ಕರಾವಳಿ

ಸಿ.ಎಂ ಸಿದ್ದರಾಮಯ್ಯ ‘ಒಸಮಾ ಬಿನ್ ಲಾದೆನ್’ ಉತ್ಸವ ಆಚರಿಸಲು ಹೇಸಲ್ಲ : ಸಂಸದ ನಳಿನ್ ಕುಮಾರ್ ಕಿಡಿ

Pinterest LinkedIn Tumblr

ಪುತ್ತೂರು, ಫೆಬ್ರವರಿ,17 : ಕರ್ನಾಟಕದ ಸಾಂಸ್ಕೃತಿಕ, ಆರ್ಥಿಕ ವೈಭವದ ಸಂಕೇತವಾಗಿದ್ದ ವಿಜಯನಗರ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದ ದಂಗೆಕೋರ ಬಹುಮನಿ ಸುಲ್ತಾನರು ಕರ್ನಾಟಕದ ಹಿರಿಮೆಯಾಗಿದ್ದ ವಿಜಯನಗರ ಸಾಮ್ರಾಜ್ಯವನ್ನು ಸರ್ವನಾಶ ಮಾಡಿದ ಕರಾಳ ದಿನಗಳ ಅರಿವಿದ್ದರೂ ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಮನಿ ಸುಲ್ತಾನರ ಹೆಸರಿನಲ್ಲಿ ಬಹುಮನಿ ಉತ್ಸವ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತರಾಷ್ಟ್ರೀಯ ಭಯೋತ್ಪಾದಕ ಅಮೆರಿಕಾದ ವಿಶ್ವ ವಾಣಿಜ್ಯ ಕೇಂದ್ರಕ್ಕೆ ವಿಮಾನ ಬಾಂಬ್ ಸಿಡಿಸಿ ನರಮೇಧ ನಡೆಸಿದ ’ಒಸಮಾ ಬಿನ್ ಲಾದೆನ್’ ಉತ್ಸವ ಆಚರಿಸಲು ಹೇಸಲ್ಲ ಎಂದು ಸಂಸದ ನಳಿನ್‌ಕುಮಾರ್ ಕಟೀಲು ಅವರು ಕಿಡಿ ಕಾರಿದ್ದಾರೆ.

ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುತ್ತು ರತ್ನಗಳನ್ನು ಬೀದಿ ಬದಿ ರಾಶಿ ಹಾಕಿ ಮಾರಾಟ ಮಾಡುವಷ್ಟು ಶ್ರೀಮಂತವಾಗಿದ್ದ ವಿಜಯನಗರ ಸಮ್ರಾಜ್ಯದ ಮೇಲೆ ದಾಳಿ ನಡೆಸಿ ಲೂಟಿ ಮಾಡಿದ, ವಿರೂಪಾಕ್ಷ ದೇಗುಲವನ್ನು ಧ್ವಂಸ ಮಾಡಿದ ದಂಗೆಕೋರ ಬಹುಮನಿ ಸುಲ್ತಾನರ ಕುರಿತು ಇತಿಹಾಸ ಪುಸ್ತಕಗಳು ಏನು ಹೇಳುತ್ತವೆ ಎಂಬುದನ್ನು ಸಿದ್ಧರಾಮಯ್ಯ ಅವರು ಒಮ್ಮೆ ಓದಲಿ ಎಂದರು.

ಈ ಇತಿಹಾಸವನ್ನು ದಾಖಲಿಸಿದ ವಿದೇಶಿ ಇತಿಹಾಸಕಾರರು ಮುಸ್ಲಿಂ ದಂಗೆಕೋರರಾದ ಬಹುಮನಿ ಸುಲ್ತಾನರು ದಕ್ಷಿಣದಲ್ಲಿ ತಮ್ಮ ಪ್ರಾಬಲ್ಯವನ್ನು ಪ್ರತಿಷ್ಠಾಪಿಸಲು ಅತ್ಯಂತ ಶ್ರೀಮಂತ ಅರಸೊತ್ತಿಗೆಯಾದ ವಿಜಯನಗರ ಸಾಮ್ರಾಜ್ಯಕ್ಕೆ ದಾಳಿ ನಡೆಸಿದರು. ಮುತ್ತು, ಅನರ್ಘ್ಯ ಮತ್ತು,ರತ್ನ ,ಚಿನ್ನಾಭರಣಗಳನ್ನು ಲೂಟಿ ಮಾಡಿದರು. ದೇವಾಲಯಗಳ ಮೂರ್ತಿ ಭಂಜನೆ ಮಾಡಿ ಹಾಳುಗೈದರು ಎಂದು ಉಲ್ಲೇಖಿಸಿದ್ದಾರೆ. ಅಂತಹ ದಂಗೆಕೋರರನ್ನು ವೈಭವೀಕರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿರುವುದು ದುರಂತ ಎಂದವರು ಹೇಳಿದರು.

ಮೇಲುಕೋಟೆಯಲ್ಲಿ ದೈವಭಕ್ತ ಅಯ್ಯಂಗಾರ್ ಸಮುದಾಯವನ್ನು ದೀಪಾವಳಿಯ ಹಬ್ಬದ ಸಂದರ್ಭ ನರಮೇಧ ಮಾಡಿದ, ಕರ್ನಾಟಕದ ಚರಿತ್ರೆಯಲ್ಲಿ ವೀರ ಅರಸನೆಂದು ಉಲ್ಲೇಖಿಸಲಾದ ಚಿತ್ರದುರ್ಗದ ಮದಕರಿ ನಾಯಕನ ವಂಶವನ್ನು ಮತ್ತು ಅರಸೊತ್ತಿಗೆಯನ್ನು ನಾಶ ಮಾಡಿದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಿದ ಸಿದ್ದರಾಮಯ್ಯ ನೇತೃತ್ಚದ ಸರ್ಕಾರ ಇದೀಗ ವಿಜಯನಗರ ಸಾಮ್ರಾಜ್ಯವನ್ನು ಲೂಟಿ ಮಾಡಿದ ಬಹುಮನಿ ಸುಲ್ತಾನರ ಪರ ಬಹುಮನಿ ಉತ್ಸವವನ್ನು ಆಚರಿಸಲು ಹೊರಟಿದೆ. ಸಿದ್ದರಾಮಯ್ಯ ಸರ್ಕಾರದ ನಿರ್ಧಾರಗಳು ಯಾವ ಮನಸ್ಥಿತಿಯನ್ನು ಸೂಚಿಸುತ್ತವೆ ಎಂಬುದನ್ನು ಜನತೆ ಪ್ರಶ್ನಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಹಿಂದೂ ಕಾರ್ಯಕರ್ತರ ಹತ್ಯಾ ಸರಣಿ ನಡೆದಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಪಾಪ ಕೃತ್ಯಗಳನ್ನು ಯಾರೂ ಕ್ಷಮಿಸಲಾರರು. ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರು ಇಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಮೃದು ಹಿಂದುತ್ವದ ನಾಟಕ ಆಡುತ್ತಿದ್ದಾರೆ.

ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರು ಪರಿವರ್ತನೆಯಾಗಿ ಈಗ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆಯೇ ಅಥವಾ ಕ್ರೈಸ್ತ ಧರ್ಮದಲ್ಲಿಯೇ ಮುಂದುವರಿಯುತ್ತಿದ್ದಾರೆಯೇ ಎಂಬುದನ್ನು ರಾಹುಲ್ ಗಾಂಧಿ ಅವರು ಜನರಿಗೆ ತಿಳಿಸಬೇಕಾಗಿದೆ ಎಂದ ನಳಿನ್‌ಕುಮಾರ್ ಅವರು ಹಿಂದೂ ವಿರೋಧಿ ಆಡಳಿತದ ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಅವರು ಹಿಂದೂ ದೇವಾಲಯಗಳಿಗೆ ಭೇಟಿ ನೀಡುವ ಮರ್ಮವೇನು ಎಂದು ಪ್ರಶ್ನಿಸಿದರು.

Comments are closed.