘ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಶಾಂತಿಗೆ ಭಂಗ ತರುವ, ಕೋಮು ಭಾವನೆ ಕೆರಳಿಸುವಂಥ ಸಂಘಟನೆಗಳನ್ನು ನಿಷೇಧಿಸುತ್ತೇವೆ. ಆದರೆ, ಪಿಎಫ್‌ಐ ಸೇರಿದಂತೆ ಯಾವುದೇ ಧಾರ್ಮಿಕ ಸಂಘಟನೆಗಳನ್ನೂ ನಿಷೇಧಿಸುವುದಿಲ್ಲ,’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಾರೆ. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ಜಾದು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ಮೇಲೆ ಆಡಳಿತ ವಿರೋಧಿ ಅಲೆ ಇಲ್ಲ. ಚುನಾವಣಾ ಪೂರ್ವ ನೀಡಿದ 165 ಭರವಸೆಗಳಲ್ಲಿ 155 ಈಡೇರಿಸಿದ್ದೇವೆ. ಚುನಾವಣೆಗೂ ಮುನ್ನ ಇನ್ನುಳಿದವನ್ನು ಈಡೇರಿಸುತ್ತೇವೆ,’ ಎಂದರು.

‘ಮೋದಿ ಹೇಳಿದ ಅಚ್ಛೇ ದಿನ್, ಅದಾನಿ, ಅಂಬಾನಿ ಮೊದಲಾದವರಿಗೆ ಬಂದಿದೆ ಅಷ್ಟೇ. ಸಬ್ ಕಾ ಸಾಥ್ ಸಬ್ ವಿಕಾಸದಲ್ಲಿ ಅಲ್ಪಸಂಖ್ಯಾತರಾಗಲಿ, ಮಹಿಳೆಯರು, ರೈತರಿಲ್ಲ. ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋದರೆ ಮಾತ್ರ ಮೋದಿ ಮಾತಿಗೊಂದು ಅರ್ಥವಿರುತ್ತದೆ,’ ಎಂದು ಹೇಳಿದರು.

‘ಜೆಡಿಎಸ್‌ನವರು ಅವಕಾಶವಾದಿಗಳು. ಅಧಿಕಾರಕ್ಕೆ ಬರಲು ಪೂಜೆ, ಹೋಮ ಹವನ ಮಾಡುತ್ತಿದ್ದಾರೆ. ಜೆಡಿಎಸ್‌ಗೆ ಮತ ಕೊಡೋದೂ ಒಂದೇ, ಬಿಜೆಪಿಗೂ ಮತ ಕೊಡೋದು ಒಂದೇ,’ ಎಂದರು

ಸ್ಪರ್ಧಿಸಲು ಇಚ್ಛಿಸಿದರೆ ಕಾಗೋಡು ತಿಮ್ಮಪ್ಪ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿರುವ ಸಿದ್ದರಾಮಯ್ಯ, ‘ಸಮಾಜವಾದಿ ನೆಲೆಗಟ್ಟನ್ನು ಹೊಂದಿರುವ ಸಾಗರದಲ್ಲಿ ಕೋಮುವಾದಿಗಳಿಗೆ ಅವಕಾಶ ಕೊಡಬೇಡಿ,’ ಎಂದು ಕರೆ ನೀಡಿದರು.

‘ಕಾಂಗ್ರೆಸ್ ಪಕ್ಷಕ್ಕೆ ಬರಲು ಹಲವು ಶಾಸಕರು ಸಿದ್ಧರಿದ್ದಾರೆ. ಆದರೆ ಆರ್‌ಎಸ್‌ಎಸ್ ಐಡಿಯಾಲಜಿ ಹಿನ್ನಲೆ ಇರುವವರನ್ನು ಸೇರಿಸಿಕೊಳ್ಳುವುದಿಲ್ಲ,’ ಎಂದು ಹೇಳಿದರು.

Comments are closed.