ಬೆಂಗಳೂರು: ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ಅಧಿಕಾರ ಬೇಕು. ಎಲ್ಲಾ ಸಂಸದರು, ಶಾಸಕರು ರಾಜೀನಾಮೆ ನೀಡಿ ಕೂಡಲೇ ಹೋರಾಟಕ್ಕೆ ಇಳಿಯಬೇಕು ಎಂದು ನಟ ಶಿವರಾಜ್ಕುಮಾರ್ ಆಗ್ರಹಿಸಿದ್ದಾರೆ.
ಆನಂದ್ರಾವ್ ವೃತ್ತದ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಕಳಸಾ-ಬಂಡೂರಿ ಜಾರಿಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಮಸ್ಯೆ ಬಂದಾಗ ರಾಜಕಾರಣಿಗಳು ಸುಲಭವಾಗಿ ಜಾರಿಕೊಳ್ಳುತ್ತಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸ್ವಲ್ಪ ಹಣದ ಆಸೆಗೆ ಎಂಥೆಂಥವರಿಗೊ ಮತ ಹಾಕಿ ಗೆಲ್ಲಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕಳಸಾ-ಬಂಡೂರಿ ಯೋಜನೆ ಕುಡಿಯುವ ನೀರಿಗಾಗಿ ರೂಪಿಸಲಾಗಿದೆ. ಅನ್ನ, ನೀರನ್ನು ಹಂಚಿಕೊಳ್ಳದೇ ಇರುವವರು ಮನುಷ್ಯರಲ್ಲ. ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸುವುದು ಸರಿಯಲ್ಲ. ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಮಾಡುವವರೆಗೂ ಹೋರಾಟ ನಿರಂತರ. ಇದಕ್ಕಾಗಿ ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ. ಜನರಿಗಾಗಿಯೇ ಬದುಕಿದ್ದೇವೆ. ಜನರಿಗಾಗಿಯೇ ಸಾಯೋಣ ಎಂದು ಕರೆ ನೀಡಿದರು.
ಯೋಜನೆಗಾಗಿ ಹೋರಾಟ ನಡೆಸುತ್ತಿರುವ ನವಲಗುಂದ, ನರಗುಂದ ಭಾಗಕ್ಕೆ ಚಲನಚಿತ್ರರಂಗದ ಎಲ್ಲರೂ ತೆರಳಿ ಬೃಹತ್ ಜಾಥಾ ನಡೆಸಬೇಕು. ಹೆದ್ದಾರಿಗಳನ್ನು ಬಂದ್ ಮಾಡಬೇಕು, ಕನ್ನಡಿಗರ ಶಕ್ತಿ ಏನು ಎಂದು ತೋರಿಸಬೇಕು. ಇದಕ್ಕೆ ಚಿತ್ರರಂಗದವರಷ್ಟೇ ಹೋರಾಟ ಮಾಡಿದರೆ ಸಾಲದು, ರಾಜಕಾರಣಿಗಳು ಬರಬೇಕು. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂಬ ಭೇದವಿಲ್ಲದೆ ಒಟ್ಟಾಗಿ ನಿಲ್ಲಬೇಕು. ಸಮಸ್ಯೆ ಬಗೆಹರಿಸದಿದ್ದ ಮೇಲೆ ಅಧಿಕಾರದಲ್ಲಿರುವುದಾದರೂ ಏಕೆ ರಾಜೀನಾಮೆ ಕೊಟ್ಟು ಬನ್ನಿ ಎಂದು ಅವರು ಆಗ್ರಹಿಸಿದರು.