ಕರ್ನಾಟಕ

ಮರಿಯಪ್ಪ ಧರ್ಮಸಂಸ್ಥೆ ಶತಮಾನೋತ್ಸವ: ದಾನ ಮಾಡುವ ಮನಸ್ಥಿತಿ ರೂಢಿಸಿಕೊಳ್ಳಿ: ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಸಲಹೆ

Pinterest LinkedIn Tumblr

kalam

ಬೆಂಗಳೂರು: ‘ಸಮಾಜದಿಂದ ಏನನ್ನು ಪಡೆದು­ಕೊಳ್ಳ­ಬೇಕು ಎಂಬ ವಿಷಯಕ್ಕಾಗಿ ಸಾಮ್ರಾಜ್ಯವೇ ಒಡೆದು ಹೋಗಿದೆ. ನಾಗರಿಕತೆಯೇ ನಾಶವಾಗಿದೆ. ಸಮಾಜಕ್ಕೆ ಏನನ್ನಾದರೂ ಕೊಡಬಹುದು ಎಂಬ ಮನಸ್ಥಿತಿಯಿಂದ ದೇಶ ಕಟ್ಟಬಹುದು, ನಾಡು ಉಳಿಸಬಹುದು’ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ನುಡಿದರು.

ನಗರದಲ್ಲಿ ಶುಕ್ರವಾರ ಬಿ.ಕೆ.ಮರಿಯಪ್ಪ ಧರ್ಮ­ಸಂಸ್ಥೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಮಾನವತೆಯ ಮುಖ್ಯ ಗುರಿ ದಾನ ಮಾಡು­ವುದು. ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂಬ ಮನೋಭಾವ ಮೂಡಬೇಕು. ಏನು ತೆಗೆದು­ಕೊಳ್ಳಬೇಕು ಎಂಬ ಮನಸ್ಥಿತಿ ಬಂದಾಗ ಸಮಸ್ಯೆ ಉದ್ಭವಿಸುತ್ತವೆ’ ಎಂದರು.

‘ಬಿ.ಕೆ.ಮರಿಯಪ್ಪ ತಮ್ಮ 35ನೇ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳಿಗಾಗಿ ಎಲ್ಲಾ ಆಸ್ತಿ ದಾನ ಮಾಡಿದ್ದು ವಿಶೇಷ. ಅಂಥ ಯುವಕನ ಕನಸು ಎಷ್ಟೊಂದು ಅದ್ಭುತವಾಗಿದ್ದವು ಅಲ್ಲವೇ? ಚಿಕ್ಕ ವಯಸ್ಸಿನಲ್ಲೇ ಸಮಾಜಮುಖಿ ಕೆಲಸ ಮಾಡಿ ಮಾದರಿ ಎನಿಸಿಕೊಂಡರು’ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ದಾನ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಹಣವನ್ನೇ ಕೊಡಬೇಕು ಎಂದು ಹೇಳುತ್ತಿಲ್ಲ. ಒಂದು ನಗು ಕೊಡಿ, ಕಷ್ಟದಲ್ಲಿರು­ವವರಿಗೆ ಸಾಂತ್ವನ ಹೇಳಿ, ಶಿಕ್ಷಣ ನೀಡಿ’ ಎಂದರು.

ರಾಜ್ಯಪಾಲ ವಜುಭಾಯಿ ವಾಲಾ, ‘ಅಕ್ಷರವನ್ನು ಎಲ್ಲಿ ಬೇಕಾದರೂ ಕಲಿಯಬಹುದು. ಆದರೆ, ಕೆಲವೇ ಸಂಸ್ಥೆಗಳಲ್ಲಿ ಮಾತ್ರ ಸಂಸ್ಕಾರ ಸಿಗುತ್ತದೆ. ಅದರಲ್ಲಿ ಬಿ.ಕೆ.ಮರಿಯಪ್ಪ ಧರ್ಮಸಂಸ್ಥೆಯೂ  ಒಂದು’ ಎಂದು ನುಡಿದರು.

ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತ­ಕುಮಾರ್‌, ಶತಮಾ­ನೋತ್ಸವ ಸಮಿತಿ ಅಧ್ಯಕ್ಷ ಎನ್‌.ಪುಟ್ಟರುದ್ರ, ಉಪಾಧ್ಯಕ್ಷ     ಬಿ.ವಿ.­ವಿಜೇಂದ್ರ­ರಾವ್‌, ಸಿ.ರಾಜಶೇಖರ್‌ ಇದ್ದರು.

ವಿದ್ಯಾರ್ಥಿಗಳಿಗೆ ಪಾಠ
‘ಶಿಕ್ಷಣ ಮುಗಿಸಿದ ಮೇಲೆ ಏನನ್ನು ತೆಗೆದು­ಕೊಂಡು ಹೋಗುತ್ತೀರಿ, ಮಕ್ಕಳೇ’ ಎಂದು ಸಮಾ­ರಂಭದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ­ಗಳನ್ನು ಕಲಾಂ ಪ್ರಶ್ನಿಸಿದರು. ಆಗ ಮಕ್ಕಳು  ‘ಜ್ಞಾನ’ ಎಂದಾಗ ಜೋರು ಚಪ್ಪಾಳೆ.

‘ಜ್ಞಾನವೆಂದರೆ ಸೃಜನಶೀಲತೆ, ಭಕ್ತಿ ಭಾವ ಹಾಗೂ ಧೈರ್ಯ. ಸೃಜನಶೀಲತೆ ಎಂದರೆ ಕಲಿಯು ವಿಕೆ. ಕಲಿಯುವಿಕೆಯಿಂದ ಸೃಜನ ಶೀಲತೆ ಬರುತ್ತದೆ. ಸೃಜನಶೀಲತೆಯಿಂದ ಯೋಚ­ನಾಶಕ್ತಿ ಹೆಚ್ಚುತ್ತದೆ. ಯೋಚನಾ­ಶಕ್ತಿಯಿಂದ ಜ್ಞಾನ ಗಳಿಸಬಹುದು. ಜ್ಞಾನದಿಂದ ಮಹಾನ್‌ ವ್ಯಕ್ತಿಗಳಾಗ ಬಹುದು’ ಎಂದು ಮಕ್ಕಳಿಂದಲೇ ಈ ವಾಕ್ಯ ಹೇಳಿಸಿದರು.

‘ಮತ್ತೊಂದು ಅಂಶವೆಂದರೆ ಭಕ್ತಿಭಾವ. ಹೃದಯದಲ್ಲಿ ಭಕ್ತಿಭಾವ ಇದ್ದಾಗ ಅಲ್ಲಿ ಒಳ್ಳೆಯ ಗುಣನಡತೆ ಇರುತ್ತದೆ. ಆಗ ಮನೆಯಲ್ಲಿ ಶಾಂತಿ ಇರುತ್ತದೆ. ಇದರಿಂದಾಗಿ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ’ ಎಂದರು.

‘ಮೂರನೇ ಅಂಶ ಧೈರ್ಯ. ಭಿನ್ನವಾಗಿ ಯೋಚಿ ಸಲು, ಆವಿಷ್ಕಾರಕ್ಕೆ, ಹೊಸ ಪ್ರಪಂಚ ಕಂಡು ಕೊಳ್ಳಲು, ಅಸಾಧ್ಯವಾದುದನ್ನು ಸಾಧಿಸಲು, ಕಷ್ಟು ದಾಟಿ ನಿಲ್ಲಲು ಧೈರ್ಯ ಬೇಕು’ ಎಂದು ಕಿವಿಮಾತು ಹೇಳಿದರು.

Write A Comment