ಮೊಳಕಾಲ್ಮುರು: ಋತುಮತಿಯಾದ ಬಾಲಕಿಗೆ ಮನೆ ಪ್ರವೇಶ ಬಹಿಷ್ಕರಿಸುವ ಮೌಢ್ಯಾಚರಣೆಯ ಘಟನೆ ಗುರುವಾರ ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಗೊಲ್ಲರಹಟ್ಟಿಯಲ್ಲಿರುವ ದಂಪತಿಯ 12 ವರ್ಷದ ಬಾಲಕಿಯೊಬ್ಬಳು ಋತುಮತಿಯಾಗಿದ್ದ ಕಾರಣ ಗೊಲ್ಲರಹಟ್ಟಿಯಲ್ಲಿ ನಡೆದು ಕೊಂಡು ಬಂದಿದೆ ಎನ್ನಲಾದ ಮೂಢ ನಂಬಿಕೆ ಪ್ರಕಾರ ಮನೆ ಹೊರಗಡೆ ಹೊಂಗೆ ಹಾಗೂ ಬೇವಿನ ರೆಂಬೆಯ ತಾತ್ಕಾಲಿಕ ಪದಿ (ಕುಟೀರ) ನಿರ್ಮಿಸಿ ಅದರಲ್ಲಿ ವಾಸಕ್ಕೆ ಇಡಲಾಗಿತ್ತು.
ಈ ಬಗ್ಗೆ ಮಾಹಿತಿ ಹೊರೆತು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಜಿ.ಹೊನ್ನಪ್ಪ ಸ್ಥಳಕ್ಕೆ ಧಾವಿಸಿ, ಪೋಷಕರು ಹಾಗೂ ಸ್ಥಳೀಯರ ಮನವೊಲಿಸಿದರು. ‘ಇಂಥ ಆಚರಣೆ ಕಾನೂನು ಬಾಹಿರವಾಗಿದೆ. ಈ ಆಚರಣೆಯಿಂದ ಏನೂ ಅರಿಯದ ಬಾಲಕಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಬೇಕಾದ ಪೋಷಕರೇ ಇದಕ್ಕೆ ಮುಂದಾಗಿರುವುದು ಸರಿಯಲ್ಲ’ ಎಂದು ಮನವೊಲಿಸಿದರು.
ಮನೆಯಲ್ಲಿ ಎಲ್ಲರ ಜತೆ ಇರಬೇಕಾದ ಬಾಲಕಿ ಪ್ರಕೃತಿದತ್ತವಾಗಿ ಋತುಮತಿಯಾದ ಕಾರಣಕ್ಕೆ ಹೊರಗಡೆ ವಾಸ ಮಾಡಿಸುವುದು ಸರಿಯಲ್ಲ. ವಿಷಜಂತುಗಳ ಕಡಿತಕ್ಕೆ ಒಳಗಾದರೆ ಯಾರು ಹೊಣೆ? ಮೂಢನಂಬಿಕೆಯಿಂದ ಹೊರಬಂದು ಮಾದರಿ ಸಮಾಜ ಸ್ಥಾಪನೆಗೆ ಸಹಕರಿಸಿ ಎಂದು ಮನವೊಲಿಸಿದ್ದರಿಂದ ಪೋಷ ಕರು ಪದಿಯನ್ನು ತೆಗೆದು ಹಾಕಿ ಮೂಢ ನಂಬಿಕೆ ಕೈಬಿಡುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್, ಪಿಡಿಒ ಬಸರಾಜ್, ಅಂಗನವಾಡಿ, ಆಶಾ ಕಾರ್ಯಕರ್ತೆ ಯರು ಉಪಸ್ಥಿತರಿದ್ದರು.