ಕರಾವಳಿ

ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ : ಸಿದ್ದರಾಮಯ್ಯ ತಿರುಗೇಟು

Pinterest LinkedIn Tumblr

ಮಂಗಳೂರು, ನವೆಂಬರ್.13: ನಮ್ಮ ಸರ್ಕಾರದ ಮೇಲೆ ಬಿಜೆಪಿಯವರು ಮಾಡುತ್ತಿರುವ ಆರೋಪಗಳಿಗೆ ಯಾವೂದೇ ದಾಖಲೆಗಳಿಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಖಂಡರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮುಖಂಡ ನಾಭಿರಾಜ್ ಜೈನ್ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಪ್ಪಳದಿಂದ ಖಾಸಗಿ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಡನೆ ಮಾತನಾಡುತ್ತಿದ್ದರು.

ನನ್ನ ಮೇಲೆ ಯಾವೂದಾದರೂ ಎಫ್‌ಐಆರ್ ದಾಖಲಾಗಿದೆಯೇ ? ಯಡಿಯೂರಪ್ಪರ ಮೇಲೆ ಆರೋಪಗಳಲ್ಲ ಹಲವಾರು ಎಫ್‌ಐಆರ್ ಗಳು ದಾಖಲಾಗಿವೆಯಲ್ಲ ಅದಕ್ಕೆ ಬಿಜೆಪಿಯವರು ಏನು ಹೇಳ್ತಾರೆ ? ನಮ್ಮ ಸರಕಾರ ಹಗರಣಗಳಿಂದ ಮುಕ್ತವಾದ ಸರಕಾರ. ಬಿಜೆಪಿಯವರಿಗೆ ನಮ್ಮನ್ನು ಟೀಕಿಸಲು ವಿಷಯಗಳಿಲ್ಲದೇ ಇರುವುದರಿಂದ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನಾವು ಯಾವ ಪ್ರಕರಣವನ್ನು ಮುಚ್ಚಿ ಹಾಕಿಲ್ಲ. ಗುಜರಾತಿನಲ್ಲಿ ಇರುವಂತೆ ರಾಜ್ಯದಲ್ಲಿ ಲೋಕಾಯುಕ್ತವೂ ಇದೆ ಎಸಿಬಿಯೂ ಇದೆ. ಲೋಕಾಯುಕ್ತವನ್ನು ಮುಚ್ಚಿದ್ದೇವೆ, ಪ್ರಕರಣಗಳನ್ನು ಮುಚ್ಚಿ ಹಾಕ್ತಾ ಇದ್ದೇವೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಾ ತಿರುಗುತ್ತಾ ಇದ್ದಾರೆ. ಸಿಬಿಐಯನ್ನು ಬಳಸಿಕೊಂಡು ಬಿಜೆಪಿಯವರೇ ಪ್ರಕರಣಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಕೋಮುವಾದಿ ಚಟುವಟಿಕೆಗಳನ್ನು ನಡೆಸುವ ಯಾವೂದೇ ವ್ಯಕ್ತಿ, ಧರ್ಮ ಅಥವಾ ಮತಕ್ಕೆ ಸೇರಿದ ಸಂಘಟನೆಗಳನ್ನು ಸರಕಾರ ಬೆಂಬಲಿಸುವುದಿಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮಾಜಿ ಸಚಿವ ಹಾಗೂ ಶಾಸಕ ಅಭಯ ಚಂದ್ರ ಜೈನ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮೊದಲಾದವರು ಈ ವೇಳೆ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

Comments are closed.