
ಮಂಗಳೂರು / ನವದೆಹಲಿ, ಸೆಪ್ಟಂಬರ್, .20: ಕೇಂದ್ರದ ಎನ್ಡಿಎ ಸರ್ಕಾರದ ಮಹಾತ್ವಾಕಾಂಕ್ಷೆಯ ‘ಸ್ಮಾರ್ಟ್ ಸಿಟಿ’ ಯೋಜನೆಯ ತೃತೀಯ ಪಟ್ಟಿಯಲ್ಲಿ 27 ನಗರಗಳನ್ನು ಆಯ್ಕೆ ಮಾಡಲಾಗಿದ್ದು, ಮೂರನೇ ಪಟ್ಟಿಯಲ್ಲಿ ಈ ಬಾರಿ ಮಂಗಳೂರು ನಗರ ಕೂಡ ಸ್ಥಾನ ಪಡೆದಿದೆ.
ಉಳಿದಂತೆ ಶಿವಮೊಗ್ಗ, ತುಮಕೂರು, ಹುಬ್ಬಳ್ಳಿ- ಧಾರವಾಡ ನಗರಗಳು ಸ್ಥಾನ ಪಡೆದಿವೆ. ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವ ಸಂಸತ್ ಕ್ಷೇತ್ರವಾದ ವಾರಣಾಸಿ ಕೂಡಾ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಇಂದು ಬಿಡುಗಡೆ ಮಾಡಿರುವ ತೃತೀಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಕಾನ್ಪುರ , ಆಗ್ರಾದ ಜೊತೆಗೆ, ಚುನಾವಣೆಯ ‘ಬಿಸಿ’ಯಲ್ಲಿರುವ ಪಂಜಾಬ್ ನ ಅಮೃತ್ ಸರ ಮತ್ತು ಲುಧಿಯಾನಾ, ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದ ಮೂರು ನಗರಗಳು ತೃತೀಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಪಶ್ಚಿಮ ಬಂಗಾಲ ಮತ್ತು ಬಿಹಾರದ ಯಾವುದೇ ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳು ಹೆಚ್ಚಿನ ‘ಫಲಾನುಭವಿಗಳಾಗಿವೆ ‘. 27 ನಗರಗಳಲ್ಲಿ 10 ನಗರಗಳು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಕ್ಕೆ ಸೇರಿದವುಗಳಾಗಿವೆ.
ಸ್ಮಾರ್ಟ್ ಸಿಟಿ ಮಾಡಿ ಸರ್ಕಾರಕ್ಕೆ ಶಾಸಕ ಲೋಬೊ ಅಭಿನಂದನೆ :
ಮಂಗಳೂರು: ಮಂಗಳೂರನ್ನು ಸ್ಮಾಟ್ ಸಿಟಿಯನ್ನಾಗಿ ಘೋಷಣೆ ಮಾಡಿದ ಕೇಂದ್ರ ಸರ್ಕಾರವನ್ನು, ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡಲು ನೆರವಾದ ರಾಜ್ಯ ಸರ್ಕಾರವನ್ನು ಮತ್ತು ಜನಪ್ರತಿನಿಧಿಗಳನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರು ಅಭಿನಂದಿಸಿದ್ದಾರೆ.
ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅವರು, ಮಂಗಳೂರು ನಗರವನ್ನು ಈ ಮೊದಲೇ ಸ್ಮಾರ್ಟ್ ಸಿಟಿ ಘೋಷಣೆ ಮಾಡಿಬೇಕಿತ್ತಾದರು ಕೇಂದ್ರ ಸರ್ಕಾರ ಈ ಹಂತದಲ್ಲಿ ಮಾಡಿದ್ದಕ್ಕಾಗಿ ಅಭಿವಂದನೆ ಸಲ್ಲಿಸಿಸುವುದಾಗಿ ತಿಳಿಸಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿಯಾಗಿರುವುದರಿಂದ ಹೂಡಿಕೆದಾರರು ಹೂಡಿಕೆ ಮಾಡಲು ಆಸಕ್ತಿತೋರಿಸುತ್ತಾರೆ, ಯುವಕರಿಗೂ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.