ಕರಾವಳಿ

ಶಾಲಾ ಮಕ್ಕಳ ವಾಹನ ಚಾಲಕರ ಸಭೆ ವಿಳಂಬ ; ಆಕ್ರೋಶಿತ ವಾಹನ ಚಾಲಕರಿಂದ ಆರ್.ಟಿ.ಓ ಕಚೇರಿಗೆ ಮುತ್ತಿಗೆ

Pinterest LinkedIn Tumblr

RTO_protest_pic_1

ಮಂಗಳೂರು,ಜುಲೈ 13 : ಶಾಲಾ ಮಕ್ಕಳ ಸುರಕ್ಷತೆಯ ಬಗ್ಗೆ ಹಾಗೂ ವಾಹನ ಚಾಲಕರ ಸಂಕಷ್ಟಗಳನ್ನು ಅರಿಯಲು, ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿಯನ್ನು ತಿಳಿ ಹೇಳಲು ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಭೆ ಕರೆಯಬೇಕೆಂದು ಕಳೆದ 3 ವಾರಗಳ ಹಿಂದೆ ಪ್ರತಿಭಟನೆ ನಡೆಸಿ ಮನವಿಯನ್ನು ಅರ್ಪಿಸಿದರೂ, ಈವರೆಗೂ ಸಭೆಯನ್ನು ಕರೆಯದೆ ವಾಹನ ಚಾಲಕರನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ, ಆರ್.ಟಿ.ಓ ಅಧಿಕಾರಿಗಳ ವಿರುದ್ಧ ಆಕ್ರೋಶಿತಗೊಂಡ ಶಾಲಾ ಮಕ್ಕಳ ವಾಹನ ಚಾಲಕರು ಬುಧವಾರ ಆರ್.ಟಿ.ಓ ಕಚೇರಿಗೆ ಮುತ್ತಿಗೆ ಹಾಕಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಗೌರವಾಧ್ಯಕ್ಷರಾದ ಸುನೀಲ್‌ಕುಮಾರ್ ಬಜಾಲ್‌ರವರು, ಕುಂದಾಪುರದ ಘಟನೆಯನ್ನು ನೆಪವಾಗಿಟ್ಟುಕೊಂಡು ಶಾಲಾ ಮಕ್ಕಳ ವಾಹನ ಚಾಲಕರನ್ನೇ ಗುರಿಯನ್ನಾಗಿಸಿ ಕೇಸು ದಾಖಲಿಸಿ ಕಿರುಕುಳ ನೀಡುತ್ತಿರುವುದು ಸರ್ವಥಾ ಸರಿಯಲ್ಲ. ಪ್ರತಿಯೊಂದು ಅಪಘಾತಕ್ಕೆ ಅದರದ್ದೇ ಆದ ಬೇರೆ ಬೇರೆ ಆಯಾಮಗಳಿವೆಯೇ ಹೊರತು ಚಾಲಕರು ಮಾತ್ರ ಕಾರಣವಲ್ಲ ಎಂದು ಹೇಳಿದರು.

ಮಕ್ಕಳ ಸುರಕ್ಷತೆ ಹಾಗೂ ಚಾಲಕರ ಸಂಕಷ್ಟದ ಬಗ್ಗೆ ಸಭೆ ಕರೆಯಬೇಕೆಂದು ಜಿಲ್ಲಾಧಿಕಾರಿಗಳು, ಆರ್.ಟಿ.ಓ, ಪೊಲೀಸ್ ಅಧಿಕಾರಿಗಳು, ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿಯನ್ನು ಅರ್ಪಿಸಿದರೂ ಈವರೆಗೆ ಜಿಲ್ಲಾಡಳಿತ ಸಭೆ ಕರೆದಿಲ್ಲ. ಎರಡು ದಿನದಲ್ಲಿ ಸಭೆ ಕರೆಯುವುದಾಗಿ ಆಶ್ವಾಸನೆ ನೀಡಿದ ಆರ್‌ಟಿ‌ಓ ಅಧಿಕಾರಿಗಳು ಎರಡು ವಾರ ಕಳೆದರೂ ಸಭೆ ಕರೆಯಲಿಲ್ಲ ಎಂದು ದೂರಿದರು.

RTO_protest_pic_2 RTO_protest_pic_3 RTO_protest_pic_4 RTO_protest_pic_5

ಘಟನೆ ನಡೆದಾಗ ಮಾತ್ರ ಮಕ್ಕಳ ಸುರಕ್ಷತೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಜಿಲ್ಲಾಡಳಿತವು, ಪ್ರತೀ ಕ್ಷಣ ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವ ವಾಹನ ಚಾಲಕರ ಸಂಕಷ್ಟವನ್ನು ಅರಿಯಲು ಸಭೆ ಕರೆಯದಿರುವುದು ಮಕ್ಕಳ ಸುರಕ್ಷತೆಯ ಬಗ್ಗೆ ಕೇವಲ ಬೂಟಾಟಿಕೆಯನ್ನು ಪ್ರದರ್ಶಿಸಿದಂತಾಗಿದೆ. ಈ ಕೂಡಲೇ ಜಿಲ್ಲಾಡಳಿತವು ಸಭೆಯನ್ನು ಕರೆಯದಿದ್ದಲ್ಲಿ ಜಿಲ್ಲೆಯಾದ್ಯಂತ ಶಾಲಾ ವಾಹನ ಬಂದ್ ನಡೆಸಲಾಗುವುದು ಎಂದು ಸುನೀಲ್‌ಕುಮಾರ್ ಬಜಾಲ್‌ ಎಚ್ಚರಿಕೆ ನೀಡಿದರು.

ಸಂಘದ ಗೌರವ ಸಲಹೆಗಾರರಾದ ಉಮೇಶ್ ಶೆಟ್ಟಿಯವರು ಮಾತನಾಡಿ, ಶಾಲಾ ವಾಹನ ಚಾಲಕರ ಬದುಕಿನ ಬವಣೆಗಳನ್ನು ವಿವರಿಸುತ್ತಾ ಮಕ್ಕಳ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಶಾಲಾ ಆಡಳಿತ ಮಂಡಳಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಜಿಲ್ಲಾಡಳಿತದ ಆದೇಶವನ್ನು ಕೂಡಾ ಶಾಲಾ ಆಡಳಿತ ಮಂಡಳಿಗಳು ಧಿಕ್ಕರಿಸುತ್ತಿದೆ. ಸಮಸ್ಯೆಗಳನ್ನು ಪರಿಹರಿಸಲು ಏಕಾ‌ಏಕಿ ಕ್ರಮ ಕೈಗೊಳ್ಳುವ ಬದಲು ಕಾಲಾವಕಾಶವನ್ನು ನೀಡಿದರೆ ಪರ್‍ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿದೆ. ಅದನ್ನು ಬಿಟ್ಟು ಏಕಾ‌ಏಕಿಯಾಗಿ ದಾಳಿ ನಡೆಸುವುದು ಸರಿಯಲ್ಲ ಎಂದು ಹೇಳಿದರು.

RTO_protest_pic_6 RTO_protest_pic_7 RTO_protest_pic_8 RTO_protest_pic_9

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆರ್‌ಟಿ‌ಓ ಅಧಿಕಾರಿಗಳಾದ ಶ್ರೀ ಜಿ.ಎಸ್. ಹೆಗಡೆಯವರು ಶಾಲಾ ಮಕ್ಕಳ ವಾಹನ ಚಾಲಕರ ನೋವನ್ನಾಲಿಸುತ್ತಾ, ಜುಲೈ 20ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವುದಾಗಿಯೂ, ಅಲ್ಲಿಯವರೆಗೆ ಕೇಸು ಹಾಕುವುದನ್ನು ನಿಲ್ಲಿಸುವುದಾಗಿಯೂ ಭರವಸೆಯನ್ನು ನೀಡಿದರು. ಆ ಬಳಿಕವೇ ಪ್ರತಿಭಟನೆಯನ್ನು ವಾಪಾಸ್ಸು ಪಡೆಯಲಾಯಿತು.

ಹೋರಾಟದ ನೇತೃತ್ವವನ್ನು ಸಂಘದ ಮುಖಂಡರಾದ ಮೋಹನ್ ಅತ್ತಾವರ, ಮುಹಮ್ಮದ್ ಅನ್ಸಾರ್, ಪ್ರವೀಣ್ ಲೇಡಿಹಿಲ್, ಗಂಗಾಧರ ರೈ, ಚಿತ್ತರಂಜನ್, ಸತೀಶ್ ಪೂಜಾರಿ, ಗಂಗಾಧರ ಶೆಟ್ಟಿಗಾರ್, ಜಯರಾಮ್, ಬೆಂಜಮಿನ್ ವೇಗಸ್, ಲೋಕೇಶ್ ಸುರತ್ಕಲ್, ಮುನ್ನಾ ಪದವಿನಂಗಡಿ, ಜೋಸ್ಸಿ ಡಿ’ಕುನ್ಹಾ, ರೆಹಮಾನ್ ಕುಂಜತ್ತಬೈಲ್, ಹಮೀದ್ ಪಾವುಲ, ಕಿರಣ್ ಲೇಡಿಹಿಲ್ ಮುಂತಾದವರು ವಹಿಸಿದ್ದರು.

Comments are closed.