ಕರ್ನಾಟಕ

ಮೈಲಾ­ಪುರದ ಮೈಲಾರಲಿಂಗೇಶ್ವರ ಜಾತ್ರೆ: ಪಲ್ಲಕ್ಕಿ ಮೇಲೆ ಹಾರಿಸಲು ಭಕ್ತರು ತಂದ 835 ಕುರಿಮರಿ ವಶ

Pinterest LinkedIn Tumblr

ma

ಯಾದಗಿರಿ ತಾಲ್ಲೂಕಿನ ಐತಿಹಾಸಿಕ ಮೈಲಾ­ಪುರದ ಮೈಲಾರಲಿಂಗೇಶ್ವರ ಜಾತ್ರೆ-ಯಲ್ಲಿ ಪಲ್ಲಕ್ಕಿ ಮೇಲೆ ಹಾರಿಸಲು ಭಕ್ತರು ತಂದಿದ್ದ 835 ಕುರಿಮರಿಗಳನ್ನು ಜಿಲ್ಲಾಡಳಿತ ­ಬುಧವಾರ  ವಶಪಡಿಸಿಕೊಂಡಿದೆ.

ಮೈಲಾಪುರದ ಸುತ್ತಲೂ 6 ಚೆಕ್‌ಪೋಸ್ಟ್‌ಗಳನ್ನು ಮಾಡಲಾಗಿದ್ದು, ಕಂದಾಯ, ಪೊಲೀಸ್‌, ಪಶು ಸಂಗೋಪನೆ ಇಲಾಖೆಯ ಅಧಿಕಾರಿ­ಗಳನ್ನು ನಿಯೋಜಿಸಲಾಗಿದೆ. ಜಾತ್ರೆಗೆ ಬರುವ ಭಕ್ತರನ್ನು ತಪಾಸಣೆ ಮಾಡಲಾಗುತ್ತಿದ್ದು, ಅವರು ತಮ್ಮೊಂದಿಗೆ ತಂದಿರುವ ಕುರಿಮರಿ­ಗಳನ್ನು ವಶಕ್ಕೆ ಪಡೆಯಲಾಗುತ್ತದೆ.

ಮಲ್ಲಯ್ಯನ ಪಲ್ಲಕ್ಕಿ ಉತ್ಸವವು ಹೊನ್ನಕೆರೆಗೆ ತೆರಳುವ ಸಂದರ್ಭದಲ್ಲಿ ಭಕ್ತರು ಕುರಿಮರಿಗಳನ್ನು ಹಾರಿಸುವ ಸಂಪ್ರದಾಯ ಇಲ್ಲಿ ನಡೆದುಕೊಂಡು ಬಂದಿದೆ. ಹೀಗೆ ಮಾಡುವುದರಿಂದ ವರ್ಷ ಪೂರ್ತಿ ಕುರಿಗಳಿಗೆ ಯಾವುದೇ ರೋಗ ಬರುವುದಿಲ್ಲ ಎಂಬ ನಂಬಿಕೆ­ಯನ್ನು ಭಕ್ತರು ಇಟ್ಟುಕೊಂಡಿದ್ದಾರೆ.

ಇಂತಹ ಆಚರಣೆಯಿಂದ ಪ್ರಾಣಿ ಹಿಂಸೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತು­ಕೊಂಡ ಜಿಲ್ಲಾಡಳಿತ, ಕುರಿ ಹಾರಿಸು­ವುದನ್ನು ಸಂಪೂರ್ಣ ನಿಷೇಧಿಸುತ್ತ ಬಂದಿದೆ. ಆದರೂ ಭಕ್ತಾದಿಗಳು ಕುರಿಮರಿ­ಗಳನ್ನು ತೆಗೆದುಕೊಂಡು ಬರುವುದು ನಿಂತಿಲ್ಲ. ಈ  ಕಾರಣಕ್ಕೆ ಭಕ್ತರು ತರುವ ಕುರಿಮರಿಗಳನ್ನು ಕಾಣಿಕೆ ರೂಪದಲ್ಲಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣಭೂಪಾಲರೆಡ್ಡಿ ನೇತೃತ್ವದಲ್ಲಿ ಕುರಿ ಸಂಗ್ರಹಣಾ ಕೇಂದ್ರವನ್ನು ಮೈಲಾಪುರ­ದಲ್ಲಿ ತೆರೆಯಲಾಗಿದೆ. ದೂರದ ಪ್ರಯಾಣದಿಂದ ಬಳಲಿರುವ ಕುರಿಮರಿಗಳಿಗೆ ಇಲಾಖೆಯ ಸಿಬ್ಬಂದಿ ಹಾಲು ಕುಡಿಸುವ ಮೂಲಕ ಆರೈಕೆ ಮಾಡಿದರು.

‘ಮೈಲಾಪುರದ ಸುತ್ತ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ  835 ಕುರಿಮರಿ­ಗಳನ್ನು ವಶಕ್ಕೆ ಪಡೆಯಲಾಗಿದೆ. ಈಗಾಗಲೇ 400 ಕುರಿಮರಿಗಳನ್ನು ಆರೈಕೆಗಾಗಿ ಶಹಾಪುರದ ಪಶು ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ಡಾ. ಶರಣಭೂಪಾಲರಡ್ಡಿ ತಿಳಿಸಿದರು.
ಈ ಕುರಿಮರಿಗಳನ್ನು ಯಾದಗಿರಿ, ಗುರು­ಮಠಕಲ್‌ನ ಪಶು ಚಿಕಿತ್ಸಾ ಕೇಂದ್ರದಲ್ಲಿ ಹರಾಜು ಮಾಡಲಾ­ಗುತ್ತಿದ್ದು, ಬಂದ ಆದಾಯವನ್ನು ದೇವ­ಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ.

Write A Comment