ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಮೇ.31 : ತಂಬಾಕಿನ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವನ್ನು ಮೂಡಿಸಿ, ತಂಬಾಕು ಮುಕ್ತ ಸಮಾಜದ ಕನಸಿನೊಂದಿಗೆ, ದೇಶದ ಮುಂಚೂಣಿಯಲ್ಲಿರುವ ಬ್ಯಾಂಕ್ ಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್ನ ಮುಖ್ಯ ಪ್ರಾಯೋಜಕತ್ವದೊಂದಿಗೆ ಮಂಗಳೂರಿನ ಜನಪ್ರಿಯ ರೇಡಿಯೋ ಸ್ಟೇಷನ್ ರೆಡ್ ಎಫ್ ಎಂ 93.5 ಸಂಸ್ಥೆಯು 4 ನೆ ಬಾರಿಗೆ ಹಮ್ಮಿಕೊಂಡಿರುವ “ತಂಬಾಕು ವಿರೋದಿ ಅಭಿಯಾನ”ಕ್ಕೆ ವಿಶ್ವ ತಂಬಾಕು ವಿರೋಧಿ ದಿನವಾದ (ಮೇ 31 ) ಇಂದು ಚಾಲನೆ ನೀಡಲಾಯಿತು.
ನಗರದ ಪಂಪ್ ವೆಲ್ ಬಳಿಯಿರುವ ಕರ್ನಾಟಕ ಬ್ಯಾಂಕ್ ನ ಪ್ರಧಾನ ಕಚೇರಿಯ ಆವರಣದಲ್ಲಿ ಮಂಗಳವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಜಯರಾಂ ಭಟ್ ಅವರು” ತಂಬಾಕು ಬಳಕೆ ಬಗ್ಗೆ ವಿರೋಧ ವ್ಯಕ್ತಪಡಿಸಿ ಸಿಗರೇಟಿನ ಪ್ರತಿಕೃತಿಗೆ ಸಹಿ ಹಾಕುವ ಮೂಲಕ ಸಾಂಕೇತಿಕವಾಗಿ ತಂಬಾಕು ವಿರೋದಿ ಅಭಿಯಾನ”ಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತಂಬಾಕು ಸೇವನೆಯಂತಹ ದುಶ್ಚಟಗಳಿಂದಾಗಿ ಯುವಕರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಇಂತಹ ದುಶ್ಚಟಗಳಿಗೆ ಬಲಿಯಾಗದೇ ಈ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲೇ ಜಾಗೃತರಾಗುವುದು ಅತೀ ಅಗತ್ಯ ಎಂದು ಹೇಳಿದರು.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಕ್ಷೀಣಿಸುತ್ತಿದ್ದರೆ, ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರದಲ್ಲಿ ಈ ಚಟ ಹೆಚ್ಚುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಿಸುವ ಕನಸಿನೊಂದಿಗೆ ಪ್ರತಿಯೊಬ್ಬರು ತಂಬಾಕು ಸೇರಿದಂತೆ ಇತರ ಎಲ್ಲಾ ದುಶ್ಚಟಗಳಿಂದ ದೂರವಿದ್ದು ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವ ಬಗ್ಗೆ ಕಾರ್ಯಪ್ರವ್ರತ್ತರಾಗಬೇಕು ಎಂದು ಜಯರಾಂ ಭಟ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ನ ಎ.ಜಿ ಎಂ. ರೇಣುಕ ಬಂಗೇರ ಹಾಗು ಬ್ಯಾಂಕ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ್ ದೇಶಪಾಂಡೆ ಮುಖ್ಯ ಅತಿಥಿಗಳಾಗಿದ್ದರು .
ರೆಡ್ ಎಫ್ ಎಂ ನ ಸ್ಟೇಶನ್ ಮುಖ್ಯಸ್ಥ ಶೋಭಿತ್ ಶೆಟ್ಟಿ, ಸೀನಿಯರ್ ಪ್ರೊಡ್ಯುಸರ್ ಯಶರಾಜ್, ಆರ್.ಜೆ.ಗಳಾದ ನಯನ, ಅನುರಾಗ್, ಅನುಶ ಹಾಗೂ ಮಾರ್ಕೆಟಿಂಗ್ ವಿಭಾಗದ ಪ್ರಮುಖಾರದ ಶ್ರೀನಿಧಿ, ಅಜಿತ್, ಹೆಚ್ ಆರ್ ಮ್ಯಾನೇಜರ್ ಶಿವಪ್ರಸಾದ್ ಮತ್ತು ಟೆಕ್ನಿಕಲ್ ವಿಭಾಗದ ಶ್ರೀಬಾಶ್, ರಾಜೇಶ್, ದೀಪಕ್, ಪ್ರಕಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .ಆರ್.ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ಒಂದು ವಾರಗಳ ಕಾಲ ಈ ಅಭಿಯಾನ ನಡೆಯಲಿದ್ದು, ಒಂದು ವಾಹನದಲ್ಲಿ ಸಿಗರೇಟಿನ ಪ್ರತಿಕೃತಿಯನ್ನು ಮಾಡಿ ಅದರ ಮೇಲೆ ಸಾರ್ವಜನಿಕರಿಂದ ತಂಬಾಕು ಬಳಕೆಯನ್ನು ವಿರೋದಿಸುವುದಕ್ಕೆ ಅವರ ಸಹಿಯನ್ನು ಪಡೆಯಲಾಗುವುದು, ಸುಂದರ ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ಕನಸಿನೊಂದಿಗೆ ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ಮಂಗಳೂರಿನ ಫಳ್ನೀರ್ನಲ್ಲಿರುವ ಯುನಿಟಿ ಹಾಸ್ಪಿಟಲ್ ಹಾಗು ತ್ರಿಭುವನ್ ಹೀರೋ ಮೋಟರ್ಸ್ ಸಹ ಪ್ರಾಯೋಜಕರಾಗಿದ್ದಾರೆ.
ತಂಬಾಕಿನ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವನ್ನು ಮೂಡಿಸಿ, ತಂಬಾಕು ಮುಕ್ತ ಸಮಾಜದ ಕನಸಿನೊಂದಿಗೆ ಸುಂದರ ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ರೆಡ್ ಎಫ್ ಎಂ 92.5 ಸಂಸ್ಥೆಯು 4 ನೆ ಬಾರಿಗೆ ಹಮ್ಮಿಕೊಂಡಿರುವ ಈ “ತಂಬಾಕು ವಿರೋದಿ ಅಭಿಯಾನ”ಕ್ಕೆ ಚಾನೇಲ್ ಪಾರ್ಟನರ್ ಆಗಿ ವಿ 4 ನ್ಯೂಸ್ ಹಾಗೂ ವೆಬ್ ಪಾರ್ಟನರ್ ಆಗಿ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ಸಹಕಾರ ನೀಡಿದೆ.
ಮಂಗಳೂರು ನಗರದಾದ್ಯಂತ ಒಂದು ವಾರಗಳ ಕಾಲ ನಡೆಯಲಿರುವ ಈ ಅಭಿಯಾನಕ್ಕೆ ಸಾರ್ವಜನಿಕರು ಸಂಪೂರ್ಣ ರೀತಿಯ ಬೆಂಬಲ ನೀಡಬೇಕೆಂದು ರೆಡ್ ಎಫ್ ಎಂ ಹಾಗು ಕರ್ನಾಟಕ ಬ್ಯಾಂಕ್ ನ ಅಧಿಕಾರಿಗಳು ಈ ಸಂದರ್ಭದಲ್ಲಿ ವಿನಂತಿಸಿದ್ದಾರೆ.
ವರದಿ / ಚಿತ್ರ : ಸತೀಶ್ ಕಾಪಿಕಾಡ್ – Mobail No : 9845896141
Comments are closed.