ಕರಾವಳಿ

ಸರ್ಕಾರದಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ದಮನ ಆರೋಪ : ಸರಣಿ ಪ್ರತಿಭಟನೆಗೆ ಮುಂದಾದ ಹಿಂದೂ ಸಂಘಟನೆಗಳು

Pinterest LinkedIn Tumblr

 bajranga_dala_photo_1

ಮಂಗಳೂರು : ರಾಜ್ಯದ ಕಾಂಗ್ರೆಸ್‌ ಸರಕಾರ ಪೊಲೀಸ್‌ ಇಲಾಖೆ ಮೂಲಕ ಹಿಂದೂ ಸಂಘಟನೆ ಮತ್ತು ಅವುಗಳ ಕಾರ್ಯಕರ್ತರನ್ನು ದಮನಿಸಿ, ಅಲ್ಪಸಂಖ್ಯಾಕರನ್ನು ತುಷ್ಟೀಕರಿಸುವ ರಾಜಕೀಯ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಸಂಘಟನೆಗಳು ಆರೋಪಿಸಿದ್ದು, ಇದರ ವಿರುದ್ಧ ಮಂಗಳೂರಿನಲ್ಲಿ ಸರಣಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕು ಹಾಗೂ ಪೊಲೀಸ್‌ ಆಯುಕ್ತರನ್ನು ವರ್ಗಾವಣೆ ಮಾಡಬೇಕು ಎಂಬುದು ತಮ್ಮ ಬೇಡಿಕೆ ಎಂದು ಹಿಂದೂ ಸಂಘಟನೆಗಳ ನಾಯಕರು ತಿಳಿಸಿದ್ದಾರೆ.

ಕಾವೂರು ಎಸ್‍ಐ ಅಮಾನತಿಗೆ ರಿವೇಂಜ್ – ಮನೋಜ್ ಮೇಲೆ ಗೂಂಡಾ ಕಾಯ್ದೆ

ಕಾಂಗ್ರೆಸ್ ಸರ್ಕಾರ ಮತ್ತು ಅದರ ಏಜೆಂಟ್ ಕಮಿಷನರ್ ಹಿಂದೂ ಸಂಘಟನೆ ಕಾರ್ಯಕರ್ತ ಮನೋಜ್ ಕೋಡಿಕೆರೆ ಮೇಲೆ ಕಾವೂರು ಎಸ್‍ಐ ಅಮಾನತು ಪ್ರಕ್ರಿಯೆಯ ರಿವೇಂಜ್‍ಗಾಗಿ ಗೂಂಡಾಕಾಯ್ದೆ ಜಾರಿ ಮಾಡಿದೆ. ಗೂಂಡಾ ಕಾಯ್ದೆಗೆ ಒಳಪಡುವವನ ಮೇಲೆ ಗುರುತರವಾದ ಅಪರಾಧ ಪ್ರಕರಣಗಳು ದಾಖಲಾಗಿ ರಬೇಕು. ಆದರೆ ಮನೋಜ್ ಮೇಲೆ ಯಾವುದೇ ವೈಯಕ್ತಿಕ ಮೊಕದ್ದಮೆ ಗಳಿಲ್ಲ, ಹಿಂದುತ್ವದ ರಕ್ಷಣೆಯಲ್ಲಿದ್ದ ಮನೋಜ್ ಮೇಲೆ ಮೊಕದ್ದಮೆಗಳನ್ನು ಹಾಕಿದ್ದ ಪೊಲೀಸರು ಇದೀಗ ಗೂಂಡಾ ಕಾಯ್ದೆ ಹಾಕಿರುವುದನ್ನು ಖಂಡಿಸಿ, ಕಮಿಷನರ್ ವರ್ಗಕ್ಕೆ ಮತ್ತು ಉಸ್ತುವಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಎಲ್ಲಾ ಹಿಂದೂ ಪರ ಸಂಘಟನೆಗಳು ಒಂದಾಗಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಹಿಂದೂ ಜಾಗರಣಾ ವೇದಿಕೆ ರಾಜ್ಯ ಸಂಚಾಲಕ ಸತ್ಯಜಿತ್ ಸುರತ್ಕಲ್ ಸರಕಾರವನ್ನು ಎಚ್ಚರಿಸಿದ್ದಾರೆ.

bajranga_dala_photo_2

ಬುಧವಾರ ನಗರದಲ್ಲಿ ವಿಹಿಂಪ, ಹಿಂಜಾವೇ, ಬಜರಂಗದಳ ಸಂಘಟನೆಗಳು ಒಟ್ಟಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯಜಿತ್ ಅವರು, ಹಿಂದೆ ಹಿಂದುತ್ವದ ರಕ್ಷಣೆ ಕಾರ್ಯಕ್ಕಿಳಿದಿದ್ದ ಮನೋಜ್ ಮೇಲೆ ಮೊಕದ್ದಮೆ ಹೂಡಿದ್ದ ಪೊಲೀಸರು, ಇದೀಗ ಕಾವೂರು ಎಸ್‍ಐ ಅಮಾನತಿನ ರಿವೇಂಜ್‍ಗಾಗಿ ಕಮಿಷನರ್ ಆರ್. ಹಿತೇಂದ್ರ ಗೂಂಡಾ ಕಾಯ್ದೆ ಹಾಕುವ ಮೂಲಕ, ಸಂಘಪರಿವಾರದ ಹೋರಾ ಟದ ಕಿಚ್ಚನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ಇದನ್ನೆಲ್ಲಾ ಹಿಂದೆ ನಿಂತು ನಿರೂಪಿಸುತ್ತಿರುವುದು ಉಸ್ತುವಾರಿ ಸಚಿವ ಕಾಂಗ್ರೆಸ್‍ನ ರಮಾನಾಥ್ ರೈ. ಹಿತೇಂದ್ರ ಅವರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಹೋರಾಟದ ಕಿಚ್ಚು ಮತ್ತೆ ಮುಗಿಲು ಮುಟ್ಟಲಿದೆ. ಹಿತೇಂದ್ರರ ವರ್ಗಾವಣೆಗೆ ಆಗ್ರಹಿಸಿ ಮತ್ತು ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲೆಯ ಮೂರು ಭಾಗಗಳಲ್ಲಿ ಹಿಂದೂ ಪರ ಸಂಘಟನೆಗಳೆಲ್ಲವೂ ಒಂದಾಗಿ ಬೃಹತ್ ಪ್ರತಿಭಟನೆ ನಡೆಸ ಲಿದೆ. ಇದು ಹೋರಾಟದ ಪ್ರಥಮ ಹೆಜ್ಜೆಯಷ್ಟೇ, ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂದೆ ಉಗ್ರರೀತಿಯ ಹೋರಾಟ ನಡೆಸಬೇಕಾದೀತು ಎಂದು ಅವರು ಸರಕಾರವನ್ನು ಎಚ್ಚರಿಸಿದರು.

ಹಿಂದೂ ಸಂಘಟನೆಯ ಕಾರ್ಯಕರ್ತರಾದರೆ ಸಾಕು ಸಿಕ್ಕ ಸಿಕ್ಕ ಸುಳ್ಳು ಸುಳ್ಳು ಮೊಕದ್ದಮೆಗಳನ್ನೆಲ್ಲಾ ದಾಖಲಿಸುತ್ತಿರುವ ಕಾಂಗ್ರೆಸ್ ಸರಕಾರ ಮತ್ತು ಪೊಲೀಸರು ಹಲವು ಕಡೆಗಳಲ್ಲಿ ಪೊಲೀಸರ ಮೇಲೆಯೇ ಹಲ್ಲೆಗೈದ ಮುಸ್ಲಿಮರ ಮೇಲೆ ಯಾವ ಪ್ರಕರಣವನ್ನೂ ದಾಖಲಿಸುತ್ತಿಲ್ಲ. ಸರಕಾರದ ಮುಸ್ಲಿಮ ತುಷ್ಟೀಕರಣಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ನಾವು ಸಹಿಸುವುದಿಲ್ಲ.

bajranga_dala_photo_3

ದೇರಳಕಟ್ಟೆ ಅತ್ಯಾಚಾರ ಪ್ರಕರಣವನ್ನು ದಾಖಲಿಸಲು ಪೊಲೀಸರಿಗೆ ಹಿಂದೂ ಸಂಘಟನೆಗಳು ಪ್ರತಿಭಟಿಸಬೇಕು. ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಗುರುತರವಾದ ಅಪರಾಧ ಪ್ರಕರಣಗಳಿಲ್ಲದಿದ್ದರೂ ಗೂಂಡಾ ಕಾಯ್ದೆ ಹಾಕುತ್ತಾರೆ. ಪ್ರತಿಭಾ ಮೇಲೆ ಹಲ್ಲೆಯಾಗದಿದ್ದರೂ ಹಲ್ಲೆ ಮತ್ತು ದೌರ್ಜನ್ಯ ಕೇಸು ದಾಖಲಿಸುತ್ತಾರೆ. ಮನೋಜ್ ಮೇಲೆ ವೈಯಕ್ತಿಕ ದೂರುಗಳ್ಯಾವುವೂ ಇಲ್ಲ. ಇರುವುದು ಹಿಂದುತ್ವದ ರಕ್ಷಣೆಗಿಳಿದ ಹಲವು ಪ್ರಕರಣಗಳಿಗಷ್ಟೇ ಎಂದು ಸತ್ಯಜಿತ್ ಕಮಿಷನರ್ ಆರ್.ಹಿತೇಂದ್ರರ ನಡೆಯನ್ನು ಸತ್ಯಜಿತ್, ತೀವ್ರವಾಗಿ ಖಂಡಿಸಿದರು.

ತೀರ್ಥಹಳ್ಳಿಯ ನಂದಿತಾ ಪ್ರಕರಣವನ್ನು ಭೇದಿಸಲಾಗದ ಸರಕಾರ ಮತ್ತು ಪೊಲೀಸರು, ಪ್ರಕರಣವನ್ನು ಮುಚ್ಚಿಬಿಡುವ ತವಕದಲ್ಲಿದ್ದಾರೆ. ಸಮಗ್ರ ತನಿಖೆಗೆ ಆಗ್ರಿಹಿಸಿ ಪ್ರತಿಭಟಿಸಿದವರ ಮೇಲೆ ಮೊಕದ್ದಮೆಗಳ ಮೇಲೆ ಮೊಕದ್ದಮೆಗಳನ್ನು ಹೇರಲಾಗುತ್ತಿದೆ. ಪ್ರಕರಣವನ್ನು ಸಿಬಿಐಗೆ ವಹಿಸಲಿ. ನಮಗೆ ರಾಜ್ಯ ಸರಕಾರದ ಮೇಲೆ ನಂಬಿಕೆಯಿಲ್ಲ. ಅವರನ್ನು ಭಿನ್ನವಿಸುವುದರಲ್ಲಿ ಅರ್ಥವೂ ಇಲ್ಲ.

ಸದ್ಯ ನಾವು ಕಮಿಷನರ್ ಹಿತೇಂದ್ರರ ವರ್ಗಾವಣೆಗಾಗಿ ಮತ್ತು ಉಸ್ತುವಾರಿ ಸಚಿವ ರಮಾನಾಥ್ ರೈ ರಾಜೀನಾಮೆಗಾಗಿ ರಾಜ್ಯಪಾಲರಿಗೆ ಮನವಿ ಮಾಡಲಿದ್ದೇವೆ ಎಂದು ಸತ್ಯಜಿತ್ ಸುರತ್ಕಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಮಂಗಳೂರು ಮಹಾ ನಗರಾಧ್ಯಕ್ಷ ಕಿಶೋರ್‌ ಕುಮಾರ್‌, ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಬಜರಂಗದಳದ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌ ಮುಂತಾದವರು ಮಾತನಾಡಿದರು.

Write A Comment