ಕುಂದಾಪುರ : ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ರವರು ಸೋಮವಾರ ಹೆಮ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಡ ಕುದ್ರು – ಮುವತ್ತು ಮುಡಿ ಸಂಪರ್ಕ ಸೇತುವೆಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಸೇತುವೆಗಳು ಒಂದು ಊರಿನಿಂದ ಇನ್ನೊಂದು ಊರನ್ನು ಸಂಪರ್ಕಿಸುವ ಸಾಧನವಾಗಬೇಕು. ಈ ಊರ ಮತ್ತು ಪರಊರಿನ ಜನರನ್ನು ಹತ್ತಿರ ಸೇರಿಸುವ ಮಾರ್ಗವಾಗಬೇಕು. ಬೈಂದೂರು ಭಾಗದಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಇನ್ನು ಅನೇಕ ಜನೋಪಯೋಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಗಾಗುತ್ತದೆ. ಕನ್ನಡ ಕುದ್ರು ಮುವತ್ತು ಮುಡಿ ಸೇತುವೆ ನಿರ್ಮಾಣದಿಂದಾಗಿ ಈ ಭಾಗದ ಹಲವು ಗ್ರಾಮೀಣ ಪ್ರತಿಭೆಗಳಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶನಕ್ಕಾಗಿ ವಿಪುಲ ಅವಕಾಶಗಳು ಸಿಗಲಿದ್ದು ಈ ಭಾಗದ ಜನರು ಅದನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಈ ಭಾಗದಲ್ಲಿ ಸೇತುವೆ ನಿರ್ಮಾಣ ತರುವಾಯ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುವ ವಿಶ್ವಾಸವಿದೆ ಎಂದು ಹೇಳಿದ ಅವರು ಶೀಘ್ರದಲ್ಲಿಯೇ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಹೇಳಿದರು.
ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ನವೆಂಬರ್ ೧ ಕನ್ನಡ ರಾಜ್ಯೋತ್ಸವದ ಸಂಭ್ರಮವಾದರೆ ನವೆಂಬರ್ ೩ ಕನ್ನಡ ಕುದ್ರು ಜನರಿಗೆ ಚಾರಿತ್ರಿಕ ದಿನ. ಇಲ್ಲಿ ಸೇತುವೆ ನಿರ್ಮಾಣದ ಬಳಿಕ ನಿಜವಾದ ಸ್ವಾತಂತ್ರ್ಯ ಈ ಭಾಗದ ಜನರಿಗೆ ಸಿಕ್ಕಿದಂತಾಗಿದ್ದು ೮ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ತಾನು ಶಾಸಕನಾದ ಮೊದಲ ದಿನ ಕನ್ನಡ ಕುದ್ರು ಭಾಗದ ಜನರಿಗೆ ಸೇತುವೆ ನಿರ್ಮಾಣದ ಭರವಸೆ ನೀಡಿದ್ದು ಈಗ ಆ ಕಾಲ ಸನ್ನಿತವಾಗಿದೆ. ಕೆಲಸ ಮಾಡದೇ ಪ್ರಚಾರ ಗಿಟ್ಟಿಸುವ ಈ ಕಾಲದಲ್ಲಿ ಕಾಂಗ್ರೆಸ್ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಯಾವುದೇ ಪ್ರಚಾರವನ್ನು ಪಡೆಯದೇ ಹಿಂದುಳಿದಿದೆ. ಕಾಂಗ್ರೆಸ್ ಮಾಡುವ ಅಭಿವೃದ್ಧಿ ಕಾರ್ಯಗಳು ಇನ್ನಾದರೂ ಪ್ರಚಾರಕ್ಕೊಳಗಾಗಬೇಕಾಗಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ ಬರುವ ಬಜೆಟ್ ನಲ್ಲಿ ಬೈಂದೂರು ತಾಲೂಕು ಘೋಷಣೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ಲೋಸಮ್ ಆಸ್ಕರ್ ಫೆರ್ನಾಂಡಿಸ್, ಜಿಲ್ಲಾ ಪಂಚಾಯತ್ ಸದಸ್ಯ ಅನಂತ್ ಮವ್ವಾಡಿ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ರಾಜು ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ನ ಹಿರಿಯ ಮುಖಂಡ ಎಂ. ಎ. ಗಫೂರ್, ಗಂಗೊಳ್ಳಿ ಇಗರ್ಜಿ ಧರ್ಮಗುರು ಫಾದರ್ ಎ. ಡಿ. ಲೀಮಾ, ಕುಂದಾಪುರ ಧರ್ಮಗುರು ಫಾದರ್ ಅನಿಲ್ ಡಿಸೋಜಾ, ಸ್ಥಳೀಯ ಮುಖಂಡ ಎಡ್ರಿಕ್ ಕ್ರಾಸ್ತ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಹಿರಿಯ ಅಧೀಕ್ಷಕ ರಾಜಶೇಖರಪ್ಪ, ಗ್ರಾಮ ಪಂಚಾಯತ್ ಸದಸ್ಯ ಜೆರಾಲ್ಡ್ ಕ್ರಾಸ್ತ ಮೊದಲಾದವರು ಉಪಸ್ಥಿತರಿದ್ದರು.