ಬೆಂಗಳೂರು: ‘ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಮೌನವಾಗಿರುವ ಬದಲು ರಾಜೀನಾಮೆ ನೀಡುವುದು ಉತ್ತಮ’ ಎಂದು ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಒತ್ತಾಯಿಸಿದರು.
ಅಂಕಪಟ್ಟಿ ಮತ್ತು ಉತ್ತರ ಪತ್ರಿಕೆಗಳನ್ನು ತಿದ್ದಿರುವುದು, ಪ್ರವೇಶ ಪರೀಕ್ಷೆ ಹಗರಣ ಸೇರಿದಂತೆ ವಿ.ವಿ. ವ್ಯಾಪ್ತಿಯಲ್ಲಿ ಹಲವು ಅಕ್ರಮಗಳು ನಡೆದಿದ್ದರೂ ಸಚಿವರು ಸುಮ್ಮನಿರುವುದು ಏಕೆ ಎಂದು ಅವರಯ ಪ್ರಶ್ನಿಸಿದರು.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಸಚಿವರು ಮೌನ ತಾಳುವುದು ಎಂದರೆ ಅಕ್ರಮಗಳ ಬಗ್ಗೆ ಸಮ್ಮತಿ ಇದೆ ಎಂದರ್ಥ. ಈ ಅಕ್ರಮಗಳಲ್ಲಿ ಡಾ. ಪಾಟೀಲರೂ ಪಾಲುದಾರರು’ ಎಂದು ಆರೋಪಿಸಿದರು.
1996ರಿಂದ 2011ರವರೆಗೆ ವಿ.ವಿ.ಯ ಲೆಕ್ಕಪತ್ರ ತಪಾಸಣೆ ಸೂಕ್ತವಾಗಿ ಆಗಿಲ್ಲ. ಒಟ್ಟು ₹ 134 ಕೋಟಿ ವ್ಯವಹಾರದ ಬಗ್ಗೆ ಲೆಕ್ಕಪತ್ರ ತಪಾಸಣೆ ವೇಳೆ ಆಕ್ಷೇಪ ವ್ಯಕ್ತವಾಗಿದೆ. ವಿ.ವಿ ಖರ್ಚುಗಳ ಬಗ್ಗೆ ಮಹಾಲೇಖಪಾಲರಿಂದ (ಸಿಎಜಿ) ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.