ಮಂಗಳೂರು,ಡಿಸೆಂಬರ್. 25: ಏಸು ಕ್ರಿಸ್ತರ ಜನ್ಮದಿನದ ಹಬ್ಬವಾದ ‘ಕ್ರಿಸ್ಮಸ್’ನ ಮುಂಚಿನ ದಿನವಾದ ಶನಿವಾರ ರಾತ್ರಿಯನ್ನು ಕ್ರೈಸ್ತರು ಕ್ರಿಸ್ಮಸ್ ಜಾಗಕರಣೆಯ ಮೂಲಕ ಸಂಭ್ರಮಿಸಿದರು.ಈ ಪ್ರಯುಕ್ತ ನಗರದ ಎಲ್ಲಾ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿಪೂಜೆಗಳು ನಡೆದವು.
ಬಲಿ ಪೂಜೆಯ ಬಳಿಕ ಕ್ರೈಸ್ತಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರಲ್ಲದೆ, ಕೇಕ್ ಗಳನ್ನು ಹಂಚಿಕೊಂಡರು. ಚರ್ಚ್ಗಳಲ್ಲಿ ರಾತ್ರಿ ವೇಳೆ ಜರಗಿದ ವಿಶೇಷ ಪ್ರಾರ್ಥನೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿದ್ದರು.
ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಚರ್ಚ್ಗಳ ಆವರಣದಲ್ಲಿ ಮತ್ತು ಕ್ರೈಸ್ತರ ಮನೆಯ ಆವರಣದಲ್ಲಿ ಆಕರ್ಷಕ ಕ್ರಿಬ್ಗಳನ್ನು (ಗೋದಲಿ) ನಿರ್ಮಿಸಲಾಗಿತ್ತು. ತಾರೆ (ನಕ್ಷತ್ರ)ಗಳನ್ನು ನೇತು ಹಾಕಲಾಗಿತ್ತು. ಕ್ರಿಸ್ಮಸ್ ಗೀತೆಗಳು (ಕ್ಯಾರೊಲ್ಸ್) ಆಚರಣೆಗೆ ವಿಶೇಷ ಕಳೆ ನೀಡಿತ್ತು. ಕ್ರಿಸ್ಮಸ್ ತಾತಾ ‘ಸಾಂತಾಕ್ಲಾಸ್’ ಆಗಮನ ವಿಶೇಷ ಆಕರ್ಷಣೆಯಾಗಿತ್ತು.
ಮಂಗಳೂರಿನ ರೊಝಾರಿಯೊ ಕೆಥೆಡ್ರಲ್ನಲ್ಲಿ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ ಧರ್ಮ ಪ್ರಾಂತದ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಸಂದೇಶ ನೀಡಿದರು. ಕೆಥೆಡ್ರಲ್ನ ಪ್ರಧಾನ ಗುರು ಫಾ. ಜೆ.ಬಿ. ಕ್ರಾಸ್ತಾ ಮತ್ತಿತರ ಗುರುಗಳು ಉಪಸ್ಥಿತರಿದ್ದರು.
ಇಂದು (ರವಿವಾರ) ಕ್ರಿಸ್ಮಸ್ ಹಬ್ಬದ ಆಚರಣೆ ನಡೆಯಲಿದೆ. ಚರ್ಚ್ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯಲಿದೆ. ಕ್ರಿಸ್ಮಸ್ ವಿಶೇಷ ತಿಂಡಿ ಕುಸ್ವಾರ್ ವಿನಿಮಯ ಮತ್ತು ವಿತರಣೆ ನೇರವೇರಲಿದೆ. ಕ್ರೈಸ್ತ ಭಾಂಧವರ ಮನೆಗಳಲ್ಲಿ ಹಬ್ಬದ ಭೋಜನ ನಡೆಯಲಿದೆ.
Comments are closed.