ಕುಂದಾಪುರ: ನೂರಾರು ವರ್ಷಗಳ ಇತಿಹಾಸವುಳ್ಳ ಹುಲಿವೇಷ ಕುಣಿತವು ಇತ್ತೀಚಿನ ದಿನಗಳಲ್ಲಿ ಕುಂದಾಪುರ ಭಾಗದಲ್ಲಿ ವಿರಳವಾಗುತ್ತಿದ್ದು ಈ ಕಲೆಗೆ ಪ್ರೋತ್ಸಾಹಕರು ಇಲ್ಲದೇ ಕಲೆ ನಶಿಸುತ್ತಿರುವುದು ಕೆಲವು ವರ್ಷಗಳಿಂದ ಕಂಡುಬರುತ್ತಿದೆ. ಈ ಹುಲಿವೇಷ ಕುಣಿತ ಕಲೆಯನ್ನು ಪ್ರೋತ್ಸಾಹಿಸುವ ಹಾಗೂ ಬೆಳೆಸುವ ಪ್ರಯತ್ನವನ್ನು ಮಾಡುವ ಉದ್ದೇಶ ಹಾಗೂ ಈ ಮೂಲಕವಾಗಿ ಮುಂದಿನ ದಿನಗಳಲ್ಲಿ ಈ ಜನಪದ ಕಲೆಯು ಚಿರಸ್ಥಾಯಿಯಾಗುವಂತೆ ಮಾಡಲು ಹಲವು ಸಂಘಟನೆಗಳು ಕೈಜೋಡಿಸಿದೆ.
ಪಾರಂಪರಿಕ ವಾದನಗಳಾದ ನಾದಸ್ವರ, ತಾಸ್ಮಾರ್, ಡೋಲು ಮುಂತಾದುವುಗಳಿಂದ ನುಡಿಸಲ್ಪಡುವ ಸುಶ್ರಾವ್ಯವಾದ ಕುಂದಾಪುರ ಹುಲಿವೇಷದ ವಿಶಿಷ್ಠ ಶೈಲಿಯ ಜನಪದ ಸ್ವರ ಸಂಯೋಜನೆ, ಜೋಕರ್ ಹಾಗೂ ಗೊಂಡೆಯೊಂದಿಗೆ ಹುಲಿವೇಷಗಳನ್ನೊಳಗೊಂಡ ಕುಣಿತದ ತಂಡ ಕುಂದಾಪುರದ ಬೀದಿಬೀದಿಗಳಲ್ಲಿ ನರ್ತಿಸಿ ಜನರ ಮನಸ್ಸನ್ನು ಸೂರೆಗೊಳ್ಳುತ್ತಿದೆ.
ಹುಲಿಗಳ ಕುಣಿತ: ಕುಂದಾಪುರ ನಗರದ ಹೃದಯಭಾಗವಾದ ಸಾಯಿ ಸೆಂಟರ್ ವಾಣಿಜ್ಯ ಸಂಕೀರ್ಣದ ಎದುರುಗಡೆ ನೂರಾರು ಜನರು ಸೇರಿದ್ದರು. ಕುಂದಾಪುರ ಕಲಾಕ್ಷೇತ್ರ ಸಂಸ್ಥೆಯ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಉಪಾಧ್ಯಕ್ಷ ಪ್ರವೀಣ ಕುಮಾರ್ ಟಿ., ರಾಜೇಶ ಕಾವೇರಿ, ರಾಧಾಕೃಷ್ಣ ಅವರು ಗೊಂಡೆಗಳಿಗೆ ಬಟ್ಟೆಗಳನ್ನು ಕಟ್ಟುವ ಮೂಲಕವಾಗಿ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ವೇಳೆ ನಾದಸ್ವರ, ಡೋಲುಗಳೊಂದಿಗೆ ಹೆಜ್ಜೆಹಾಕುತ್ತಾ ಆಗಮಿಸಿದ ಮೂರು ಹುಲಿಗಳು ಅಬ್ಬರದಿಂದ ಕುಣಿದು ನೆರೆದ ಪ್ರೇಕ್ಷಕರನ್ನು ರಂಜಿಸಿದವು. ಪ್ರೇಕ್ಷಕರು ಇಟ್ಟ ಹಣವನ್ನು ಕೈ ಸಹಾಯವಿಲ್ಲದೇ ಬಾಯಿಯ ಮೂಲಕವೇ ತೆಗೆಯುವ ಹಾಗೂ ತಂಪು ಪಾನೀಯದ ಬಾಟಲಿಯ ಮುಚ್ಚಳವನ್ನು ಕೈ ಸಹಾಯವಿಲ್ಲದೇ ಬಾಯಿಯಿಂದ ತೆಗೆದು ಪಾನೀಯ ಕುಡಿಯುವ ಹುಲಿಯ ಸಾಹಸವಂತೂ ನೆರೆದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ಕುಣಿತಕ್ಕೂ ಮೊದಲು ಕುಂದಾಪುದ ಶಾರದೋತ್ಸವ ಜರುಗುವಲ್ಲಿ ಹುಲಿಗಳು ಮುಹೂರ್ತದ ನೃತ್ಯ ಮಾಡಿ ಪೂಜೆ ಸಲ್ಲಿಸಿದರು.
ಕುಂದಾಪುರ ರಕ್ತೇಶ್ವರಿ ದೇವಸ್ಥಾನ: ಇಲ್ಲಿನ ಪೊಲೀಸ್ ಲೈನ್ನಲ್ಲಿರು ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ನವರಾತ್ರಿ ಪ್ರಯುಕ್ತ ವಿಶೇಷ ಮೆರವಣಿಗೆಯಿತ್ತು. ಇಲ್ಲಿಗೆ ಆಗಮಿಸಿದ ಉಡುಪಿಯ ಹುಲಿವೇಷದ ತಂಡ ಸತತ ೨ತಾಸುಗಳ ಕಾಲ ನೆರೆದವರನ್ನು ಆಕರ್ಷಿಸಿತ್ತು.