ಮಂಗಳೂರು, ಅ.11: ಇತ್ತೀಚಿನ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತೆ ಹಾಗೂ ಭಾರತದ ಕಬಡ್ಡಿ ತಂಡದ ಹಿರಿಯ ಆಟಗಾರ್ತಿಯೂ ಆಗಿರುವ ಮಮತ ಪೂಜಾರಿ ಅವರು ಏಷ್ಯನ್ ಗೇಮ್ಸ್ ವಿಜಯದ ಬಳಿಕ ಪ್ರಥಮ ಬಾರಿಗೆ ಕಾರ್ಕಳದ ತಮ್ಮ ತವರೂರಿಗೆ ತೆರಳಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಅಭಿನಂದನೆಯನ್ನು ಸ್ವೀಕರಿಸಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರಕಾರದಿಂದ ಸೂಕ್ತ ಸ್ಥಾನಮಾನ, ಪ್ರೋತ್ಸಾಹಗಳು ಸಿಗದ ಕಾರಣ ಅಥ್ಲೀಟ್ಗಳು ಬೇರೆ ರಾಜ್ಯಗಳಿಂದ ಸ್ಪರ್ಧಿಸುವ ಮನಸ್ಥಿತಿಗೆ ಬಂದಿರುವುದು ನಿಜಕ್ಕೂ ದು:ಖದ ಸಂಗತಿ. ಒಂದುವೇಳೆ ಸರಕಾರದಿಂದ ಪ್ರೋತ್ಸಾಹಗಳು ಅಥ್ಲೀಟ್ ಗಳಿಗೆ ಸಿಕ್ಕಿದರೆ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಮಾನ ನಿಲ್ದಾಣದಲ್ಲಿ ಸರಳ ಸ್ವಾಗತ:
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು, ಅಭಿಮಾನಿಗಳಿಂದ ಸರಳವಾಗಿ ಭಾರತೀಯ ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿಯವರನ್ನು ಸ್ವಾಗತಿಸಲಾ ಯಿತು. ಪತಿ ಅಭಿಷೇಕ್ ಜೊತೆ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದ ಮಮತಾ ಪೂಜಾರಿಯನ್ನು ತಂದೆ ಬೋಜ ಪೂಜಾರಿ ಮತ್ತು ತಾಯಿ ಕಿಟ್ಟು ಪೂಜಾರ್ತಿಯ ಜೊತೆಗೆ ಬಾಲ್ಯದಿಂದಲೇ ತಂಗಿಯ ಕ್ರೀಡಾಸ್ಫೂರ್ತಿಗೆ ಬೆನ್ನೆಲುಬಾಗಿ ನಿಂತಿರುವ ಆಕೆಯ ಹಿರಿಯ ಸಹೋದರ ವಿಶ್ವನಾಥ್ ಹಾಗೂ ಅವರ ಪತ್ನಿ ಮಮತಾ ಅವರು ಅಭಿಮಾನದೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ತಾಯಿ ಕಿಟ್ಟು ಪೂಜಾರ್ತಿ ಮಗಳನ್ನು ಸಿಹಿಯಪ್ಪುಗೆಯ ಜೊತೆಗೆ ತಿಲಕವಿಟ್ಟು ಆರತಿ ಬೆಳಗಿ ಸ್ವಾಗತಿಸಿದರು. ಮಗಳಿಗಾಗಿ ಆಕೆಯ ಇಷ್ಟದ ಸಿಹಿ ತಿಂಡಿ ಹಾಗೂ ಮೀನಿನಡುಗೆ ಯನ್ನು ಮನೆಯಲ್ಲಿ ಮಾಡಿಟ್ಟಿರುವುದಾಗಿ ತಾಯಿ ಕಿಟ್ಟುಪೂಜಾರ್ತಿ ಈ ಸಂದರ್ಭ ಪ್ರತಿಕ್ರಿಯಿಸಿದರು.
ಅಥ್ಲೀಟ್ಗಳಿಗೆ 25 ಲಕ್ಷ ರೂ. ನೀಡುವ ಭರವಸೆ:
ಆರಂಭದಲ್ಲಿ ನಮಗೆ 25 ಲಕ್ಷ ರೂ. ಬಹುಮಾನವನ್ನು ರಾಜ್ಯ ಸರಕಾರದಿಂದ ಘೋಷಣೆ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಮಾಧ್ಯಮಗಳಲ್ಲಿ ರಾಜ್ಯದ ಚಿನ್ನದ ಪದಕ ವಿಜೇತ ಅಥ್ಲೀಟ್ಗಳಿಗೆ 10 ಲಕ್ಷ ರೂ. ಎಂದು ಬಂದಿತ್ತು. ಆದರೆ ಅದು ತಪ್ಪಾಗಿ ಹೇಳಿದ್ದು. ತಲಾ 25 ಲಕ್ಷ ರೂ. ಬಜೆಟ್ ಇದೆ. ಅದನ್ನೇ ನೀಡಲಾಗುವುದು ಎಂದು ಒಲಿಂಪಿಕ್ ಅಸೋಸಿ ಯೇಶನ್ನ ಗೋವಿಂದ ರಾಜು ಹೇಳಿರುವು ದಲ್ಲದೆ, ರಾಜ್ಯ ಬಿಟ್ಟು ಹೋಗುವುದು ಬೇಡ, ಎಲ್ಲಾ ರೀತಿಯ ಸೌಕರ್ಯ ನೀಡುವುದಾಗಿ ಅವರು ಅಥ್ಲೀಟ್ಗಳಿಗೆ ಸಮಾಧಾನ ಮಾಡಿ ದ್ದಾರೆ. 10 ಲಕ್ಷ ರೂ. ಎಂದರೆ ನಿಜಕ್ಕೂ ಕಡಿಮೆ. ಬೇರೆ ರಾಜ್ಯದವರೆಲ್ಲಾ 1 ಕೋಟಿ, 2 ಕೋಟಿ ರೂ.ಗಳನ್ನು ನೀಡುವಾಗ ನಮ್ಮ ಸರಕಾರ 10 ಲಕ್ಷ ರೂ. ನೀಡುವುದು ಕಡಿಮೆಯೇ. ಕಳೆದ ಬಾರಿಯೂ 10 ಲಕ್ಷ ರೂ.ಗಳನ್ನೇ ನೀಡಲಾಗಿತ್ತು. 2010 ಏಷ್ಯನ್ ಗೇಮ್ಸ್ನಲ್ಲಿ 10 ಲಕ್ಷ ರೂ. ನೀಡಲಾಗಿತ್ತು. ವಿಶ್ವಕಪ್ ಜಯಿಸಿದ ಸಂದರ್ಭ ಬರೀ 5 ಲಕ್ಷ ರೂ. ನೀಡಲಾಗಿತ್ತು ಎಂದು ಮಮತಾ ಪೂಜಾರಿ ಹೇಳಿದರು.
10 ನನ್ನ ಲಕ್ಕಿ ನಂಬರ್!
ಇದು ನನ್ನ 10ನೆ ಅಂತಾರಾಷ್ಟ್ರೀಯ ಸ್ಪರ್ಧೆ. 10 ನನ್ನ ಅದೃಷ್ಟ ಸಂಖ್ಯೆ. 2006ರಿಂದ ನಿರಂತರವಾಗಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಆಡುತ್ತಿದ್ದೇನೆ. ವಿಶ್ವಕಪ್ ಜಯಿಸಿದ ಸಂದರ್ಭ ನಾನು ನಾಯಕಿಯಾಗಿದ್ದೆ. ಏಷ್ಯನ್ ಗೇಮ್ಸ್ ನಲ್ಲೂ ಆಡುತ್ತಿದ್ದೇನೆ. ನಮಗೆ ನಿರಂತರವಾಗಿ ಶಿಬಿರಗಳ ಮೂಲಕ ತರಬೇತಿ ನೀಡಲಾಗುತ್ತದೆ. ಶಿಬಿರಗಳಲ್ಲಿ ನಮ್ಮ ದೇಹತೂಕ ಹೆಚ್ಚದಂತೆ ಜಾಗರೂಕತೆ ವಹಿಸಲಾಗುತ್ತದೆ. ನನ್ನ ದೇಹದಲ್ಲಿ ಯಾವುದೇ ಗಾಯವಿಲ್ಲ. ಅದೇ ನಮ್ಮ ದೈಹಿಕ ಸದೃಢತೆಯ ಗುಟ್ಟು ಎಂದು ಮಮತಾ ಪೂಜಾರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತಿ, ಅತ್ತೆ-ಮಾವರ ಸಂಪೂರ್ಣ ಬೆಂಬಲ:
‘ಮದುವೆ ಆಗುವ ಸಂದರ್ಭ ನಾನು ಕಬಡ್ಡಿ ಮುಂದುವರಿಸುತ್ತೇನೆಂದು ಅಂದುಕೊಂಡಿರಲಿಲ್ಲ. ಆದರೆ ನನ್ನ ಪತಿ ಹಾಗೂ ಅತ್ತೆ ಮಾವನವರೂ ನನಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಇಷ್ಟು ಎತ್ತರಕ್ಕೆ ಏರಿ ಅದನ್ನು ಯಾವುದೇ ಕಾರಣಕ್ಕೂ ಬಿಡಬಾರದೆಂದು ಪ್ರೋತ್ಸಾಹಿಸಿದ್ದಾರೆ. ಮದುವೆ ಆದ ಮೇಲೆ ಕಬಡ್ಡಿಯಲ್ಲಿ ಮುಂದುವರಿಯುವ ಅಭಿಲಾಷೆ ಇತ್ತು. ಆದರೆ ಪತಿ ಮನೆಯವರು ಪ್ರೋತ್ಸಾಹಿಸುತ್ತಾರೆಂಬ ನಿರೀಕ್ಷೆ ಇರಲಿಲ್ಲ. ಮದುವೆ ಆದ ಬಳಿಕ ಗಂಡನ ಅಭಿ ಪ್ರಾಯದ ಮೇಲೆ ಎಲ್ಲವೂ ನಿರ್ಧರಿಸಲ್ಪಡುತ್ತದೆ. ಆದರೆ ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಪತಿ ಹಾಗೂ ಮನೆಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಅರ್ಜುನ’ ಪ್ರಶಸ್ತಿ ಬಳಿಕ ತವರಿಗೆ ಪ್ರಥಮ ಭೇಟಿ ‘ಅರ್ಜುನ’ ಪ್ರಶಸ್ತಿ ಪಡೆದ ಬಳಿಕ ನನ್ನ ತವರೂರಿಗೆ ಪ್ರಥಮ ಭೇಟಿ ಇದಾಗಿದ್ದು, ತುಂಬಾ ಖುಷಿ ಹಾಗೂ ಹೆಮ್ಮೆಯಾಗುತ್ತಿದೆ.
‘ಅರ್ಜುನ’ ಪ್ರಶಸ್ತಿ ಸಿಕ್ಕಿದ ಕೂಡಲೇ ಏಷ್ಯನ್ ಗೇಮ್ಸ್ ಶಿಬಿರಕ್ಕಾಗಿ ನಾನು ತೆರಳಬೇಕಾದ್ದರಿಂದ ಮನೆಗೆ ಬರಲು ಆಗಲಿಲ್ಲ. ಇದೀಗ ಡಬ್ಬಲ್ ಖುಷಿಯಿಂದ ಬರುತ್ತಿದ್ದೇನೆ. ಕ್ರೀಡಾಪಟುವಿಗೆ ‘ಅರ್ಜುನ’ ಪ್ರಶಸ್ತಿ ಶ್ರೇಷ್ಠ. ಅದನ್ನು ಪಡೆ ಯುವುದು ಸುಲಭದ ಮಾತಲ್ಲ. ಅದು ನನಗೆ ದೊರಕಿರುವುದು ತುಂಬಾ ಖುಷಿಯಾಗಿದೆ. ನನ್ನ ಶಾಲೆಯಿಂದ ಹಿಡಿದು ನನ್ನ ಕುಟುಂಬ ಸೇರಿ ದಂತೆ ನಾನು ಈ ಹಂತಕ್ಕೆ ಬೆಳೆಯುವಲ್ಲಿ ಸಹಕರಿ ಸಿದವರಿಗೆ ಎಲ್ಲರಿಗೂ ಈ ಸಂದರ್ಭ ಕೃತಜ್ಞತೆ ಸಲ್ಲಿಸುತ್ತಿದ್ದೇನೆ’ ಎಂದವರು ಎಲ್ಲರನ್ನು ಸ್ಮರಿಸಿಕೊಂಡರು.