ಬೆಂಗಳೂರು: ಲ್ಯಾವೆಲ್ಲೆ ರಸ್ತೆಯಲ್ಲಿರುವ ಸರ್ವಿಸ್ ಅಪಾರ್ಟ್ಮೆಂಟ್ವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.
ಅಗ್ರಹಾರ ದಾಸರಹಳ್ಳಿಯ ದಿಲೀಪ್ ಕುಮಾರ್(30) ಹಾಗೂ ಚನ್ನರಾಯನಪಟ್ಟಣದ ಯೋಗೇಶ್(26) ಬಂಧಿತರು. ಪಶ್ಚಿಮ ಬಂಗಾಳ, ಮುಂಬೈ ಹಾಗೂ ಭೋಪಾಲ್ ಮೂಲದ ಮೂವರು ಯುವತಿಯರನ್ನು ರಕ್ಷಿಸಲಾಗಿದೆ. ಆರು ಸಾವಿರ ರುಪಾಯಿ ನಗದು, 2 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರುಣ್ ಭಾಗ್ ಎಂಬಾತ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಬಾಡಿಗೆ ಪಡೆದು ಹೊರ ರಾಜ್ಯಗಳಿಂದ ಯುವತಿಯರನ್ನು ಕಳ್ಳಸಾಗಣೆ ಮಾಡಿಕೊಂಡು ಕರೆತರುತ್ತಿದ್ದ. ಅಂತರ್ಜಾಲದಲ್ಲಿ ಮೊಬೈಲ್ ಫೋನ್ ನಂಬರ್ ನೀಡಿ ಗ್ರಾಹಕರ ಸಂಪರ್ಕಿಸುತ್ತಿದ್ದ. ಆಸಕ್ತ ಗ್ರಾಹಕರು ಕರೆ ಮಾಡಿದಾಗ ಅವರನ್ನು ಸಮೀಪದ ಹೋಟೆಲ್ ಬಳಿ ಕರೆಸಿಕೊಳ್ಳುತ್ತಿದ್ದ. ಅಲ್ಲಿಂದ ಮತ್ತಿಬ್ಬರು ಆರೋಪಿಗಳಾದ ಗಿರೀಶ್ ಮತ್ತು ವೆಂಕಟೇಶ್ ಎಂಬುವರು ಅವರನ್ನು ದ್ವಿಚಕ್ರ ವಾಹನದಲ್ಲಿ ಅಪಾರ್ಟ್ಮೆಂಟ್ಗೆ ಕರೆದುಕೊಂಡು ಹೋಗುತ್ತಿದ್ದರು.
ಗ್ರಾಹಕರಿಂದ ಮೂರು ತಾಸಿಗೆ 25 ಸಾವಿರದಿಂದ 30 ಸಾವಿರ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಅರುಣ್, ಗಿರೀಶ್ ಹಾಗೂ ವೆಂಕಟೇಶ್ಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.