ಕುಂದಾಪುರ: ತಾಲೂಕಿನ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವ ಶ್ರೀ ವಿಘ್ನೇಶ್ವರ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿದ್ದ ಮೂರು ಅಂಗಡಿಗಳಿಗೆ ಸೋಮವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಸೊತ್ತು ಕದ್ದೊಯ್ದಿದ್ದು ಮಂಗಳವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ 66 ರ ಸಮೀಪದಲ್ಲಿಯೇ ಇರುವ ಶ್ರೀ ವಿಘ್ನೇಶ್ವರ ಕಾಂಪ್ಲೆಕ್ಸ್ನಲ್ಲಿರುವ ಅಂಬಾ ಹೋಂ ಅಪ್ಲಾಯನ್ಸಸ್, ಸನ್ಶೈನ್ ಇಲೆಕ್ಟ್ರೀಕಲ್ಸ್, ಮತ್ತು ವಿನಯ್ ಡಿಜಿಟಲ್ ಸ್ಟುಡಿಯೋ ಅಂಗಡಿಗಳ ಶಟರ್ ಬೀಗ ಮುರಿದ ಕಳ್ಳರು ಅಪಾರ ಪ್ರಮಾಣದ ಸೊತ್ತುಗಳನ್ನು ಕದ್ದೊಯ್ದಿದ್ದು ಅಂದಾಜು 10 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಘಟನೆ ವಿವರ: ಹೆಮ್ಮಾಡಿಯಲ್ಲಿನ ವಿಘ್ನೇಶ್ವರ ಕಾಂಪ್ಲೆಕ್ಸ್ನಲ್ಲಿರುವ ಹತ್ತಾರು ಅಂಗಡಿಗಳ ಪೈಕಿ ಮೂರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಅಂಬಾ ಹೋಂ ಅಪ್ಲಾಯನ್ಸಸ್ನ ಒಳಗಿದ್ದ 25ಕ್ಕೂ ಅಧಿಕ ಮಿಕ್ಸಿ, 2 ಎಲ್.ಇ.ಡಿ. ಟಿವಿ, ವಿಗಾರ್ಡ್ ಸ್ಟಪ್ಲೇಜರ್ ಸೇರಿದಂತೆ ಇನ್ನಿತರ ಗೃಹೋಪಯೋಗಿ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಲ್ಲದೇ ಸನ್ಶೈನ್ ಇಲೆಕ್ಟ್ರೀಕಲ್ಸ್ನ ಒಳಗಿದ್ದ ವಯರ್ಗಳು, ಸ್ವಿಟ್ಚ್ಬೋರ್ಡ್ ಸೇರಿದಂತೆ ಹಲವು ವಸ್ತುಗಳನ್ನು ಮತ್ತು ಇದೇ ಅಂಗಡಿ ಸಮೀಪದ ವಿನಯ್ ಡಿಜಿಟಲ್ ಸ್ಟುಡಿಯೋ ಶಟರ್ ಬಾಗಿಲು ಒಡೆದ ಕಳ್ಳರು ಒಳಗಿದ್ದ ನಗದನ್ನು ಕದ್ದೊಯ್ದಿದ್ದಾರೆ. ಮೂರು ಅಂಗಡಿಗಳಲ್ಲಿ ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು ಹತ್ತು ಲಕ್ಷಕ್ಕೂ ಅಧಿಕವೆನ್ನಲಾಗಿದೆ.
ಮಂಗಳವಾರ ಬೆಳಿಗ್ಗೆ ಮೂರು ಅಂಗಡಿಗಳ ಶಟರ್ ಅರ್ಧಕ್ಕೆ ತೆರೆದ ಸ್ಥಿತಿಯಲ್ಲಿತ್ತು. ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಕೋಟೇಶ್ವರ ಹೆದ್ದಾರಿ ಸಮೀಪದ ಮೊಬೈಲ್ ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಮೊಬೈಲ್ ಫೋನುಗಳನ್ನು ಕದ್ದ ಘಟನೆ ನಡೆದ ಬೆನ್ನಲ್ಲೇ ಸೋಮವಾರ ತಡರಾತ್ರಿ ಹೆಮ್ಮಾಡಿಯಲ್ಲಿ ಈ ಕೃತ್ಯ ನಡೆದಿದ್ದು ಸಾರ್ವಜನಿಕರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸಿ.ಸಿ. ಟಿವಿಯಲ್ಲಿ ಸೆರೆ; ಹೆಮ್ಮಾಡಿಯ ಶ್ರೀ ವಿಘ್ನೇಶ್ವರ ಕಾಂಪ್ಲೆಕ್ಸ್ನ ಕೆಳ ಅಂತಸ್ತಿನ ಅಂಗಡಿಯ ಹೊರಭಾಗದಲ್ಲಿದ್ದ ಸಿಸಿ. ಕ್ಯಾಮೆರಾದಲ್ಲಿ ಮೂರು ಜನ ದುಷ್ಕರ್ಮಿಗಳ ಚಲನವಲನ ಹಾಗೂ ಒಂದು ಈಚರ್ ವಾಹನ ಸ್ಥಳದಲ್ಲಿ ನಿಂತ ಬಗ್ಗೆ ದಾಖಲೆಗಳು ಸಿಕ್ಕಿದ್ದು ಈ ಕೃತ್ಯ 1.45 ಗಂಟೆಯಿಂದ 3 ಗಂಟೆವರೆಗೂ ನಡೆದಿರಬಹುದೆಂದು ಅಂದಾಜಿಸಲಾಗಿದೆ.
ಪೊಲೀಸರಿಗೆ ಸವಾಲಾದ ಕಳ್ಳತನ ಪ್ರಕರಣಗಳು: ಕಳೆದೊಂದೆರಡು ವರ್ಷದಿಂದೀಚೆಗೆ ಹಲವಾರು ಕಳ್ಳತನ ಪ್ರಕರಣಗಳು ಉಡುಪಿ ಜಿಲ್ಲೆಯ ಹಲವೆಡೆ ಹಾಗೂ ಕುಂದಾಪುರ ತಾಲೂಕಿನಾದ್ಯಂತ ನಡೆದಿದೆ. ವಾರದ ಹಿಂದಷ್ಟೇ ಕೋಟೇಶ್ವರ ಮೊಬೈಲ್ ಅಂಗಡಿ, ಬಾರ್ಕೂರು ಕಾಳಿಕಾಂಬ ದೇವಸ್ಥಾನದ ಕಳ್ಳತನ ಸೇರಿದಂತೆ ಇಂದು ನಡೆದ ಕಳ್ಳತನ ಪ್ರಕರಣದ ಜಾಡು ಹಿಡಿದಿರುವ ಪೊಲಿಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಭೇಟಿ: ಕಳ್ಳತನ ನಡೆದ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಡಿಸಿಐಬಿ ಇನ್ಸ್ಪೆಕ್ಟರ್ ಜೈಶಂಕರ್, ಎಸ್ಸೈ ನಾಸೀರ್ ಹುಸೇನ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.