ತುಮಕೂರು, ಮಾ.9- ಸಾಕಪ್ಪಾ ಸಾಕು… ಜಿಲ್ಲೆಯಲ್ಲಿನ ವನ್ಯ ಜೀವಿಗಳ ಸಹವಾಸ… ಒಂದು ಕಡೆ ಚಿರತೆಯಾದರೆ ಮತ್ತೊಂದು ಕಡೆ ಆನೆಗಳು… ನಾವು ಹಾಗೂ ಸಾರ್ವಜನಿಕರು ನೆಮ್ಮದಿಯಿಂದ ನಿದ್ರಿಸುವುದೇ ದುಸ್ತರವಾಗಿದೆ ಎಂದು ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಅಲವತ್ತುಕೊಂಡಿದ್ದಾರೆ. ಕಳೆದ ವಾರವಷ್ಟೆ ಹನುಮಂತಪುರದಲ್ಲಿ ಚಿರತೆಯೊಂದು ಕಾಣಿಸಿಕೊಂಡು ಭಾರೀ ಅವಾಂತರವನ್ನೇ ಸೃಷ್ಟಿಸಿತ್ತು. ಸತತ ಕಾರ್ಯಾಚರಣೆಯಿಂದ ಕೊನೆಗೂ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ನಂತರ ದೇವರಾಯನದುರ್ಗ ಅರಣ್ಯಕ್ಕೆ ಬಿಡಲಾಗಿತ್ತು.
ಈಗ ಯಾವುದೇ ಭಯವಿಲ್ಲ. ಸ್ವಲ್ಪ ನಿಟ್ಟುಸಿರು ಬಿಡಬಹುದೆಂದುಕೊಂಡಿದ್ದ ಅರಣ್ಯ ಸಿಬ್ಬಂದಿಗಳಿಗೆ ರಾತ್ರಿ ಮತ್ತೊಂದು ಆಘಾತ ಕಾದಿತ್ತು.
ರಾತ್ರಿ ಸುಮಾರು 11 ಗಂಟೆ ಸುಮಾರಿನಲ್ಲಿ ಚಿರತೆಯೊಂದು ಹನುಮಂತಪುರದ 4ನೆ ಕ್ರಾಸ್ನ ರಾಜಪ್ಪ ಎಂಬುವರ ಮನೆ ಬಳಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಚಿರತೆಯನ್ನು ಕಂಡ ರಾಜಪ್ಪ ಕೂಡಲೇ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿರತೆ ಬಂದಿರುವ ಸುದ್ದಿ ಕಾಡ್ಗಿಚ್ಚಿನಂತೆ ನಗರವೆಲ್ಲ ಹಬ್ಬಿ ಚಿರತೆ ವೀಕ್ಷಣೆಗಾಗಿ ಸಾರ್ವಜನಿಕರ ದಂಡೇ ಆಗಮಿಸಿತ್ತು.
ಕೂಡಲೇ ಅರಣ್ಯಾಧಿಕಾರಿಗಳು, ಎನ್ಇಪಿಎಸ್ ಠಾಣೆ ಪೊಲೀಸರು ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಚಿರತೆ ಹಿಡಿಯಲು ಕಾರ್ಯಾಚರಣೆ ಕೈಗೊಂಡು ಮನೆ ಸುತ್ತಮುತ್ತ ಬೆಳಗಿನ ಜಾವದವರೆಗೂ ಹುಡುಕಾಡಿದರೂ ಹೆಜ್ಜೆಗಳು ಮಾತ್ರ ಕಂಡವು. ಚಿರತೆ ಕಾಣಲಿಲ್ಲ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದು ಕಡೆ ಮಲ್ಲಸಂದ್ರ ಕೆರೆಯಲ್ಲಿ ಮೂರು ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಜಿಲ್ಲೆಯ ಸುತ್ತಮುತ್ತ ಜಾತ್ರೆಗಳು ನಡೆಯುತ್ತಿದ್ದು, ಎಲ್ಲಿ ಜಾತ್ರೆಗೆ ಆನೆಗಳು ಲಗ್ಗೆ ಇಡುತ್ತವೋ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.