ಬೆಂಗಳೂರು: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಪ್ರಶಸ್ತಿ ಹಿಂತಿರುಗಿಸುತ್ತಿರುವವರ ಸಾಲಿಗೆ ಹಿರಿಯ ಸಾಹಿತಿ ದೇವನೂರು ಮಹಾದೇವ ಸಹ ಸೇರ್ಪಡೆಯಾಗಿದ್ದಾರೆ. ಅಸಹಿಷ್ಣುತೆಯನ್ನು ಖಂಡಿಸಿ ತಮಗೆ ನೀಡಲಾಗಿರುವ, ಪದ್ಮಶ್ರೀ ಕೇದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ಮಾಡಲು ನಿರ್ಧರಿಸುವುದಾಗಿ ದೇವನೂರ್ ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ತಮ್ಮ ನಿರ್ಧಾರವನ್ನು ಹೇಳಿದ ಸಾಹಿತಿಗಳು, ‘ಪ್ರಶಸ್ತಿ ನೀಡುವಾಗ ಸಿಕ್ಕ ಸ್ಥಾನಮಾನಗಳನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಸಾಂಕೇತಿಕವಾಗಿ ನಾನು ಪ್ರಶಸ್ತಿಗಳನ್ನು ಮರಳಿಸುತ್ತಿದ್ದೇನೆ’, ಎಂದು ಸ್ಪಷ್ಟನೆ ನೀಡಿದ್ದಾರೆ.
‘ದೇಶದಲ್ಲಿ ಅಸಹಿಷ್ಣುತೆ ಅಟ್ಟಹಾಸಗೈಯ್ಯುತ್ತಿದೆ. ಹಾಡಹಗಲೇ ಕರಾಳ ಹಿಂಸಾಚಾರಗಳು ನಡೆಯುತ್ತಿವೆ. ಹಿಂದೆಂದೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ’, ಕೇಂದ್ರ ಸರ್ಕಾರದ ವಿರುದ್ಧ ಮಹಾದೇವ್ ಕಿಡಿಕಾರಿದ್ದಾರೆ.
‘ಪ್ರಧಾನಿ ಮೋದಿಯವರ ವಿರುದ್ಧ ಸೈದ್ಧಾಂತಿಕ ಅಸಹಿಷ್ಣುತೆ’ ಎಂಬ ಹೇಳಿದ್ದ ಕಾನೂನು ಸಚಿವ ಡಿವಿಎಸ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ‘ಸದಾನಂದ ಗೌಡ ಅವರದು ಆತ್ಮನಾಶಕ ಮಾತು. ಎಲ್ಲರಿಗೂ ಆತ್ಮವಲೋಕನಕ್ಕೆ ಇದು ಸಕಾಲ’, ಎಂದು ಹೇಳಿದ್ದಾರೆ.