ಕರಾವಳಿ

ಅಕ್ಟೋಬರ್ 22 : ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಬಂಟ್ವಾಳದಲ್ಲಿ 252.50 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.19: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಕ್ಟೋಬರ್ 22ರಂದು ಬಂಟ್ವಾಳಕ್ಕೆ ಆಗಮಿಸಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಪೂರ್ಣಗೊಂಡಿರುವ ಒಟ್ಟು ರೂ. 148.29 ಕೋಟಿಯ ಯೋಜನೆಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ ಲೋಕಾರ್ಪಣೆ ಮಾಡಲಿದ್ದಾರೆ. ಅದೇ ರೀತಿ 104.21 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 252.50 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಒಟ್ಟಾರೆ ರೂ. 252.50 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ದೊರಕಲಿದೆ. ಕ್ಷೇತ್ರದ ಹಲವಾರು ಬಹುನಿರೀಕ್ಷಿತ ಯೋಜನೆಗಳು ಅಂದು ಲೋಕಾರ್ಪಣೆ ಗೊಳ್ಳಲಿದ್ದು, ಜನತೆಯ ದೀರ್ಘಕಾಲದ ಬೇಡಿಕೆಗಳು ಈಡೇರುತ್ತಿವೆ. ಅಭಿವೃದ್ಧಿಯ ಪಥದಲ್ಲಿ ಬಂಟ್ವಾಳ ಕ್ಷೇತ್ರವು ಹೊಸ ಮೈಲಿಗಲ್ಲನ್ನೇ ತಲುಪಿದ್ದು, ಭವಿಷ್ಯದ ಮುನ್ನೋಟವನ್ನು ಗಮನದಲ್ಲಿರಿಸಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಾಗಿದೆ ಎಂದು ಹೇಳಿದರು.

ಉದ್ಘಾಟನೆಗೊಳ್ಳಲಿರುವ ಯೋಜನೆ/ಕಾಮಗಾರಿಗಳ ವಿವರ (ರೂ.148.29 ಕೋಟಿ)

ಮಿನಿ ವಿಧಾನ ಸೌಧ: ಬಿಸಿರೋಡ್ನಲ್ಲಿ 90 ಸೆಂಟ್ಸ್ ವಿಸ್ತೀರ್ಣದ ಜಮೀನಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಇತರ ಎಲ್ಲಾ ತಾಲೂಕು, ಜಿಲ್ಲೆಗಳಿಗಿಂತಲೂ ವಿಭಿನ್ನವಾದ ರೀತಿಯಲ್ಲಿ ಮಿನಿ ವಿಧಾನಸೌಧ ರಚನೆಗೊಂಡಿದೆ ಎಂದವರು ಹೇಳಿದರು.
ನಿರೀಕ್ಷಣಾ ಮಂದಿರ ಕಟ್ಟಡ: ಬಂಟ್ವಾಳ ಪೇಟೆಯಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಹೊಸತಾಗಿ ನಿರೀಕ್ಷಣಾ ಮಂದಿರ ಕಟ್ಟಡವನ್ನೂ ಮುಖ್ಯಮಂತ್ರಿ ಉದ್ಘಾಟಿಸುವರು.
ಕೆ.ಎಸ್.ಆರ್.ಟಿ.ಸಿ. ನೂತನ ಬಸ್ಸು ನಿಲ್ದಾಣ: ಬಿಸಿರೋಡ್ನಲ್ಲಿ 1.50 ಎಕರೆ ನಿವೇಶನದಲ್ಲಿ ಅಂದಾಜು 10 ಕೋಟಿ 7 ಲಕ್ಷ ರೂ. ವೆಚ್ಚದಲ್ಲಿ ಕೆಎಸ್‌ಆರ್ಟಿಸಿ ಹೈಟೆಕ್ ಬಸ್ಸು ನಿಲ್ದಾಣ ರಚಿಸಲಾಗಿದೆ.
ತಾಲೂಕು ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ: ಬಂಟ್ವಾಳದಲ್ಲಿ 30 ಹಾಸಿಗೆಗಳ ತಾಲೂಕು ಸರಕಾರಿ ಆಸ್ಪತ್ರೆಯನ್ನು 6.15 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ.
ನೂತನ ಮೆಸ್ಕಾಂ ಕಟ್ಟಡ: ಬಿ. ಮೂಡ ಗ್ರಾಮದಲ್ಲಿ ಅಂದಾಜು 516 ಕೋಟಿ ರೂ. ವೆಚ್ಚದಲ್ಲಿ ಮೆಸ್ಕಾಂ ಕಟ್ಟಡ ರಚನೆಯಾಗಿದ್ದು, ಈ ಕಟ್ಟಡದಲ್ಲಿ ವಿಭಾಗೀಯ ಕಚೇರಿ, 2 ಉಪ ವಿಭಾಗೀಯ ಕಚೇರಿ, ಎಚ್ಟಿ ಮತ್ತು ಎಲ್ಟಿ ಸಬ್ ಡಿವಿಸನ್ ಕಚೇರಿ, ಡಿವಿಜನಲ್ ಸ್ಟೋರ್ ಕಚೇರಿ, ಸೆಕ್ಷನ್ ಕಚೇರಿ, ಕ್ಯಾಶ್ ಕೌಂಟರ್, ಎಟಿಪಿಯನ್ನು ಒಳಗೊಂಡಿದೆ.
ಸಮಗ್ರ ಕುಡಿಯುವ ನೀರಿನ ಯೋಜನೆ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಯನ್ನು ಮೂಲವಾಗಿರಿಸಿಕೊಂಡು ಬಂಟ್ವಾಳ ಪಟ್ಟಣಕ್ಕೆ 52.79 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ನೀರು ಸರಬರಾಜು ಯೋಜನೆಯ ಕಾಮಗಾರಿ ರಚನೆಯಾಗಿದೆ.
ಟ್ರೀ ಪಾರ್ಕ್: ಬಂಟ್ವಾಳ ಐ.ಬಿ. ಪಕ್ಕದಲ್ಲಿ ನೇತ್ರಾವತಿ ನದಿ ತೀರದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಅರಣ್ಯ ಇಲಾಖೆ ಟ್ರೀ ಪಾರ್ಕ್ ನಿರ್ಮಿಸಿದೆ.
ಪ್ರಾದೇಶಿಕ ಸಾರಿಗೆ ಕಚೇರಿ: ಬಂಟ್ವಾಳಕ್ಕೆ ಮಂಜೂರಾದ ನೂತನ ಆರ್ಟಿಓ ಕಚೇರಿ ಉದ್ಘಾಟನೆ.                                     ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಬಂಟ್ವಾಳ ತಾಲೂಕಿನ ಕನ್ಯಾನ, ಕರೋಪಾಡಿ, ಕೊಳ್ನಾಡು ಮತ್ತು ವಿಟ್ಲಪಡ್ನೂರು ಗ್ರಾಮಗಳ 79 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆ 25 ಕೋಟಿ 82 ಲಕ್ಷ ರೂ. ವೆಚ್ಚದಲ್ಲಿ ಸಂಗಬೆಟ್ಟುವಿನಲ್ಲಿ ಉದ್ಘಾಟನೆಗೊಳ್ಳಲಿದೆ.                                                                                                                                       ಕುಕ್ಕಿಪಾಡಿ, ಚೆನ್ನೈತ್ತೋಡಿ, ರಾಯಿ, ಅರಳ, ಪಂಜಿಕಲ್ಲು, ಅಮ್ಟಾಡಿ, ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ 66 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ 34 ಕೋಟಿ 95 ಲಕ್ಷ ರೂ. ಗಳ ಯೋಜನೆಯ ಉದ್ಘಾಟನೆ.

ಶಂಕುಸ್ಥಾಪನೆಗೊಳ್ಳಲಿರುವ ಯೋಜನೆಗಳು

ಬಂಟ್ವಾಳ ತಾಲೂಕಿನ ನರಿಕೊಂಬು, ಬಾಳ್ತಿಲ, ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ 39 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆಯನ್ನು ರೂ.16.97 ಕೊೀಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು.
ಬಂಟ್ವಾಳ ತಾಲೂಕಿನ ಸರಪಾಡಿ, ನಾವೂರು, ಬಡಗಕಜೆಕಾರು, ಕಾವಳಪಡೂರು, ಕಾವಳಮೂಡೂರು, ಪಿಲಾತಬೆಟ್ಟು, ಇರ್ವತ್ತೂರು, ಉಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 97 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆಯನ್ನು 29.93 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಮಗಾರಿಗೆ ಶಿಲನ್ಯಾಸ.
ಬಂಟ್ವಾಳ ತಾಲೂಕಿನ ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ, ಬರಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ 51 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ ಯೋಜನೆಯನ್ನು 16.46 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ಕಾಮಗಾರಿ
ಕಿಂಡಿ ಅಣೆಕಟ್ಟು: ಅರಳ ಗ್ರಾಮದ ಮೂಲರಪಟ್ನ ಎಂಬಲ್ಲಿ 4.85 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ.
ಪಂಜೆ ಮಂಗೇಶರಾಯರ ಸ್ಮಾರಕ ಭವನ : ತಾಲೂಕಿನ ಬಿ.ಮೂಡ ಗ್ರಾಮದಲ್ಲಿ 51 ಸೆಂಟ್ಸ್ ನಿವೇಶನದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಪಂಜೆ ಮಂಗೇಶರಾಯರ ಸ್ಮಾರಕ ಭವನ.
ಅಜಿಲಮೊಗರು ಕಡೇಶ್ವಾಲ್ಯ ನಡುವೆ ನೇತ್ರಾವತಿ ನದಿಗೆ ಸೇತುವೆ 31 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.

ಅಂದು ಮುಖ್ಯಮಂತ್ರಿಗಳು 148.29 ಕೋಟಿ ರೂ.ಗಳ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ 104.21 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಸೇರಿದಂತೆ ಒಟ್ಟು 252.50 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ.ಸಿಇಒ ಡಾ.ಎಂ.ಆರ್ ರವಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ದ.ಕ.ಜಿಲ್ಲಾ ಎಸ್ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.