ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಭೀಮಗಡ ವನ್ಯಧಾಮ ವ್ಯಾಪ್ತಿಯ ಕಬನಾಳಿ ಬಳಿ ಚಿಕ್ಕಮಗಳೂರಿನ ನರಹಂತಕ ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕಬನಾಳಿ ಗ್ರಾಮದ ಹೊರವಲಯದಲ್ಲಿರುವ ಭತ್ತದ ಗದ್ದೆಗಳ ಬಳಿ ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಬೆಂಕಿ ಕಾಯಿಸುತ್ತಾ ಕುಳಿತಿದ್ದ ಗ್ರಾಮದ ರೈತರು ಹುಲಿಯನ್ನು ನೋಡಿ ಆಘಾತಕ್ಕೀಡಾಗಿದ್ದಾರೆ.
ಕೂಡಲೇ ಮನೆಯತ್ತ ಓಡಿದ ರೈತರು ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ, ತಾವೂ ಮನೆ ಸೇರಿದ್ದಾರೆ.
ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಖಾನಾಪುರ ಎಸಿಎಫ್ ಪಿಕೆಎಂ ಪ್ರಶಾಂತ, ಭೀಮಗಡ ಆರ್ಎಫ್ಒ ಬಸವರಾಜ ಉಳವಣ್ಣವರ ಹಾಗೂ ಅರಣ್ಯ ಸಿಬ್ಬಂದಿ ಮಂಗಳವಾರ ಹುಲಿಯ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದರು.