ಮಂಗಳೂರು, ಸೆಪ್ಟಂಬರ್.5: ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಸಂಘ ಹಾಗೂ ಅದರ ಮಂಗಳೂರು ತಾಲೂಕು ಸಮಿತಿ, ತಾಲೂಕು ಬಂಟರ ಸಂಘ ಮಂಗಳೂರು, ಉಡುಪಿ, ದ.ಕ, ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ, ಇತರ ಸಂಘ-ಸಂಸ್ಥೆಗಳ, ಎಲ್ಲಾ ಜಾತಿ ಮತ ಬಾಂಧವರ, ಸಹಕಾರ, ಸಹಬಾಗಿತ್ವದಿಂದ ಬಂಟ್ಸ್ ಹಾಸ್ಟೆಲ್ನ ಓಂಕಾರ ನಗರದಲ್ಲಿ ಹಮ್ಮಿಕೊಂಡಿರುವ ೧೩ನೇ ವರ್ಷದ ಶ್ರೀ ಗಣೇಶೋತ್ಸವ ಸಮಾರಂಭವು ಇಂದು ಬೆಳಿಗ್ಗೆ ಶ್ರೀ ಸಿದ್ಧಿವಿನಾಯಕ ಮೂರ್ತಿ ಪ್ರತಿಷ್ಠೆ, ಗಣ ಹೋಮ ಹಾಗೂ ದ್ವಜಾರೋಹಣದೊಂದಿಗೆ ಆರಂಭಗೊಂಡಿತ್ತು.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಧ್ವಜಾರೋಹಣ ಸ್ಥಳದಿಂದ ತೆನೆ ಹೊತ್ತು ವೇದಿಕೆಯತ್ತ ಆಗಮಿಸಿದರು.
ಬಳಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಮಾಲಾಡಿ ಅಜಿತ್ ಕುಮಾರ್ ರೈ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿರುವ ಧಾರ್ಮಿಕ ನಿಂದನೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಕಟೀಲು ಶ್ರೀ ದುರ್ಗಾಪರಮೇಶ್ವರಿ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವುದು ನೋವು ತಂದಿದೆ. ಯಾರಿಗೂ ಯಾವ ಧರ್ಮವನ್ನೂ ನಿಂದಿಸುವ ಹಕ್ಕಿಲ್ಲ. ಆದರೆ ಕೆಲವರಿಂದ ಇಂತಹ ಘಟನೆಗಳು ತಿಳಿದೊ ಅಥವಾ ತಿಳಿಯದೆಯೋ ಸಂಭವಿಸುತ್ತದೆ. ಅಂತಹ ವ್ಯಕ್ತಿಗಳಿಗೆ ದೇವರು ಸದ್ಬುದ್ಧಿ ನೀಡಲೆಂದು ನಾವೆಲ್ಲೂ ಭಗವಂತನಲ್ಲಿ ಪ್ರಾರ್ಥಿಸೋಣ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಲ್ ರಮೇಶ್ ಶೆಟ್ಟಿ ಬ್ರಹ್ಮಾವರ ಮಾತನಾಡಿ, ಬಂಟ ಸಮುದಾಯವು ಚೌತಿ ಹಬ್ಬವನ್ನು ಬಹಳ ಸಡಗರಿಂದ ಆಚರಿಸುತ್ತಿದ್ದು, ಈ ಹಬ್ಬ ಬಂಟ ಸಮುದಾಯವನ್ನು ಒಟ್ಟುಗೂಡಿಸುವಲ್ಲಿ ಸಹಕರಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವತ್ಸಲಾ ಆರ್. ಶೆಟ್ಟಿ, ಖ್ಯಾತ ಹೃದ್ರೋಗ ತಜ್ಞ ಡಾ.ಎ.ವಿ.ಶೆಟ್ಟಿ, ಚಂದ್ರಲೇಖಾ ಎ. ಶೆಟ್ಟಿ, ಪ್ರತಿಭಾನ್ವೇಷನಾ ಸಮಿತಿಯ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳಾದ ಶ್ರೀ ಮಂಜುನಾಥ ಭಂಡಾರಿ ಶೆಡ್ಡೆ. ಶ್ರೀ ರವಿರಾಜ ಶೆಟ್ಟಿ. ನಿಟ್ಟೆಗುತ್ತು. ಶ್ರೀ ಕೃಷ್ಣಪ್ರಸಾದ ರೈ.ಬೆಳ್ಳಿಪ್ಪಾಡಿ. ಶ್ರೀ ಕೆ.ಬಾಲಕೃಷ್ಣ ಶೆಟ್ಟಿ. ಬೆಳ್ಳಿಬೆಟ್ಟುಗುತ್ತು. ಅಡ್ಯಾರುಗುತ್ತು, ಶ್ರೀ ಬಿ.ಶೇಖರ ಶೆಟ್ಟಿ. ಶ್ರೀಮತಿ ಪ್ರತಿಮಾ ಆರ್ ಶೆಟ್ಟಿ,ಶ್ರೀಮತಿ ಮೀನಾ ಆರ್ ಶೆಟ್ಟಿ. ಶ್ರೀ ಮಷ್ ರೈ. ಶ್ರೀ ಅಶ್ವತ್ಥಾಮ ಹೆಗ್ಡೆ ಅಲ್ತಾರ್, ಶ್ರೀ ಜಯರಾಮ ಸಾಂತ, ಸುಂದರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ರವಿರಾಜ್ ಶೆಟ್ಟಿ ಕೊಳಂಬೆ ವಂದಿಸಿದರು.
ತೆನೆ ವಿತರಣೆ :
ಧಾರ್ಮಿಕ ಕಾರ್ಯಕ್ರಮದ ಬಳಿಕ ಅತಿಥಿಗಳು ಬಂಟ್ಸ್ ಸಮುದಾಯದ ಹಿರಿಯ ಮುಖಂಡರಿಗೆ ಸಾಂಕೇತಿಕವಾಗಿ ತೆನೆ ವಿತರಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ತೆನೆ ವಿತರಿಸಲಾಯಿತು. ಬಳಿಕ ಭಜನಾ ಸೇವೆಯೊಂದಿಗೆ ಮಧ್ಯಾಹ್ನ 12 ಘಂಟೆಗೆ ಮಹಾಪೂಜೆ ನಡೆದು ನೆರೆದ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.
ಬುಧವಾರ ಶೋಭಾಯಾತ್ರೆ ;
ದಿನಾಂಕ 07-09-2016 ಬುಧವಾರ ಬೆಳಿಗ್ಗೆ 8-00 ಪ್ರಾತಃಕಾಲ ಪೂಜೆ, 8-30ಕ್ಕೆ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗ ಪ್ರಾರಂಭ, ನಂತರ ಭಜನಾ ಸೇವೆಯೊಂದಿಗೆ 11-00 ಘಂಟೆಗೆ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆಯ ನಂತರ ಮಹಾ ಅನ್ನ ಸಂತರ್ಪಣೆ ನಡೆಯಲಿರುವುದು.
ಅಪರಾಹ್ನ 3-30 ಕ್ಕೆ ವಿಸರ್ಜನಾ ಪೂಜೆ, ಭಜನಾ ಕಾರ್ಯಕ್ರಮ ಉದ್ಘಾಟನೆ ನಡೆಯಲಿರುವುದು, ಬಳಿಕ ದೀಪ ಪ್ರಜ್ವಲನೆಯೊಂದಿಗೆ ಶೋಭಾ ಯಾತ್ರೆಗೆ ಚಾಲನೆ ನೀಡಲಾಗುವುದು.
ಶೋಭಾಯಾತ್ರೆಯು ಓಂಕಾರ ನಗರದಿಂದ ಬಂಟ್ಸ್ ಹಾಸ್ಟಲ್ ವೃತ್ತ, ಪಿವಿಎಸ್, ಡೊಂಗರಕೇರಿ, ನ್ಯೂಚಿತ್ರಟಾಕೀಸ್, ರಥಬೀದಿಯಲ್ಲಿ ಸಾಗಿ ಶ್ರೀ ವೆಂಕಟರಮಣ ದೇವಸ್ಥಾನವಾಗಿ ಶ್ರೀ ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ವಿಸರ್ಜಿಸಲಾಗುವುದು.
Comments are closed.