ಬೆಂಗಳೂರು, ಜೂ.10: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದ ಕುಡಿ ನಿಖಿಲ್ಗೌಡ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದರು.
ತಮ್ಮ ಪುತ್ರ ನಿಖಿಲ್ಗೌಡ ಜಾಗ್ವಾರ್ ಚಿತ್ರದ ಮೂಲಕ ಬೆಳ್ಳಿ ತೆರೆಯಲ್ಲಿ ಮಿಂಚಲಿದ್ದಾರೆ. ತಮ್ಮ ಬ್ಯಾನರ್ನ ಚನ್ನಾಂಬಿಕಾ ಫಿಲಮ್ಸ್ ಮೂಲಕ ಬಹುಕೋಟಿ ಬಜೆಟ್ನಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ 10 ವರ್ಷಗಳಿಗೂ ಹಿಂದಿನಿಂದಲೂ ಚಿತ್ರ ನಿರ್ಮಾಣ, ವಿತರಣೆಯಲ್ಲಿ ಸಕ್ರಿಯರಾಗಿದ್ದು, ಈ ಮೊದಲೇ ತಮ್ಮ ಮಗನಿಗೆ ಚಿತ್ರ ಮಾಡುವಂತೆ ಹೇಳಿದ್ದೆನಾದರೂ ಆತನಿಗೆ ಯಾವುದೇ ಆಸಕ್ತಿ ಇಲ್ಲದ ಕಾರಣ ಸುಮ್ಮನಿದ್ದೆ. ಒಂದು ವರ್ಷದ ಹಿಂದೆ ನಿಖಿಲ್ ಹೀರೋ ಆಗುವ ಆಸೆ ವ್ಯಕ್ತಪಡಿಸಿದಾಗ ತೆಲುಗು ನಿರ್ದೇಶಕ ರಾಜಮೌಳಿ ತಂದೆ ರಚಿಸಿರುವ ಕಥೆ ಆಧರಿಸಿ ತೆಲುಗು ಹಾಗೂ ಕನ್ನಡದಲ್ಲಿ ಚಿತ್ರ ನಿರ್ಮಿಸುತ್ತಿದ್ದೇವೆ. ತೆಲುಗಿನ ಮಹದೇವ್ ಅವರೇ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂದು ವಿವರಿಸಿದರು.
ಹಿಂದಿನಿಂದಲೂ ನಾನು ರಾಜ್ಕುಮಾರ್ ಅವರ ಚಿತ್ರಗಳನ್ನು ನೋಡಿ ಬೆಳೆದವನು. ಬಡವರು, ಸರಳತೆಯ ಬಗ್ಗೆ ರಾಜ್ಕುಮಾರ್ ಅವರ ಚಿತ್ರಗಳಲ್ಲಿ ನೀಡಿದ ಸಂದೇಶ ನನಗೆ ಮಾರ್ಗದರ್ಶನವಾಗಿತ್ತು ಎಂದು ತಿಳಿಸಿದರು.
ನಟ ನಿಖಿಲ್ಗೌಡ ಮಾತನಾಡಿ, ಈ ಚಿತ್ರದಲ್ಲಿ ಪ್ರೇಮಕಥಾನಕವಿದ್ದರೂ ಸೆಂಟಿಮೆಂಟ್, ಆಕ್ಷನ್ ಓರಿಯೆಂಟೆಡ್ ಸಿನಿಮಾ ಆಗಲಿದೆ. ಕಾಲೇಜು ಹುಡುಗನ ಪಾತ್ರ ನನ್ನದಾಗಿದ್ದು, ಸಿನಿಮಾರಂಗದ ಆಸಕ್ತಿಯಿಂದಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ ಎಂದರು.
ನಿರ್ದೇಶಕ ಮಹದೇವ್ ಮಾತನಾಡಿ, ಇದೊಂದು ಒಳ್ಳೆ ಸಿನಿಮಾ. ವಜ್ರಕ್ಕೆ ಸೂಕ್ತ ಆಕಾರ ನೀಡಿದಾಗಲೇ ಹೊಳಪು ಬರುವಂತೆ ನಿಖಿಲ್ನಲ್ಲಿರುವ ಪ್ರತಿಭೆ ಹೊರಹೊಮ್ಮಲು ಇದೊಂದು ಸೂಕ್ತ ವೇದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಬಹುಕೋಟಿ ಬಜೆಟ್ನ ಈ ಚಿತ್ರದ ಚಿತ್ರೀಕರಣ ಬೆಂಗಳೂರು ಹಾಗೂ ಹೈದ್ರಾಬಾದ್ನಲ್ಲಿ ನಡೆಯಲಿದೆ. ಆಗಸ್ಟ್ 2 ರಂದು ಚಿತ್ರ ಸೆಟ್ಟೇರಲಿದೆ ಎಂದು ತಿಳಿಸಿದರು. ಈ ವೇಳೆ ಜಮೀರ್ ಅಹಮದ್, ಕೆ.ಸಿ.ಎನ್.ಮೋಹನ್ ಮತ್ತಿತರರು ಹಾಜರಿದ್ದರು.