ಬಳ್ಳಾರಿ : ಅಕ್ರಮ ಗಣಿಗಾರಿಕೆ, ಅಧಿಕಾರ ದುರ್ಬಳಕೆ, ಗಡಿ ನಾಶ ಆರೋಪದಲ್ಲಿ ಜೈಲುಪಾಲಾಗಿದ್ದ ಮಾಜಿ ಸಚಿವ ಜನಾರ್ದನರೆಡ್ಡಿ, 5 ವರುಷಗಳ ನಂತರ ಬಳ್ಳಾರಿಗೆ ಕಾಲಿಡಲಿದ್ದಾರೆ. ಮಗಳ ಮದುವೆ ಸಂಬಂಧ ಕೋರ್ಟ್ನಿಂದ ಅನುಮತಿ ಪಡೆದು ಮಧ್ಯಾಹ್ನ ಹುಟ್ಟೂರಿಗೆ ಬರುತ್ತಿದ್ದಾರೆ.
ರೆಡ್ಡಿ ವಲಯ ಭರ್ಜರಿ ತಯಾರಿ : ಗಾಲಿ ಜನಾರ್ದನ ರೆಡ್ಡಿ – ಹೀಗಂದ್ರೆ ಎಷ್ಟು ಜನರಿಗೆ ಗೊತ್ತಾಗುತ್ತೋ, ಇಲ್ಲವೋ..? ಬಳ್ಳಾರಿಯ ಗಣಿಧಣಿ ಅಂದ್ರೆ ಕಣ್ಣಮುಂದೆ ಬರೋದೇ ಜನಾರ್ದನ ರೆಡ್ಡಿ ಹವಾ. ಬರೋಬ್ಬರಿ 5 ವರ್ಷಗಳ ಬಳಿಕ ಬಳ್ಳಾರಿಗೆ ಜನಾರ್ದನ ರೆಡ್ಡಿ ಇವತ್ತು ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಾಲಿಡುತ್ತಿದ್ದಾರೆ. ಬೆಳಗ್ಗೆ ಹೈದ್ರಾಬಾದ್’ಗೆ ತೆರಳಿ ಬೇಲ್’ಗಾಗಿ ಡೀಲ್ ಪ್ರಕರಣದ ಸಂಬಂಧ ಕೋರ್ಟ್’ಗೆ ತೆರಳಿ ನೇರವಾಗಿ ಮಧ್ಯಾಹ್ನ ಬಳ್ಳಾರಿಗೆ ಬಂದಿಳಿಯಲಿದ್ದಾರೆ. ಮಗಳು ಬ್ರಹ್ಮಿಣಿ ಮದುವೆ ಸಂಬಂಧ ಹುಟ್ಟೂರಿಗೆ ರೆಡ್ಡಿ ಬರುತ್ತಿದ್ದಾರೆ.
ಮಾಜಿ ಸಚಿವರ ಆಗಮನಕ್ಕಾಗಿ ರೆಡ್ಡಿ ಆಪ್ತ ಬಳಗ ಹಾಗೂ ಅಭಿಮಾನಿಗಳಿಂದ ರಸ್ತೆಗಳಲ್ಲಿ ಸ್ವಾಗತ ಕೋರುವ ಬಂಟಿಗ್, ಬ್ಯಾನರ್ ರಾರಾಜಿಸುತ್ತಿವೆ. ಮೊದಲಿಗೆ ಗಡಿಗಿ ಚನ್ನಪ್ಪ ಸರ್ಕಲ್’ನಲ್ಲಿರುವ ರಾಘವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ. ಬಳಿಕ ಮನೆಗೆ ತೆರಳಲಿರುವ ರೆಡ್ಡಿ, ಸಂಜೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ತನ್ನ ತಾಯಿಯ ಹೆಸರಿನಲ್ಲಿರುವ ಚೆಂಗಾರೆಡ್ಡಿ ರುಕ್ಮಣ್ಣಮ್ಮ ವೃದ್ಧಾಶ್ರಮದಲ್ಲಿ ಕಾರ್ಯಕ್ರಮ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ರೆಡ್ಡಿ ಆಪ್ತ, ಸಂಸದ ಶ್ರೀರಾಮುಲು, ಶಾಸಕರಾದ ನಾಗೇಂದ್ರ, ಸುರೇಶ್ ಬಾಬು, ಆನಂದ್ ಸಿಂಗ್ ಸೇರಿದಂತೆ ರೆಡ್ಡಿ ಆಪ್ತ ಬಳಗ ಭಾಗಿಯಾಗಲಿದ್ದಾರೆ. ನಾಳೆ ಅಂದರೆ, ನವೆಂಬರ್ 2ರಂದು ಸಂಸದ ಶ್ರೀರಾಮುಲು ಅವರ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಜನಾರ್ದನರೆಡ್ಡಿ ಭಾಗವಹಿಸಲಿದ್ದಾರೆ.
ಇದಾಗಿ 8 ದಿನಗಳ ಕಾಲ ಬಳ್ಳಾರಿಯಲ್ಲಿ ತನ್ನ ಮಗಳು ಬ್ರಹ್ಮಣಿ ಮದುವೆಯ ಕಾರ್ಯಗಳಲ್ಲಿ ರೆಡ್ಡಿ ನಿರತರಾಗಲಿದ್ದಾರೆ. ಸಾಕ್ಷಿ ನಾಶ, ವಿವಿಧ ಕಾರಣಗಳಿಗಾಗಿ ಬಳ್ಳಾರಿಗೆ ತೆರಳಲು ಕೋರ್ಟ್ ರೆಡ್ಡಿಗೆ ಅನುಮತಿ ನೀಡಿರಲಿಲ್ಲ. ಎರಡು ಬಾರಿ ತಿರಸ್ಕರಿಸಿತ್ತು. ಆದರೆ ಮಗಳ ಮದುವೆ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಬಳ್ಳಾರಿಯಲ್ಲಿರಲು ಕೋರ್ಟ್ ಅನುಮತಿ ನೀಡಿರುವುದು ರೆಡ್ಡಿ ವಲಯಕ್ಕೆ ಸಂತಸ ತಂದಿದೆ.
Comments are closed.