ಮಂಗಳೂರು, ಡಿ.26: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯೋರ್ವನನ್ನು ಎಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದು ಎನ್ಐಎ ಪೊಲೀಸ್ ತಂಡಕ್ಕೆ ಹಸ್ತಾಂತರಿಸಿದ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ಇದೀಗ ಬಂಧಿತ ವ್ಯಕ್ತಿಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಐಸಿಸ್ ಸಂಘಟನೆಗೆ ಸೇರಲು ವಿದೇಶಕ್ಕೆ ತೆರಳುತ್ತಿದ್ದ ಶಂಕೆಯ ಮೇರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಂಗಳೂರಿನ ಓಲ್ಡ್ ಕೆಂಟ್ ರಸ್ತೆಯ ನಿವಾಸಿ ಮೂಲತಹ ಕೇರಳ ತಲಶ್ಶೇರಿ ನಿವಾಸಿ ಮುನಾಫ್ ರೆಹಮಾನ್ (41)ಎಂಬಾತನನ್ನು ಡಿ.23ರಂದು ಬಂಧಿಸಿದ್ದರು.
ಮುಸ್ತಫಾ ಡಿಸೆಂಬರ್ 23ರಂದು ಮಂಗಳೂರು ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ಸಂದರ್ಭ ವಶಕ್ಕೆ ತೆಗೆದುಕೊಂಡ ಇಮಿಗ್ರೇಶನ್ ಅಧಿಕಾರಿಗಳು ಈತನನ್ನು ಎನ್ಐಎ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಉಗ್ರ ಚಟುವಟಿಕೆಯ ಶಂಕೆಯ ಮೇರೆಗೆ ಈತನ ವಿರುದ್ಧ ಕೇರಳ ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದರು. ಶಾರ್ಜಾಗೆ ವಿಮಾನದಲ್ಲಿ ತೆರಳಲು ಶುಕ್ರವಾರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಇಮಿಗ್ರೆಷನ್ ಅಧಿಕಾರಿಗಳು ಈತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ರೆಹಮಾನ್ನನ್ನು ರಾಷ್ಟ್ರೀಯ ತನಿಖಾ ದಳದ(ಎನ್ಐಎ) ಕೇರಳ ಅಧಿಕಾರಿಗಳ ವಶಕ್ಕೆ ಹಸ್ತಾಂತರಿಸಲಾಗಿತ್ತು
ಮುನಾಫ್ ರೆಹಮಾನ್ ಕೇರಳ ಮತ್ತು ಕರ್ನಾಟಕದಲ್ಲಿ ಪಟಾಕಿ ವ್ಯಾಪಾರಿಯಾಗಿದ್ದಾನೆ. ಅದರಲ್ಲಿ ನಷ್ಟ ಉಂಟಾದ ಕಾರಣ ಮಂಗಳೂರಿಗೆ ಬಂದು ತರಕಾರಿ ವ್ಯಾಪಾರ ಮಾಡುತ್ತಿದ್ದ. ಕಳೆದ ನಾಲ್ಕೂವರೆ ವರ್ಷದಿಂದ ಮಂಗಳೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿದ್ದಾನೆ. ಈತನಿಗೆ ಪತ್ನಿ ಹಾಗೂ ಐವರು ಮಕ್ಕಳಿದ್ದಾರೆ.
ಶಾರ್ಜಾದಲ್ಲಿರುವ ತನ್ನ ಪತ್ನಿಯ ತಂಗಿಯ ಬಳಿಗೆ ತೆರಳಿ, ಅಲ್ಲಿಂದ ಟೋಕಿಯೋದಲ್ಲಿ ಐಸಿಸ್ಗೆ ಬೆಂಬಲ ನೀಡಲು ತೆರಳುತ್ತಿರುವುದನ್ನು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇದೀಗ ಎನ್ಐಎ ಅಧಿಕಾರಿಗಳು ಈತನನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿ, ಪಾಸ್ ಪೋರ್ಟ್ ವಶಪಡಿಸಿಕೊಂಡು ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಡುಗಡೆಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Comments are closed.