ಬೆಳಗಾವಿ: ನಗರದಲ್ಲಿ ಕೆಲ ತಿಂಗಳ ಹಿಂದೆ ಪೊಲೀಸರು ನಡು ಬೀದಿಯಲ್ಲೇ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣ ಬಯಲಾಗಿತ್ತು. ಈ ಪ್ರಕರಣದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಅದೇ ಠಾಣೆಯ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಇದೇ ದಿ.10 ರಂದು ಖಡೇ ಬಜಾರ್ ವ್ಯಾಪ್ತಿಯಲ್ಲಿ ಶೌಚಾಲಯಕ್ಕೆ ಹೋಗಿದ್ದ ಮಹಿಳೆಯನ್ನು ಖಡೇ ಬಜಾರ್ ಎಸಿಪಿ ಜಯಕುಮಾರ್ ವೇಶ್ಯಾವಾಟಿಕೆ ಆರೋಪದಡಿ ಥಳಿಸಿದ್ದಾರೆ. ಜತೆಗೆ ಮಹಿಳೆಯರನ್ನು ಎರಡು ದಿನ ಅನಧಿಕೃತವಾಗಿ ಠಾಣೆಯಲ್ಲಿ ಕೂರಿಸಿ ನಿನ್ನೆ ರಾತ್ರಿ ಬಿಡುಗಡೆ ಮಾಡಿದ್ದಾರೆ ಎಂಬ ದೂರು ಕೇಳಿ ಬಂದಿದೆ.
ಪೊಲೀಸ್ ಠಾಣೆಯಲ್ಲಿ ತಮ್ಮೊಂದಿಗೆ ಪೊಲೀಸರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಈ ಕುರಿತು ನೊಂದ ಮಹಿಳೆಯರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಮಹಿಳೆಯರ ದೂರು ಸ್ವೀಕರಿಸಿದ ನಗರ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಈ ಕುರಿತು ಡಿಸಿಪಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ವಿನಾಕಾರಣ ನಮ್ಮ ಮೇಲೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ನಾವು ನಮ್ಮ ಕೆಲಸವನ್ನು ಬಿಟ್ಟು ಗೌರವಿತವಾಗಿ ಜೀವನ ನಡೆಸುತ್ತಿದ್ದೇವೆ. ಆದ್ರೂ ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದಾರೆ. ನಮಗೆ ಸರ್ಕಾರ ರಕ್ಷಣೆ ನೀಡಬೇಕು, ಹಲ್ಲೆ ನಡೆಸಿದ ಎ.ಸಿ.ಪಿ ಜಯಕುಮಾರ್ ವಿರುದ್ಧ ಶಿಸ್ತು ಕ್ರಮಕೈಗೊಂಡು ನ್ಯಾಯ ಒದಗಿಸಬೇಕೆಂದು ನೊಂದ ಮಹಿಳೆಯರು ಒತ್ತಾಯಿಸಿದ್ದಾರೆ.