ಮಂಗಳೂರು : ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನನ್ನು ಮಾರಾಕಾಸ್ತ್ರಗಳಿಂದ ಕಡಿದು ಬರ್ಭರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮಧ್ಯಾಹ್ನ 12ಗಂಟೆ ಸುಮಾರಿಗೆ ನಗರದ ಹೊರವಲಯದ ಅಡ್ಯಾರು ಸಮೀಪದ ಕಣ್ಣೂರು ಚೆಕ್ ಫೋಸ್ಟ್ ಬಳಿ ನಡೆದಿದೆ. ಕೊಲೆಯಾದ ಯುವಕನನ್ನು ಕಣ್ಣೂರ್ ನಿವಾಸಿ ಇಸ್ಮಾಯಿಲ್ ಎಂಬವರ ಮಗ ಇಜ್ಜಾ ಅಲಿಯಾಸ್ ಇಜಾಜ್ (28), ಎಂದು ಗುರುತಿಸಲಾಗಿದೆ.
ಇಂದು ಮಧ್ಯಾಹ್ನ ಇಜಾಜ್ ಸೇವಿಂಗ್ ಮಾಡಲು ಕಣ್ಣೂರು ಚೆಕ್ ಫೋಸ್ಟ್ ಸಮೀಪದ ಮೊಡ್ಲಿಂಗ್ ಹೇರ್ ಡ್ರೆಸಸ್ ಹೆರ್ಕಟ್ಟಿಂಗ್ ಸೆಲೂನ್ಗೆ ಆಗಮಿಸಿದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಆರು ಜನ ದುಷ್ಕರ್ಮಿಗಳ ತಂಡ ಏಕಾಏಕಿ ಸೆಲೂನ್ಗೆ ನುಗ್ಗಿ ಇಜಾಜ್ನನ್ನು ತಲವಾರು ಮತ್ತು ಮಚ್ಚಿನಿಂದ ಯದ್ವಾತದ್ವಾ ಕಡಿದು ಪರಾರಿಯಾಗಿದೆ. ತಂಡದಿಂದ ಹಲ್ಲೆಗೀಡಾದ ಇಜಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಏಕಾಏಕಿ ನಡೆದ ಈ ದಾಳಿಯಿಂದ ಸ್ಥಳದಲ್ಲಿದ್ದ ಜನರು ಹೆದರಿ ದಿಕ್ಕಾಪಾಲಾಗಿ ಓಡಿದ್ದಾರೆ. ಎನಾಗುತ್ತಿದೆ ಎಂದು ನೋಡುವಷ್ಟರಲ್ಲಿ ದುಷ್ಕರ್ಮಿಗಳ ತಂಡ ಸ್ಥಳದಿಂದ ಪರಾರಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಒಂದು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಇಜಾಜ್ ಹೆಸರೂ ಕೇಳಿ ಬಂದಿದ್ದು, ಇದು ಅ ಕೊಲೆಗೆ ಪ್ರತಿಕಾರ ಇರಬಹುದು ಎಂದು ಸಂಶಯಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸರು ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಘಟನೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಘಟನೆ ಬಗ್ಗೆ ವ್ಯಾಪಕ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿದ್ದು, ಮುಂದಿನ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.