ಕರಾವಳಿ

ದೀಪ ಹಚ್ಚುವಾಗ ತುಪ್ಪದ ಕೈಯಲ್ಲಿ ಎಳ್ಳೆಣ್ಣೆ ಮುಟ್ಟ ಬಾರದು..ಯಾಕೆ?

Pinterest LinkedIn Tumblr

ಇದೊಂದು ಮಹಾ ಜಿಜ್ಞಾಸೆಯ ವಿಷಯ ಆಗಿದೆ. ಒಬ್ಬೊಬ್ಬರು ಒಂದೊಂದು ತರಹ ಹೇಳಿ ತಲೆ ಕೆಡಿಸಿ ಬಿಡುತ್ತಾರೆ. ನಿಜವಾದ ತತ್ವಗಳು, ವಾಡಿಕೆಗಳೇನು? ಅನೇಕ ಜನ ದೂರದರ್ಶನ ವಾಹಿನಿಗಳ ಪಾಠಗಳಿಂದ ಏನೇನೋ ಮಾಡ ಹೋಗಿ ಕೊನೆಗೆ ಗೊಂದಲದಲ್ಲಿದ್ದಿದ್ದೂ ಇದೆ. ನಾವು ‘ತಸ್ಮಾತ್ ಶಾಸ್ತ್ರ ಪ್ರಮಾಣೇಷು’ ಎಂದಂತೆ ಶಾಸ್ತ್ರ ವಚನವನ್ನು ಮಾತ್ರ ಹೇಳಬಹುದಷ್ಟೆ.

ತಿಲ ತೈಲ (ಎಳ್ಳೆಣ್ಣೆ) ಮತ್ತು ಘೃತ (ತುಪ್ಪ) ದೀಪಗಳು ಮನೆಯೊಳಗೆ ದೇವರ ಕೋಣೆಯಲ್ಲಿಡಲು ಯೋಗ್ಯ. ಇನ್ಯಾವುದೇ ತೈಲಗಳು ದೇವರಿಗೆ ಯೋಗ್ಯವಲ್ಲ. ಆ ಇತರ ತೈಲಗಳು ವಾಮ ಪ್ರಯೋಗಾದಿಗಳಿಗೆ ಸಂಬಂಧಿಸಿದ್ದಾಗಿದೆ. ತಿಲವು ಪಾಪಹರವಾದರೆ, ಘೃತವು ಮೋಕ್ಷದಾಯಕ.

ಒಂದು ಸ್ಥಂಬದಲ್ಲಿ ಒಂದೇ ದೀಪ ಉರಿಯ ಬೇಕು ಅಥವಾ ದೀಪ ನಮಸ್ಕಾರ, ಉದ್ಘಾಟನೆಗಳ ಸಂದರ್ಭಗಳಲ್ಲಿ ಐದು ದೀಪ ಒಂದೇ ಸ್ಥಂಭದಲ್ಲಿ ಉರಿಯ ಬೇಕು.
ಎರಡು ದೀಪ ಒಂದೇ ಸ್ಥಂಭದಲ್ಲಿದ್ದರೆ ಇದು ಭಿನ್ನಾಭಿಪ್ರಾಯ ಸೂಚಕ. ಮೂರು ಇದ್ದರೆ ಮರಣ ಸೂಚಕ, ನಾಲ್ಕು ಇದ್ದರೆ ಗೊಂದಲ, ಐದು ದೀಪಗಳು ಆರಾಧನೆಗೆ ಮಾತ್ರ.

ಇದರಲ್ಲಿ ಬತ್ತಿಗಳ ಪ್ರಮಾಣ : ಎರಡು ಬತ್ತಿ ದೇಹ ಮತ್ತು ಪ್ರಾಣಗಳ ಸಂಕೇತ, ಮೂರು ಬತ್ತಿ ತ್ರಿಶಕ್ತಿ ರೂಪ, ನಾಲ್ಕು ಬತ್ತಿಯು ಉತ್ತಮವಲ್ಲ, ಐದು ಬತ್ತಿಗಳು ಪಂಚಭೂತಗಳ ಸಂಕೇತ, ಹಾಗಾಗಿ ನಾಲ್ಕು ಬತ್ತಿ ಬಿಟ್ಟು ಯಾವುದನ್ನೂ ಹಾಕ ಬಹುದು ಆದರೂ ಎರಡು ಬತ್ತಿಯೇ ಮನೆಗಳಲ್ಲಿ ಶ್ರೇಷ್ಠ. ದೀಪ ಸ್ಥಂಭ, ದೀಪದ ಇಂಧನ ತೈಲವು ಮಲಿನವಾಗಿರ ಬಾರದು. ಹತ್ತಿ, ಕೀಟಾದಿಗಳು ಬಿದ್ದಿದ್ದರೆ ಅದನ್ನು ಶುಚಿಯಾಗಿಡ ಬೇಕು. ಎಳ್ಳೆಣ್ಣೆ ಮತ್ತು ತುಪ್ಪ ಮಿಶ್ರಣವಾಗಲೇ ಬಾರದು. ಕೈಯಲ್ಲಿ ಯಾವುದಾದರೂ ಬೇರೆ ತೈಲ ಇದ್ದರೆ ಇನ್ನೊಂದು ತೈಲ ಮುಟ್ಟ ಬೇಕಾದರೆ ಕೈಯ್ಯನ್ನು ಪ್ರಕ್ಷಾಳನ (ತೊಳೆದು) ಮಾಡಿಯೇ ಮುಟ್ಟ ಬೇಕು. ಅಂದರೆ ತುಪ್ಪದ ಕೈಯಲ್ಲಿ ಎಳ್ಳೆಣ್ಣೆ ಮುಟ್ಟ ಬಾರದು ಎಂದರ್ಥ.

ದೇವರ ದೀಪವನ್ನು ದೇವರ ಬಲ ಭಾಗದಲ್ಲಿಡ ಬೇಕು. (ಒಂದೇ ದೀಪ ಇಡುವುದಿದ್ದರೆ ಮಾತ್ರ. ಎರಡಿದ್ದರೆ ಎಡ ಬಲಗಳಲ್ಲಿ ಇಡ ಬಹುದು) ದೀಪದ ಮುಖ ಯಾವಾಗಲೂ ನಮ್ಮ ಅಂದರೆ ಪೂಜಿಸುವವರ ಕಡೆಗೆ, ಪೂರ್ವಾಭಿಮುಖ, ಉತ್ತರಾಭಿಮುಖ ಅಥವಾ ದೇವರ ಕಡೆ ಸ್ವಲ್ಪ ವಾಲುವಂತೆಯೂ ಇಡ ಬಹುದು.
ಇದು ಶಾಸ್ತ್ರೋಕ್ತವಾದ ದೀಪ ಲಕ್ಷಣ.

Comments are closed.