ಬೆಂಗಳೂರು,ಮೇ 27: ಸಿನಿಮಾ ಚಿತ್ರೀಕರಣಕ್ಕೆಂದು ಶಿವಮೊಗ್ಗಕ್ಕೆ ತೆರಳಿದ್ದಾಗ ನಿರ್ಮಾಪಕ ಅತ್ಯಾಚಾರಕ್ಕೆ ಯತ್ನಿಸಿದನೆಂದು ಆರೋಪಿಸಿ ನೊಂದ ಯುವತಿ ಶಿವಮೊಗ್ಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಬಿಸಿಲುಕುದುರೆ ಚಿತ್ರದ ಚಿತ್ರೀಕರಣಕ್ಕೆಂದು ಮೇ 21ರಂದು ನಿರ್ಮಾಪಕ ಕುಮಾರ್ ಎಂಬಾತ ಹೊಸ ನಾಯಕ ಹಾಗೂ ನಾಯಕಿ ಜೊತೆ ತಂಡವೊಂದನ್ನು ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ.
ಆ ಸಂದರ್ಭದಲ್ಲಿ ನಾಯಕಿಯ ಫ್ರೆಂಡ್ ಪಾತ್ರದಲ್ಲಿ ನಟಿಸಲು ತೆರಳಿದ್ದ ರೇಷ್ಮಾ(ಹೆಸರು ಬದಲಿಸಲಾಗಿದೆ) ಎಂಬ ಯುವತಿ ಮೇಲೆ ನಿರ್ಮಾಪಕ ಕುಮಾರ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆಕೆ ಅಲ್ಲಿಂದ ತಪ್ಪಿಸಿಕೊಂಡು ದೂರವಾಣಿ ಮೂಲಕ ಪತಿಗೆ ವಿಷಯ ತಿಳಿಸಿದ್ದಾಳೆ. ಪತಿ ಠಾಣೆಯಲ್ಲಿ ದೂರು ನೀಡಿ ಬೆಂಗಳೂರಿಗೆ ಮರಳುವಂತೆ ತಿಳಿಸಿದ್ದರಿಂದ ಆಕೆ ಶಿವಮೊಗ್ಗದಲ್ಲಿ ಮಹಿಳಾ ಠಾಣೆಗೆ ದೂರು ನೀಡಿ ವಾಪಸ್ ನಗರಕ್ಕೆ ಬಂದು ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರ ಗಮನಕ್ಕೆ ತಂದಿದ್ದಾರೆ.
ಅಲ್ಲದೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಮಂಜುಳಾ ಮಾನಸ ಅವರಿಗೂ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಯುವತಿ ಪತಿ ದೂರವಾಣಿ ಕರೆ ಮಾಡಿ ನಿರ್ಮಾಪಕನನ್ನು ವಿಚಾರಿಸಿದಾಗ ಅವರಿಗೂ ಧಮಕಿ ಹಾಕಿದ್ದಾನೆ ಎಂಬ ಆರೋಪ ಸಹ ಕೇಳಿಬಂದಿದೆ. ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿರ್ಮಾಪಕನ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೋ ಎಂಬುದು ಕಾದುನೋಡಬೇಕಿದೆ.