ಮಂಗಳೂರು, ಅ.20: ದಮಾಮ್ನಿಂದ ರವಿವಾರ ಮುಂಜಾನೆ 3:30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕಿದ್ದ ಏರ್ ಇಂಡಿಯಾ ವಿಮಾನ ಯಾನ ಹಠಾತ್ ರದ್ದುಗೊಂಡಿದ್ದರಿಂದ ಬಂಧುಮಿತ್ರರ ಆಗಮನದ ನಿರೀಕ್ಷೆಯಲ್ಲಿ ಬೆಳಗ್ಗೆವರೆಗೆ ನಿಲ್ದಾಣದಲ್ಲಿ ಕಾದಿದ್ದ ನೂರಾರು ಮಂದಿ ಏರ್ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಮನೆಗೆ ಮರಳಿದ ಘಟನೆ ನಡೆದಿದೆ.
ದಮಾಮ್ನಿಂದ ಹೊರಟ ಏರ್ ಇಂಡಿಯಾ ವಿಮಾನ ರವಿವಾರ ಮುಂಜಾನೆ 3:30ಕ್ಕೆ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕಿತ್ತು. ಈ ಹಿನ್ನೆಲೆ ಯಲ್ಲಿ ತಮ್ಮ ಬಂಧುಗಳನ್ನು ಸ್ವಾಗತಿಸುವುದಕ್ಕಾಗಿ ನೂರಾರು ಮಂದಿ ವಿಮಾನ ನಿಲ್ದಾಣದಲ್ಲಿ ರಾತ್ರಿಯಿಂದಲೇ ಕಾದು ಕುಳಿತಿದ್ದರು. ಬೆಳಗ್ಗೆಯಾದರೂ ವಿಮಾನ ಬರಲೇ ಇಲ್ಲ.
ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಈ ವಿಮಾನ ಯಾನ ರಾತ್ರಿಯೇ ರದ್ದಾಗಿತ್ತು. ಆದರೆ ಈ ಬಗ್ಗೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂಧುಮಿತ್ರರಿಗೆ ಕಾದಿದ್ದವರಿಗೆ ಏರ್ ಇಂಡಿಯಾ ಸಂಸ್ಥೆಯವರು ಯಾವುದೇ ಮಾಹಿತಿ ನೀಡಲೇ ಇಲ್ಲ. ಇದರಿಂದಾಗಿ ಅವರು ಮುಂಜಾನೆಯವರೆಗೂ ವಿಮಾನದ ನಿರೀಕ್ಷೆಯಲ್ಲಿ ಕಾದು ಕುಳಿತು ನಿರಾಶರಾದರು. ‘‘ದಮಾಮ್ನಿಂದ ಏರ್ ಇಂಡಿಯಾದ ವಿಮಾನದಲ್ಲಿ ಬರ ಬೇಕಿದ್ದ ಪ್ರಯಾಣಿಕರಿಗೆ ಅಲ್ಲಿಯ ಹೊಟೇಲ್ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಆದರೆ ಮರು ಪ್ರಯಾಣ ವ್ಯವಸ್ಥೆ ಯಾವಾಗ ಆಗಲಿದೆ ಎಂಬ ಬಗ್ಗೆ ಏರ್ ಇಂಡಿಯಾದವರು ರವಿವಾರ ರಾತ್ರಿಯವರೆಗೂ ಯಾವುದೇ ಮಾಹಿತಿ ನೀಡಿಲ್ಲ’’ ಎಂದು ದಮಾಮ್ನಿಂದ ಪ್ರಯಾಣಿಕರು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.