ಕುಂದಾಪುರ: ಶಿರೂರು ಕಾಲೇಜು ವಿದ್ಯಾರ್ಥಿನಿ ಆಲಂದೂರಿನ ರತ್ನಾ ಕೊಠಾರಿ ಅನುಮಾನಾಸ್ಪದ ಸಾವು ನಡೆದು ತಿಂಗಳುಗಳೇ ಉರುಳಿದರೂ ಘಟನೆಯ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ.
ಬಡ ಕುಟುಂಬಕ್ಕಾದ ಅನ್ಯಾಯವನ್ನು ತನ್ನಿಂದಾದಷ್ಟರ ಮಟ್ಟಿಗೆ ಸರಿಪಡಿಸ ಬೇಕೆಂದು ಯಾವೂದೇ ಪ್ರಚಾರ ಬಯಸದೆ ಮುಂದೆ ಬಂದಿರುವವರು ಪ್ರತೀಷ್ಠಿತ ಗ್ರೀನ್ವ್ಯಾಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸೈಯದ್ ಅಬ್ದುಲ್ ಖಾದಿರ್ ಬಾಶು. ಇವರು ಶಾಲಾ ವಿದ್ಯಾರ್ಥಿಗಳೊಂದಿಗೆ ರತ್ನಾ ಕೊಠಾರಿಯ ಮನೆಗೆ ಭೇಟಿನೀಡಿ ಗ್ರೀನ್ವ್ಯಾಲಿ ಶಾಲಾ ವತಿಯಿಂದ ೫೦ ಸಾವಿರ ರೂ. ಆರ್ಥಿಕ ನೆರವು ನೀಡಿದರು. ಅಲ್ಲದೇ ರತ್ನಾಳ ಸಹೋದರ ರಾಜು ಕೊಠಾರಿ ಅವರಿಗೆ ತಮ್ಮ ಗ್ರೀನ್ವ್ಯಾಲಿ ಶಾಲೆಯಲ್ಲಿ ತತಕ್ಷಣ ಕರ್ತವ್ಯಕ್ಕೆ ಹಾಜರಗುವಂತೆ ಖಾಯಂ ಉದ್ಯೋಗದ ಆದೇಶ ಪತ್ರವನ್ನು ಸಹ ನೀಡಿದರು.
ಬಳಿಕ ಮಾತನಾಡಿದ ಬಾಶು, ಬಡಕುಟುಂಬದಲ್ಲಾದ ಈ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಸಾವಿನ ಸ್ಪಷ್ಟ ಕಾರಣ ಶೀಘ್ರವಾಗಿ ಬಹಿರಂಗಗೊಳ್ಳುವ ಮೂಲಕ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಬೇಕಾಗಿದೆ ಕುಟುಂಬಕ್ಕೆ ಶಾಶ್ವತ ಸಹಕಾರ ನೀಡುವ ಉದ್ದೇಶದಿಂದ ಸಹೋದರನಿಗೆ ಉದ್ಯೊಗ ನೀಡಲಾಗಿದೆ ಎಂದರು.