ಕರ್ನಾಟಕ

ಕನ್ನಡ ಭಾಷೆಯಲ್ಲೇ2 ಸಾವಿರ ತೀರ್ಪು; ಮಿಟ್ಟಲಕೋಡ ಭಾಷಾ ಪ್ರೇಮ

Pinterest LinkedIn Tumblr


ಧಾರವಾಡ: ನ್ಯಾಯಾಲಯಗಳು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ನಿಟ್ಟಿನಲ್ಲಿ ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲೇ ಪ್ರಕರಣಗಳ ತೀರ್ಪು ನೀಡಬೇಕು ಎಂದು ಇತ್ತೀಚೆಗಷ್ಟೇ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಹೇಳಿದ್ದರು. ರಾಷ್ಟ್ರಪತಿಗಳ ಈ ಹೇಳಿಕೆಗೆ ಪೂರಕ ಎನ್ನುವಂತೆ ತಾವು ನ್ಯಾಯಾಧೀಶರಾಗಿದ್ದ 28 ವರ್ಷಗಳಲ್ಲಿ 2000ಕ್ಕೂ ಅಧಿಕ ಪ್ರಕರಣಗಳ
ತೀರ್ಪುಗಳನ್ನು ಕನ್ನಡ ಭಾಷೆಯಲ್ಲೇ ನೀಡಿ, ನ್ಯಾಯಾಂಗ ಕ್ಷೇತ್ರದಲ್ಲೂ ತಮ್ಮ ಕನ್ನಡ ಪ್ರೀತಿ ಮೆರೆದಿ ದ್ದಾರೆ ನಿವೃತ್ತ ನ್ಯಾ.ಎಸ್‌.ಎಚ್‌. ಮಿಟ್ಟಲಕೋಡ ಅವರು… ಮೂಲತಃ ಧಾರವಾಡದವರೇ ಆದ ನ್ಯಾ.ಮಿಟ್ಟಲಕೋಡ ಅವರು ಪ್ರಾಥಮಿಕ ಶಾಲೆಯಲ್ಲಿದ್ದಾಗಿನಿಂದಲೂ ತಮ್ಮ ಕನ್ನಡ ಪ್ರೀತಿಯನ್ನು ಆಯ್ಕೆ ಮಾಡಿಕೊಂಡ ವಕೀಲ ವೃತ್ತಿ, ನಂತರ ನ್ಯಾಯಾಧೀಶರಾಗಿ ನೀಡುವ ತೀರ್ಪುಗಳಲ್ಲೂ
ತುಂಬಿ “ಕನ್ನಡ ಕಾನೂನು ಸಾಹಿತ್ಯ’ ಎನ್ನುವ ಹೊಸ ಪ್ರಕಾರವೊಂದರ ಹುಟ್ಟಿಗೂ ಕಾರಣರಾಗಿದ್ದಾರೆ.

ದಾವಣಗೆರೆಯಲ್ಲಿ ಸಾವಿರ: ಶಿವಮೊಗ್ಗ, ಕಾರವಾರ, ಚಿತ್ರದುರ್ಗ, ಕೊಪ್ಪಳ ಸೇರಿದಂತೆ ಅನೇಕ ಕಡೆ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲೂ ಕನ್ನಡ ತೀರ್ಪು ನೀಡುತ್ತಿದ್ದ ಅವರಿಗೆ ನ್ಯಾಯಾಲಯಗಳಲ್ಲಿನ ಶೀಘ್ರ ಲಿಪಿಕಾರರು ಮತ್ತು ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸುತ್ತಿದ್ದ ನೌಕರರ ಕೊರತೆ ಇತ್ತು. ಹೀಗಾಗಿ ಕನ್ನಡದಲ್ಲಿ ತೀರ್ಪು ಪ್ರಕಟಿಸಲು ತಡಕಾಡಬೇಕಿತ್ತು.

ಕೊನೆಗೆ ಒಂದೊಂದು ತೀರ್ಪುಗಳನ್ನು ಸುದೀರ್ಘ‌ವಾಗಿ ಬರೆಯಬೇಕಿದ್ದರಿಂದ ಕಚೇರಿ ಅವಧಿ ಮುಗಿಸಿ ಟೈಪ್‌ವೈಟರ್‌ನ್ನು ತಮ್ಮ ಮನೆಗೆ ತರಿಸಿಕೊಂಡು ತಡರಾತ್ರಿವರೆಗೂ ಕುಳಿತು ಕಷ್ಟವಾದರೂ ತೀರ್ಪಿನ ಪ್ರತಿ ಕನ್ನಡದಲ್ಲೇ ಪೂರ್ಣಗೊಳಿಸುತ್ತಿದ್ದರು. ಆದರೆ
ದಾವಣಗೆರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕನ್ನಡ ಪ್ರೇಮಿ ಶೀಘ್ರಲಿಪಿಕಾರನೊಬ್ಬ ಇದ್ದಿದ್ದರಿಂದ ತಾವು ವಿಚಾರಣೆ ನಡೆಸಿದ ಒಂದು ಸಾವಿರ ಪ್ರಕರಣಗಳ ತೀರ್ಪನ್ನು ಕನ್ನಡದಲ್ಲೇ ಪ್ರಕಟಿಸಿದರು.

ಹೈಕೋರ್ಟ್‌ನಲ್ಲೂ ಬರಲಿ: ಜೆಎಂಎಫ್‌ಸಿ ಮತ್ತು ಜಿಲ್ಲಾ ಕೋರ್ಟ್‌ಗಳಲ್ಲಿ ಕರ್ನಾಟಕ ಏಕೀಕರಣದ ನಂತರ ಕನ್ನಡ ಭಾಷೆಯಲ್ಲಿ ತೀರ್ಪು ನೀಡಲು ಸರ್ಕಾರ ಅನುಮತಿ ನೀಡಿತು. ಆದರೆ ಇಂದಿಗೂ ಪರಿಪೂರ್ಣವಾಗಿ ಇದು ಜಾರಿಯಾಗಿಲ್ಲ. ಇನ್ನು ಹೈಕೋರ್ಟ್‌ನಲ್ಲಿ ಸದ್ಯಕ್ಕೆ ಕನ್ನಡದಲ್ಲಿ ಪ್ರಕರಣಗಳ ದಾಖಲೆಗಳನ್ನು ಸಲ್ಲಿಸಲು ಅವಕಾಶವಿಲ್ಲ. ಆದರೆ ಇಂಗ್ಲಿಷ್‌ ಮೂಲ ದಾಖಲೆ ಜೊತೆಗೆ ಕನ್ನಡದ ದಾಖಲೆ ಪ್ರತಿಯೊಂದನ್ನು ಸಲ್ಲಿಸಬಹುದು ಅಷ್ಟೇ. ಹೈಕೋರ್ಟ್‌ ನ್ಯಾಯಾಧೀಶರು ಹೊರ ರಾಜ್ಯಗಳಿಂದ ಬಂದವರಾಗಿರುವುದರಿಂದ ಇದು ಇಂಗ್ಲಿಷ್‌ನಲ್ಲೇ ಇರಬೇಕು ಎನ್ನುವ ನಿಯಮವಿದೆ. ಆದರೆ, ಕನ್ನಡ ಭಾಷೆಯಿಂದ ದಾಖಲೆಗಳನ್ನು ತರ್ಜುಮೆ ಮಾಡುವ ವ್ಯವಸ್ಥೆ ಬರಬೇಕು. ಸರ್ಕಾರ ಈ ಕಾನೂನು ತಿದ್ದುಪಡಿ ಮಾಡಿ ಹೈಕೋರ್ಟ್‌ನಲ್ಲೂ ಕನ್ನಡ ದಾಖಲೆಗಳ ಸಲ್ಲಿಕೆಗೆ ಮತ್ತು ತೀರ್ಪು ಪ್ರಕಟಣೆಗೆ ಒತ್ತು ನೀಡಿದರೆ, ಕನ್ನಡ ಭಾಷೆ ಸಾರ್ವಭೌಮತೆಯನ್ನು ಉಳಿಸಿಕೊಳ್ಳಬಲ್ಲದು ಎನ್ನುತ್ತಾರೆ ನ್ಯಾ. ಮಿಟ್ಟಲಕೋಡ.

ಕನ್ನಡದಲ್ಲೇ ಮೊದಲ ತೀರ್ಪು
1977ರಲ್ಲಿ ಧಾರವಾಡದ ಸರ್‌ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಮುಗಿಸಿ ವಕೀಲಿ ವೃತ್ತಿ ಆರಂಭಿಸಿದ ಅವರು, 1985ರಲ್ಲಿ ಚಿಕ್ಕನಾಯಕನಹಳ್ಳಿ ಮುನ್ಸಿಫ್‌-ಮ್ಯಾಜಿಸ್ಟ್ರೇಟ್‌ ಆದರು. ನ್ಯಾಯಾಧೀಶರಾಗಿ ತಮ್ಮ ಎದುರಿಗೆ ಬಂದ ಮೊದಲ ಪ್ರಕರಣದ ತೀರ್ಪನ್ನು ಕನ್ನಡದಲ್ಲೇ ಪ್ರಕಟಿಸಿದರು. ನಂತರ ಅಥಣಿ, ಸೊರಬ, ಬಂಟ್ವಾಳ, ಸಾಗರದಲ್ಲಿ
ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾಗಲೂ ಕನ್ನಡ ಪ್ರೀತಿ ಮುಂದುವರಿಯಿತು. ಕ್ರಿಮಿನಲ್‌, ಕಂದಾಯ, ಸಿವಿಲ್‌, ತೆರಿಗೆ ಇಲಾಖೆ, ಸಹಕಾರ ಇಲಾಖೆಗೆ ಸಂಬಂಧಿಸಿದ ಎಲ್ಲಾ ಬಗೆಯ ಪ್ರಕರಣಗಳ ತೀರ್ಪು ಕನ್ನಡದಲ್ಲಿ ನೀಡಿದ್ದು ಇವರ ಕನ್ನಡ ಪ್ರೀತಿಗೆ ಸಾಕ್ಷಿ

ಕನ್ನಡ ಕಾನೂನು ಸಾಹಿತ್ಯ ಪ್ರಕರಣಗಳ ಮುಂದೂಡಿಕೆ, ತೀರ್ಪು ಕಾಯ್ದಿರಿಸುವುದರಿಂದ ಜನಸಾಮಾನ್ಯರಿಗೆ ಹಿಂಸೆಯಾಗುತ್ತದೆ ಎಂಬ ಕಾರಣಕ್ಕಾಗಿ ನ್ಯಾ.ಎಸ್‌. ಎಚ್‌.ಮಿಟ್ಟಲಕೋಡ ಅವರು, ತಮ್ಮ ಇಡೀ ಸೇವಾವಧಿಯಲ್ಲಿ ಒಂದೇ ಒಂದು ತೀರ್ಪು ಮುಂದೂಡಿಲ್ಲ. ನಿಗದಿಪಡಿಸಿದ ದಿನ ಬೆಳಗ್ಗೆ 11:00 ಗಂಟೆಗೆ ತೀರ್ಪು ಪ್ರಕಟಿಸಿದ್ದಾರೆ. ಇನ್ನು ಕನ್ನಡ ಭಾಷೆ ಕಾನೂನು ಕ್ಷೇತ್ರದಲ್ಲೂ ಬೆಳೆಯಬೇಕು ಎಂಬ ಕಾರಣಕ್ಕಾಗಿ ಕಾನೂನು ಸಂಬಂಧಿ ಇಂಗ್ಲಿಷ್‌ ಪದಗಳಿಗೆ ಸಮಾನಾರ್ಥ ನೀಡುವ ಕನ್ನಡ ಪದಗಳನ್ನು ಹುಡುಕಿ ತೀರ್ಪು ಬರೆದಿದ್ದಾರೆ. ಬ್ಯಾಂಕ್‌ ಚೆಕ್‌ಗಳ ಅಮಾನ್ಯತೆ ಅಪರಾಧ, ಸರಕಾರಿ ವ್ಯಾಜ್ಯಗಳ ನಿರ್ವಹಣೆ, ಯಮನ ನ್ಯಾಯಾಲಯದಲ್ಲಿ ಪ್ರಹಸನ ಎಂಬ ಕೃತಿಗಳು, ಆಕರ್ಷ ಮತ್ತು ಉತ್ಕರ್ಷ ಎಂಬ ಎರಡು ಕವನ ಸಂಕಲನಗಳು ಸೇರಿದಂತೆ ಅನೇಕ ಲೇಖನಗಳನ್ನು ನ್ಯಾ.
ಮಿಟ್ಟಲಕೋಡ ಅವರು ಬರೆದು ಕನ್ನಡ ಕಾನೂನು ಸಾಹಿತ್ಯ ಪ್ರಕಾರ ಬೆಳೆಸಲು ಶ್ರಮಿಸಿದ್ದಾರೆ.

ಕಾನೂನು ಕ್ಷೇತ್ರದ ತೀರ್ಪು ಗಳು ಸ್ಥಳೀಯ ಭಾಷೆಯಲ್ಲೇ ಬಂದರೆ ನ್ಯಾಯ ಕೇಳಲು ಬಂದ ವರಿಗೂ ತಮ್ಮ ಪ್ರಕರಣದ ಸಮಗ್ರ ಮಾಹಿತಿ ಲಭಿಸುತ್ತದೆ. ಜೊತೆಗೆ ಕನ್ನಡ ಕಾನೂನು ಸಾಹಿತ್ಯವೂ ವೃದ್ಧಿಯಾಗುತ್ತದೆ.
●ನ್ಯಾ.ಎಸ್‌.ಎಚ್‌. ಮಿಟ್ಟಲಕೋಡ ನಿವೃತ್ತ ನ್ಯಾಯಾಧೀಶರು

●ಬಸವರಾಜ ಹೊಂಗಲ್‌

-ಉದಯವಾಣಿ

Comments are closed.