ಮಂಗಳೂರು,ಜುಲೈ. 13 : ನಗರದ ಬಲ್ಮಠ ಕೆನರಾ ಬ್ಯಾಂಕ್ ವೃತ್ತದಿಂದ ಕಂಕನಾಡಿ ಸಮೀಪದ ಬೆಂದೂರ್ ವೆಲ್ನ ಕರಾವಳಿ ಸರ್ಕಲ್ ವರೆಗಿನ ರಸ್ತೆಗೆ ಮಾಜಿ ಸಚಿವ ದಿ| ಬ್ಲೇಸಿಯಸ್ ಎಂ. ಡಿ’ಸೋಜ ರಸ್ತೆ ಎಂದು ನಾಮಕರಣಗೊಳಿಸುವ ಹಲವು ದಿನಗಳ ಕನಸು ಇದೀಗ ನನಸಾಗಿದ್ದು, ಇದೇ ಬರುವ ಜುಲೈ 16ರಂದು ಈ ರಸ್ತೆಯ ನಾಮಕರಣ ಸಮಾರಂಭ ನಡೆಯಲಿದೆ ಎಂದು ಶಾಸಕ ಜೆ.ಆರ್.ಲೋಬೋ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ರಸ್ತೆಗೆ ಬ್ಲೇಸಿಯಸ್ ಎಂ. ಡಿ’ಸೋಜ ಅವರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಹಲವು ವರ್ಷಗಳಿಂದ ನಾವು ಪ್ರಯತ್ನಿಸುತ್ತಾ ಬಂದಿದ್ದೇವೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಈ ನಾಮಕರಣ ಪ್ರಕ್ರಿಯೆ ವಿಳಂಬಗೊಂಡಿತ್ತು. ಬಳಿಕ ನಾವು ಅಂದಿನ ನಗರಾಭಿವೃದ್ಧಿ ಸಚಿವರಾದ ವಿನಯ ಕುಮಾರ್ ಸೊರಕೆಯವರಲ್ಲಿ ಮನವಿ ಮಾಡಿದ್ದು, ನಮ್ಮ ಮನವಿಗೆ ಸ್ಪಂದಿಸಿದ ಅವರು ನಡೆಸಿದ ಸತತ ಪ್ರಯತ್ನದಿಂದ ಇದೀಗ ಈ ರಸ್ತೆಯ ನಾಮಕರಣ ಮಾಡಲು ಸರಕಾರದಿಂದ ಅಧಿಕೃತ ಅದೇಶ ದೊರೆತಿದೆ ಎಂದು ಹೇಳಿದರು.
ಈ ಒಂದು ಕಾರ್ಯದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕೂಡ ಕೈಜೋಡಿಸಿದ್ದು, ಮನಪಾಕ್ಕೂ ಅಭಿನಂಧನೆ ಸಲ್ಲಿಸುವುದಾಗಿ ಲೋಬೋ ಹೇಳಿದರು.
ಬ್ಲೇಸಿಯಸ್ ಎಂ.ಡಿ’ಸೋಜ ಅವರು ದ.ಕ.ಜಿಲ್ಲಾ ಕಾಂಗ್ರೆಸ್ ಕಮಿಟಿಯ ಜಿಲ್ಲಾಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿರುತ್ತಾರೆ. ಮಾತ್ರವಲ್ಲದೇ ಮಂಗಳೂರು ನಗರ ಕೌನ್ಸಿಲ್ ನ ಸದಸ್ಯರಾಗಿ ಬಳಿಕ ಅಧ್ಯಕ್ಷರಾಗಿ ಕಾರ್ಯನಿರ್ವಾಹಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ರಾಜ್ಯ ಕಾರ್ಮಿಕ ಮತ್ತು ಕಾನೂನು ಸಚಿವರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಶ್ರೀಯುತ್ತರು ಮಂಗಳೂರಿನ ಓರ್ವ ಉತ್ತಮ ಹಾಗೂ ಯಶಸ್ವಿ ನಾಗರೀಕ (ನಾಯಕ)ರಾಗಿದ್ದರು ಎಂದು ಲೋಬೋ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲೇಸಿಯಸ್ ಎಂ.ಡಿ’ಸೋಜ ಅವರ ಪುತ್ರ ರೋಹಿತ್, ಮೇಯರ್ ಹರಿನಾಥ್, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಕೆ.ಅಶ್ರಫ್, ಮನಪಾ ಸದಸ್ಯ ನವೀ ಡಿ’ಸೋಜ, ಮೂಡ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಮುಂತಾದವರು ಉಪಸ್ಥಿತರಿದ್ದರು.




Comments are closed.