ರಾಮನಗರ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯು ತನ್ನ ಲೈಂಗಿಕ ಸಾಮರ್ಥ್ಯವನ್ನು ಕಡಿಮೆ ಮಾಡುವ ಯಾವುದಾದರೂ ಔಷಧಿಯನ್ನು ಸೇವಿಸಿದ್ದಾರೆಯೇ ಎಂಬುದನ್ನು ಪತ್ತೆ ಮಾಡಲು ಅವರ ರಕ್ತ ಮತ್ತು ಮೂತ್ರದ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂಬ ವಿಷಯವನ್ನು ಸಿಐಡಿ ಪೊಲೀಸರು ಮಂಗಳವಾರ ರಾಮನಗರ ನ್ಯಾಯಾಲಯಕ್ಕೆ ಸಲ್ಲಿಸಿರುವ ವೈದ್ಯಕೀಯ ವರದಿಯಲ್ಲಿ ಹೇಳಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಕುರಿತು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ಹೆಚ್ಚಿನ ಪರೀಕ್ಷೆ ಅಗತ್ಯವಿರುವುದರಿಂದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ನಿತ್ಯಾನಂದ ಸ್ವಾಮೀಜಿ ಅವರು ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಸಂಬಂಧಿಸಿದಂತೆ ಮಾತ್ರೆಗಳನ್ನು ಸೇವಿಸುತ್ತಿರುವುದರಿಂದ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ ಕುಂದಿರಬಹುದು ಎಂದು ವೈದ್ಯರ ತಂಡ ಅಭಿಪ್ರಾಯ ಪಟ್ಟಿದೆ.
ನಿತ್ಯಾನಂದ ಸ್ವಾಮೀಜಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅಸಮರ್ಥ ಎಂಬುದಕ್ಕೆ ಯಾವುದೇ ಪುರಾವೆ ವೈದ್ಯಕೀಯ ತಪಾಸಣೆ ವೇಳೆ ಲಭ್ಯವಾಗಿಲ್ಲ ಎಂದು ಡಾ.ಸಿ.ಆರ್. ಚಂದ್ರಶೇಖರ್, ಡಾ.ಕೆ.ಎಂ. ವೀರಣ್ಣಗೌಡ, ಡಾ.ಎಸ್.ವೆಂಕಟರಾಘವ, ಡಾ.ಎಚ್. ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನಿತ್ಯಾನಂದ ಸ್ವಾಮೀಜಿ ತನ್ನ ವಯಸ್ಸಿಗೆ ತಕ್ಕಂತೆ ದೈಹಿಕ ಬೆಳವಣಿಗೆ ಹೊಂದಿದ್ದಾರೆ. ಅವರ ವೃಷಣಗಳು ಮತ್ತು ಶಿಶ್ನ ವಯಸ್ಸಿಗೆ ತಕ್ಕಂತೆ ಸಹಜ ಬೆಳವಣಿಗೆ ಕಂಡಿವೆ. ಶಿಶ್ನದ ‘ಡೋಪ್ಲರ್’ ಪರೀಕ್ಷೆಗೆ ನಿತ್ಯಾನಂದ ಒಪ್ಪಿಗೆ ನೀಡದ ಕಾರಣ ಮತ್ತಷ್ಟು ನಿಖರ ಅಂಶಗಳು ಲಭ್ಯವಾಗಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಅವರು ಯಾವುದೇ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆಯೂ ಕುರುಹುಗಳು ಲಭ್ಯವಾಗಿಲ್ಲ ಎಂಬ ಅಂಶವನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಗೊತ್ತಾಗಿದೆ.
ಆಶ್ರಮದ ಪ್ರಕಟಣೆ: ಲೈಂಗಿಕ ಚಟುವಟಿಕೆ ನಡೆಸಲು ನಿತ್ಯಾನಂದ ಸ್ವಾಮೀಜಿ ಸಮರ್ಥ ಎಂಬ ಅಭಿಪ್ರಾಯವನ್ನು ವೈದ್ಯಕೀಯ ವರದಿಯಲ್ಲಿ ಎಲ್ಲಿಯೂ ವೈದ್ಯರು ತಿಳಿಸಿಲ್ಲ. ಅಲ್ಲದೆ ಲೈಂಗಿಕ ಕ್ರಿಯೆಯಿಂದ ಬರುವ ‘ಹರ್ಪೆಸ್’ ಸೇರಿದಂತೆ ಯಾವುದೇ ಕಾಯಿಲೆಯೂ ಸ್ವಾಮೀಜಿಗೆ ಇಲ್ಲ ಎಂಬುದನ್ನು ವರದಿ ದೃಢಪಡಿಸಿದೆ ಎಂದು ಬಿಡದಿ ಧ್ಯಾನಪೀಠ ಆಶ್ರಮದ ಪ್ರಕಟಣೆ ತಿಳಿಸಿದೆ.