ಕುಂದಾಪುರ: ಗುಂಡ್ಮಿ ಸಮೀಪದ ಹದ್ದಿನಬೆಟ್ಟು ಹಾಲು ಡೈರಿ ಮುಂಭಾಗದಲ್ಲಿ, ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಚಿನ್ನದ ಅಂಗಡಿಯೊಂದರಲ್ಲಿ ಶುಕ್ರವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಂಗಡಿ ಪೂರ್ಣ ಉರಿದು ಭಸ್ಮವಾಗಿದೆ.
ಹದ್ದಿನ ಬೆಟ್ಟು ನಾಗರಾಜ ಆಚಾರ್ಯ ಮಾಲಕತ್ವದ ವಿನಾಯಕ್ ಜುವೆಲ್ಲರ್ಸ್ನಲ್ಲಿ ಶುಕ್ರವಾರ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಂಗಡಿಯ ಮೆಲ್ಭಾಗದಲ್ಲೆ ನಾಗರಾಜ ಆಚಾರ್ಯ ಅವರ ಮನೆಯಿದ್ದರು ಕೂಡ ಬೆಂಕಿ ತಗುಲಿರುವ ಬಗ್ಗೆ ಅರಿವಿಗೆ ಬರೆದೆ ಗಾಢ ನಿದ್ರೆಯಲ್ಲಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದವರಿಗೆ ಚಿನ್ನದಂಗಡಿಯಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರನ್ನು ಎಚ್ಚರಿಸಿದ್ದಾರೆ. ಅಂಗಡಿಗೆ ಬೆಂಕಿ ತಗುಲಿರುವ ಬಗ್ಗೆ ಮಾಲಿಕ ನಾಗರಾಜ ಅವರಿಗೆ ತಿಳಿಸಿ, ಕುಂದಾಪುರ ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿಸಲಾಗಿದೆ. ತಡ ರಾತ್ರಿ 2.30 ಗಂಟೆಯ ವರೆಗೆ ಅಗ್ನಿಶಾಮಕದಳದವರು ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಅಂಗಡಿಯಲ್ಲಿ ಸುಮಾರು 3 ಪವನ್ಗೂ ಮಿಕ್ಕಿ ಚಿನ್ನ, ಬೆಳ್ಳಿ ಸಾಮಗ್ರಿಗಳು, ಚಿನ್ನ ಲೇಪನ ಮಾಡಿರುವ ಆಭರಣಗಳು, 60 ಸಾವಿರಕ್ಕೂ ಮಿಕ್ಕಿದ ನಗದು ಹಣ, ಪೀಠೋಪಕರಣ ಸಹಿತ ಅಂಗಡಿ ಉರಿದು ಭಸ್ಮವಾಗಿದೆ. ಸುಮಾರು 4.5 ಲಕ್ಷ ಮೌಲ್ಯದ ಸೊತ್ತು, ಅಂಗಡಿ ಕಟ್ಟಡ ಸೇರಿದಂತೆ ಒಟ್ಟು 25 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಘಟನಾಸ್ಥಳಕ್ಕೆ ಕೋಟ ಠಾಣಾಧಿಕಾರಿ ಕೆ.ಆರ್.ನಾಯ್ಕ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.