ಮಂಗಳೂರು,ಅ.11: ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನೆರೆಯಲ್ಲಿ ಹಾನಿಗೊಳಗಾದವರ ಪುನರ್ವಸತಿಗಾಗಿ ನಿಟ್ಟೆ ಸಮೂಹ ವಿದ್ಯಾ ಸಂಸ್ಥೆಯ ಮಂಗಳೂರು, ಬೆಂಗಳೂರು ಹಾಗೂ ನಿಟ್ಟೆ ಕ್ಯಾಂಪಸ್ಸುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಸಂಗ್ರಹವಾದ ಒಟ್ಟು ಮೊತ್ತ ರೂಪಾಯಿ ಇಪ್ಪತೈದು ಲಕ್ಷದ ಡಿಮಾಂಡ್ ಡ್ರಾಫ್ಟ್ ಅನ್ನು ಸಂಸ್ಥೆಯ ಪರವಾಗಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಎಸ್. ರಮಾನಂದ ಶೆಟ್ಟಿಯವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀಯುತ ಎ.ಬಿ. ಇಬ್ರಾಹಿಂ ಅವರ ಮುಖಾಂತರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಸಚಿವರಾದ ಡಾ|| ಎಮ್.ಎಸ್. ಮೂಡಿತ್ತಾಯ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ|| ಸತೀಶ್ ಕುಮಾರ್ ಭಂಡಾರಿ ಹಾಗೂ ನಿಟ್ಟೆ ವಿಶ್ವ ವಿದ್ಯಾನಿಲಯದ ಜಮ್ಮು ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀಯುತ ಎನ್.ವಿ. ಹೆಗ್ಡೆಯವರನ್ನು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರಲ್ಲದೆ ಈ ಕಾರ್ಯ ಶ್ಲಾಘನೀಯ ಹಾಗೂ ಇತರರಿಗೆ ಮಾದರಿ ಎಂದು ತಿಳಿಸಿದರು.