ಬೆಂಗಳೂರು, ಜ.9- ಮಧ್ಯರಾತ್ರಿವರೆಗೂ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ನೀಡಿರುವ ಅನುಮತಿಯನ್ನು ಪರಿಷ್ಕರಿಸಲಾಗುತ್ತಿದ್ದು, ಶೀಘ್ರವೇ ಅಬಕಾರಿ, ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸವರ್ಷ, ಕ್ರಿಸ್ಮಾಸ್ ಆಚರಣೆ ಹಿನ್ನೆಲೆಯಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ಗಳ ಅವಧಿಯನ್ನು ರಾತ್ರಿ ಒಂದು ಗಂಟೆವರೆಗೂ ವಿಸ್ತರಿಸಬೇಕೆಂಬ ಬೇಡಿಕೆ ಇತ್ತು. ಆ ಸಂದರ್ಭಕ್ಕೆ ಅನುಮತಿ ನೀಡಲಾಗಿತ್ತು. ಈಗ ಅವಧಿ ವಿಸ್ತರಣೆಯಿಂದ ಹಲವಾರು ರೀತಿಯ ಸಮಸ್ಯೆಗಳು ಎದುರಾಗಿವೆ. ಅಬಕಾರಿ ಇಲಾಖೆಯಿಂದ ಹಣ ಪಡೆದು ಮಧ್ಯರಾತ್ರಿವರೆಗೂ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಬೇಕೆ ಅಥವಾ ಹಣ ಪಡೆಯದೇ ಅನುಮತಿ ನೀಡಬೇಕೆಂಬೆಲ್ಲಾ ಗೊಂದಲಗಳಿವೆ.
ಈ ಕುರಿತು ಶೀಘ್ರವೇ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
ಸನ್ನಡತೆಯ ಕೈದಿಗಳನ್ನು ಬಿಡುಗಡೆ ಮಾಡಲು ಈಗಿರುವ ಹಳೆಯ ನಿಯಮವಾಳಿಗಳಂತೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಸ್ಪೆಕ್ಟ್ವಾಗಿ ನಿಯಮಗಳನ್ನು ನಿರ್ಧರಿಸಲಾಗಿದೆ. ಹೊಸ ನಿಯಮಗಳನ್ನು ರೂಪಿಸಿ ಸಂಪುಟದಲ್ಲಿ ಚರ್ಚಿಸಿ ಜಾರಿಗೆ ತರಲು ಕಾಲಾವಕಾಶದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹಳೆ ನಿಯಮಗಳ ಅನುಸಾರವೇ ಜನವರಿ 26ರ ಗಣರಾಜ್ಯೋತ್ಸವದೊಳಗೆ ಸನ್ನಡತೆ ಕೈದಿಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಎಷ್ಟು ಸಂಖ್ಯೆಯಲ್ಲಿ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂಬ ಬಗ್ಗೆ ನಿರ್ಧಾರವಾಗಿಲ್ಲ ಎಂದು ಪರಂ ತಿಳಿಸಿದರು.
ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವ ನಿಯಮಾವಳಿಗಳು ಪೊಲೀಸ್ ಇಲಾಖೆ ರೂಪಿಸಿದ್ದಲ್ಲ. ಸಾರಿಗೆ ಇಲಾಖೆಯ ನಿಯಮಾವಳಿಗಳನ್ನು ಆಧರಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯವನ್ನು ಜಾರಿಗೆ ತರುವ ಕೆಲಸ ಮಾತ್ರ ಮಾಡುತ್ತದೆ. ಹಿಂಬದಿ ಸವಾರರು ಯಾವ ಕಂಪೆನಿಯ ಹೆಲ್ಮೆಟ್ ಧರಿಸಿದ್ದಾರೆ ಎಂಬುದನ್ನು ಪೊಲೀಸರು ನೋಡುವುದಿಲ್ಲ. ಅದು ಸಾರಿಗೆ ಇಲಾಖೆಯ ಕೆಲಸ ಎಂದರು. ಸಾರಿಗೆ ನಿಯಮಾವಳಿಗಳು ಎಲ್ಲರಿಗೂ ಒಂದೇ. ಗೃಹ ಸಚಿವರು ಮತ್ತು ಮುಖ್ಯಮಂತ್ರಿಯವರಿಗೆ ವಿಶೇಷ ನಿಯಮಾವಳಿ ರೂಪಿಸಿ ಜಿರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಉಳಿದಂತೆ ಎಲ್ಲಾ ಸಚಿವರು, ಸಂಸದರು, ಶಾಸಕರು ಸಂಚಾರದ ನಿಯಮಾವಳಿಗಳನ್ನು ಪಾಲಿಸಲೇಬೇಕು ಎಂದು ಪರಮೇಶ್ವರ್ ಹೇಳಿದರು.