ಕರಾವಳಿ

ವಿದ್ಯಾರ್ಥಿಗಳು ಇತಿಹಾಸ ಸೃಷ್ಟಿಸುವವರಾಗಬೇಕು : ಎಮ್ ಎಲ್ ಸಿ ರವಿಕುಮಾರ್ ಎನ್

Pinterest LinkedIn Tumblr

ಮಂಗಳೂರು  : ವಿದ್ಯಾರ್ಥಿಗಳು ಇತಿಹಾಸವನ್ನು ಓದಿದವರು ಮಾತ್ರರಾಗಬಾರದು, ಬದಲಾಗಿ ಇತಿಹಾಸ ಸೃಷ್ಟಿಸುವವರಾಗಬೇಕು. ಉತ್ತಮ ಗುಣಮಟ್ಟದ ಶಿಕ್ಷಣವು ಸಮಾಜದ ಗುಣಮಟ್ಟದ ಹೆಚ್ಚಳಕ್ಕೆ ಕಾರಣವಾಗಿರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಎನ್ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದ ಬಡತನದಿಂದ ಸಮಾಜ ಸೊರಗುತ್ತಿದೆ. ಪ್ರತಿಯೊಂದು ಕಾಲೇಜು ಯಶಸ್ವಿಯಾಗಿ ಮುನ್ನಡೆಯಲು ನಾಯಕತ್ವ, ಶೈಕ್ಷಣಿಕ ವಾತಾವರಣ ಬಹಳ ಮುಖ್ಯ. ಉತ್ತಮ ನಾಯಕತ್ವದಿಂದ ಕಾಲೇಜು ಪ್ರಗತಿ ಹೊಂದಲು ವಿದ್ಯಾರ್ಥಿ ಸಂಘದ ಪಾತ್ರ ಅಗತ್ಯವೆಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಒಂದು ಉತ್ತಮ ಸಂಸ್ಥೆ ನಿರ್ಮಾಣವಾಗಬೇಕಾದರೆ ವಿದ್ಯಾರ್ಥಿ ಸಂಘದ ಪಾತ್ರ ಅತ್ಯಗತ್ಯ. ಸಾಮಥ್ರ್ಯ ವೃದ್ಧಿ, ಇಚ್ಛಾಶಕ್ತಿ, ಅವಕಾಶ ನಮ್ಮ ಮೂಲಮಂತ್ರವಾಗಬೇಕು. ವಿದ್ಯಾರ್ಥಿಗಳು ಸೋಲಿನಿಂದ ಎದೆಗುಂದಬಾರದು. ಸಮಸ್ಯೆಗಳನ್ನು ವೈಭವೀಕರಿಸದೆ ಪರಿಹಾರದ ಕಡೆ ಗಮನಹರಿಸಬೇಕು ಎಂದರು.

ಪ್ರಾಂಶುಪಾಲ ಡಾ ಉದಯ ಕುಮಾರ್ ಎಂ ಎ ತಮ್ಮ ವಿದ್ಯಾರ್ಥಿ ಜೀವನದ ನೆನಪನ್ನು ಹಂಚಿಕೊಳ್ಳುತ್ತಾ ಒಬ್ಬ ಉತ್ತಮ ನಾಯಕನಿಗೆ ಕೇಳುವ ತಾಳ್ಮೆ ಇರಬೇಕು. ಹಾಗಿದ್ದರೆ ಮಾತ್ರ ಆತನಿಗೆ ಹೇಳುವ ಹಕ್ಕಿರುತ್ತದೆ. ನಾವು ಓದುವುದಕ್ಕಿಂತ ಕಲಿಯುವ ಕಡೆ ಗಮನಹರಿಸೋಣ. ಅನುಭವದ ಮೂಲಕ ಗಳಿಸಿದ ಪಾಠವು ಬದುಕಿನ ಪಾಠವಾಗಿರುತ್ತದೆ ಎಂದರು.

ವಿದ್ಯಾರ್ಥಿ ಸಂಘದ ಪದಾದಿಕಾರಿಗಳು ಹಾಗೂ ತರಗತಿ ಪ್ರತಿನಿಧಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಪತ್ ಬಿ, ಕಾರ್ಯದರ್ಶಿ ಮಯೂರ್ ಎಂ ಬಿ, ಸಹ ಕಾರ್ಯದರ್ಶಿ ವರ್ಷಿತಾ ಶೆಟ್ಟಿ, ಲಲಿತಕಲಾ ಸಂಘದ ಕಾರ್ಯದರ್ಶಿ ಅಭಿಷೇಕ್ ಅಂಚನ್ ಹಾಗೂ ಸಹ ಕಾರ್ಯದರ್ಶಿ ನಿಶಾ ಕುಮಾರಿ ಕೆ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಎ. ಹರೀಶ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಪತ್ ಬಿ ವಂದಿಸಿದರು. ವಿದ್ಯಾರ್ಥಿನಿ ತೇಜಶ್ರೀ ಶೆಟ್ಟಿ ನಿರೂಪಿಸಿದರು.

Comments are closed.