ಬೆಂಗಳೂರು: ಖಾಸಗಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸರಿಯಾದ ಸಮಯಕ್ಕೆ ರಕ್ತ ಸಿಗದೆ ಗಾಯಾಳುವೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ರಾಜು ಎಂಬವರು ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡು ನವೆಂಬರ್ 8 ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಗಾಯಾಳುವಿಗೆ ರಕ್ತದ ಅಗತ್ಯವಿದೆ ಎಂದು ನ. 9ರಂದು ರಕ್ತ ತರುವಂತೆ ರಾಜುವಿನ ಸಂಬಂಧಿಕರಿಗೆ ಆಸ್ಪತ್ರೆಯ ವೈದ್ಯರು ಸೂಚಿಸಿದ್ದರು.
ಈ ಸೂಚನೆಯಂತೆ ರಾಜುವಿನ ಸಂಬಂಧಿಕರು ಎಂಎಸ್ ರಾಮಯ್ಯ ಆಸ್ಪತ್ರೆಯ ಬ್ಲಡ್ ಬ್ಯಾಂಕ್ಗೆ ಹೋದಾಗ ಅಲ್ಲಿ ರಕ್ತ ನೀಡಲು ನಿರಾಕರಿಸಿದ್ದಾರೆ.
ರಾಜುವಿನ ಸಂಬಂಧಿಕರ ಕೈಯಲ್ಲಿ 500 ಮತ್ತು 1000 ರುಪಾಯಿ ಹಳೆ ನೋಟುಗಳಿದ್ದ ಕಾರಣ ಆ ನೋಟುಗಳನ್ನು ಸ್ವೀಕರಿಸಲು ಬ್ಲಡ್ ಬ್ಯಾಂಕ್ ಸಿಬ್ಬಂದಿ ಒಪ್ಪಲಿಲ್ಲ. ಸಂಬಂಧಿಕರು ಸುಮಾರು 5 ಗಂಟೆಗಳ ಕಾಲ ಕಾದರೂ ಹಳೇ ನೋಟು ಸ್ವೀಕರಿಸುವುದಿಲ್ಲ ಎಂದು ಬ್ಲಡ್ ಬ್ಯಾಂಕ್ ಸಿಬ್ಬಂದಿಗಳು ಹೇಳಿದ್ದಾರೆ. ಕೊನೆಗೆ ಸಂಬಂಧಿಕರೊಬ್ಬರು ಐಡಿ ಕಾರ್ಡ್ ನೀಡಿ ರಕ್ತ ತಂದಿದ್ದರು.
ಆದರೆ ಸಮಯಕ್ಕೆ ಸರಿಯಾಗಿ ರಕ್ತ ಸಿಗದೇ ಇರುವ ಕಾರಣ ನಿನ್ನೆ ಬೆಳಗ್ಗೆ 10 ಗಂಟೆಗೆ ರಾಜು ಕೊನೆಯುಸಿರೆಳೆದಿದ್ದಾರೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ರಾಜುವಿನ ಕುಟುಂಬದವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Comments are closed.